ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಲಿಂಗಸುಗೂರು ಪಟ್ಟಣದಲ್ಲಿ ಅನೇಕ ದಿನಗಳಿಂದ ನಕಲಿ ರಸಗೊಬ್ಬರ, ಕ್ರಿಮಿಕೀಟನಾಶಕ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ರೈತರು ನೂರಾರು ಸಲ ದೂರು ನೀಡಿದರೂ ಅಧಿಕಾರಿ ವರ್ಗ ಅಂಗಡಿಗಳ ಪ್ರಭಾವಕ್ಕೆ ಮಣಿದು ಯಾವುದೇ ಕ್ರಮ ಜರುಗಿಸದೇ ಮೂಕ ಪ್ರೇಕ್ಷಕವಾಗಿದೆ. ಪಟ್ಟಣದಲ್ಲಿ ಜಿಪಂ ಕಚೇರಿ ಬಳಿಯ ದುರ್ಗಾ ಭವಾನಿ ಟ್ರೇಡರ್ಸ್ನಲ್ಲಿ ಲಕ್ಷಾಂತರ ರುಪಾಯಿ ಬೆಲೆ ಬಾಳುವ ಅವಧಿ ಮೀರಿದ ಕ್ರಿಮಿಕೀಟನಾಶಕ ಮಾರಾಟ ಮಾಡುವುದು ರೈತರೇ ಪತ್ತೆ ಮಾಡಿದ್ದಾರೆ.
ಇನ್ನೂ ದುರ್ಗಾ ಭವಾನಿ ಟ್ರೇಡರ್ಸ್ ಮಾಲೀಕರು ಕ್ರಿಮಿ ಕೀಟನಾಶಕ, ಬಿತ್ತನೆ ಬೀಜ ಪರವಾನಗಿ ಪಡೆದಿದ್ದಾರೆ. ಆದರೆ ರಸಗೊಬ್ಬರ ಮಾರಾಟದ ಕುರಿತು ಲೈಸೆನ್ಸ್ ಪಡೆದಿಲ್ಲ. ಆದರೂ ನಕಲಿ ಕಂಪನಿಯ 10-26, 17-17, 20-20, ಕಾಂಪ್ಲೆಕ್ಸ್ ಸೇರಿದಂತೆ ರಸಗೊಬ್ಬರಗಳನ್ನು ಮಾರಾಟ ಮಾಡುವ ದಂಧೆ ನಡೆದಿದೆ. 300ಕ್ಕೂ ಅಧಿಕ ಚೀಲಗಳ ನಕಲಿ ರಸಗೊಬ್ಬರ ಮಳಿಗೆಯಲ್ಲಿ ಸಂಗ್ರಹ ಮಾಡಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದರು.ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರು ಗ್ರಾಮದಲ್ಲಿ ದುರ್ಗಾ ಭವಾನಿ ಟ್ರೇರ್ಸ್ನವರು ಅಕ್ರಮವಾಗಿ ಸಂಗ್ರಹಿಸಿ ವಿವಿಧ ಬಗೆಯ 300ಕ್ಕೂ ಅಧಿಕ ಚೀಲ ರಸಗೊಬ್ಬರ ಹಾಗೂ ಅವಧಿ ಮೀರಿದ ವಿವಿಧ ಬಗೆಯ ಕ್ರಿಮಿಕೀಟನಾಶಕ ಪತ್ತೆಯಾಗಿದೆ. ಅಕ್ರಮ ದಂಧೆಯ ಜಾಲವನ್ನು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಪತ್ತೆ ಮಾಡಿ ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅವಧಿ ಮೀರಿದ ಕ್ರಿಮಿನಾಶಕ ಹಾಗೂ ಪರವಾನಗಿ ಪಡೆಯದೇ ನಕಲಿ ರಸಗೊಬ್ಬರ ಮಾರಾಟ ದಂಧೆಯ ಮಳಿಗೆಗೆ ದಾಳಿಗೆ ತೆರಳಿದಾಗ ಮಳಿಗೆ ಮುಚ್ಚಿತ್ತು. ಇದರಿಂದ ಮಳಿಗೆ ಸೀಜ್ ಮಾಡಲಾಗಿದೆ. ಸೀಜ್ ಮಾಡಿದ ಮಳಿಗೆಯನ್ನು ತೆರೆದು ಪರಿಶೀಲನೆ ಮಾಡಿ ಅಕ್ರಮ ಕಂಡು ಬಂದರೆ ಸೂಕ್ರ ಕ್ರಮವಹಿಸಲಾಗುವುದು.
ಜಿಲ್ಲೆಯಲ್ಲಿ ನಕಲಿ ರಸಗೊಬ್ಬರ, ಕ್ರಿಮಿಕೀಟನಾಶಕ ದಂಧೆ ಹಲವು ದಿನಗಳಿಂದ ನಡೆಯುತ್ತಿದೆ. ರೈತರಿಗೆ ಅಧಿಕೃತ ರಶೀದಿ ನೀಡದೇ ಮಾರಾಟ ಮಾಡುತ್ತಾರೆ. ಈ ಅಕ್ರಮ ದಂಧೆಯಲ್ಲಿ ಕೃಷಿ ಇಲಾಖೆ, ಜಾಗೃತ ದಳ ಶಾಮೀಲು ಇದೆ. ಬರದಿಂದ ತತ್ತರಿಸಿರುವ ರೈತರಿಗೆ ಮೋಸ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಇಲ್ಲದೇ ಹೋದರೇ ರೈತರಿಗೆ ಕಾನೂನು ಕೈಗೆತ್ತಿಕೊಳ್ಳುತ್ತೇವೆ.