ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ರಾಗಿ ತಳಿ ಎಂ.ಎಲ್-322ನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಬುಳ್ಳೇನಹಳ್ಳಿ ಗ್ರಾಮದಲ್ಲಿ ಪ್ರಾತ್ಯಕ್ಷಿಕೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ರಾಗಿ ತಳಿ ಎಂ.ಎಲ್-322ನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಬುಳ್ಳೇನಹಳ್ಳಿ ಗ್ರಾಮದಲ್ಲಿ ಪ್ರಾತ್ಯಕ್ಷಿಕೆ ಮಾಡಲಾಯಿತು. ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ತಸ್ಮಿಯಾ ಕೌಸರ್ ಮಾತನಾಡಿ, ಎಂ.ಎಲ್-322 ತಳಿಯು ತಡವಾದ ಮುಂಗಾರಿಗೆ ಸೂಕ್ತವಾಗಿದ್ದು ಆಗಸ್ಟ್ ತಿಂಗಳಿನಿಂದ ಸೆ.15 ರವರೆಗೆ ಬಿತ್ತನೆ ಮಾಡಬಹುದು. ಈ ತಳಿಯು ಮಧ್ಯಮ ಅವಧಿ ತಳಿಯಾಗಿದ್ದು 105-110 ದಿನಕ್ಕೆ ಕಟಾವಿಗೆ ಬರುತ್ತದೆ. 15-20 ದಿನದವರೆಗೂ ಮಳೆ ಇಲ್ಲದೆ ಶುಷ್ಕ ಇದ್ದರು ಬರ ಸಹಿಷ್ಣತೆ ಹಾಗೂ ಸ್ವಲ್ಪ ಮಟ್ಟಿಗೆ ಬೆಂಕಿ ರೋಗ ನಿರೋಧಕತೆ ಹೊಂದಿರುತ್ತದೆ. ಇಳುವರಿಯು ಎಕರೆಗೆ 10-12 ಕ್ವಿಂಟಾಲ್ ಖುಷ್ಕಿ ಬೆಳೆಯಾಗಿ ಬೆಳೆಯುವುದರಿಂದ ಹಾಗೂ 15-20 ಕ್ವಿಂಟಾಲ್ ನೀರಾವರಿ ಬೆಳೆಯಾಗಿ ಬೆಳೆಯುವುದರಿಂದ ಪಡೆಯಬಹುದು. ರಾಗಿ ಬಿತ್ತನೆ ಮಾಡುವ 3-4 ವಾರಗಳ ಮುಂಚಿತವಾಗಿ ಎಕರೆಗೆ 3 ಟನ್ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಬೇಕು. ಒಂದು ಎಕರೆ ಪ್ರದೇಶಕ್ಕೆ 10 ಕೆ.ಜಿ ರಾಗಿ ಬೀಜ ಬೇಕಾಗುತ್ತದೆ. ಪ್ರತಿ ಕಿ.ಗ್ರಾಂ. ಬಿತ್ತನೆ ಬೇಜಕ್ಕೆ 2 ಗ್ರಾಂ ಕಾರ್ಬನ್ಡೈಜಿಂ ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಬೆಂಕಿ ರೋಗವನ್ನು ತಡೆಗಟ್ಟಬಹುದು. ರಸಗೊಬ್ಬರಗಳಾದ ಸಾರಜನಕ, ರಂಜಕ 15 ಕಿ.ಗ್ರಾಂ, ಪೋಟ್ಯಾಷ್ 16 ಕಿ.ಗ್ರಾಂ ಹಾಗೂ ಲಘು ಪೋಷಕಾಂಶಗಳಾದ 5 ಕಿ.ಗ್ರಾಂ ಸತುವಿನ ಸಲ್ಫೇಟ್, 4 ಕಿ.ಗ್ರಾಂ ಬೋರಾಕ್ಸ್ ಬಿತ್ತನೆ ಸಮಯದಲ್ಲೇ ಒದಗಿಸುವುದರಿಂದ ಹೆಚ್ಚು ಇಳುವರಿಯನ್ನು ಪಡೆಯಬಹುದು. ನಮ್ಮ ತುಮಕೂರು ಜಿಲ್ಲೆಯಾದ್ಯಂತ ರಾಗಿ ಬೆಳೆಯುವ ರೈತರಿಗೆ ಅತೀ ಹೆಚ್ಚು ಸಮಸ್ಯೆ ಬಂದಿರುವುದು ಅಕ್ಕಿಹುಲ್ಲು ಹಾಗೂ ಗಂಡು ರಾಗಿ ಈ ಕಳೆಯನ್ನು ಹತೋಟಿ ಮಾಡಲು ರಾಗಿ ಬಿತ್ತುವ ಒಂದು ವಾರ ಮುಂಚಿತವಾಗಿ ಪ್ಯಾರಾಕ್ವಾಟ್ ಕಳೆನಾಶಕವನ್ನು 2-5 ಎಂ.ಎಲ್ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸುವುದರಿಂದ ಈ ಕಳೆಯನ್ನು ಹತೋಟಿ ಮಾಡಬಹುದು. ಅಲ್ಲದೆ ರಾಗಿಯಲ್ಲಿ ಅಣ್ಣೆ ಸೊಪ್ಪು ಹತೋಟಿ ಮಾಡಲು ಕೈ ಕಳೆ ತೆಗೆಯುವುದರಿಂದ ಹಾಗೂ ಡಿ-ಸೋಡಿಯಂ ಸಾಲ್ಟ್ ಕಳೆನಾಶಕ ಬಿತ್ತನೆ ಮಾಡಿದ 15-20 ದಿನಕ್ಕೆ ಎಕರೆಗೆ 200 ಲೀಟರ್ ಬ್ಯಾರಾಲ್ನಲ್ಲಿ ಅರ್ಧ ಕೆ.ಜಿ ಯಷ್ಟು 2,4-ಡಿ ಕಳೆನಾಶಕ ಮಿಶ್ರಣ ಮಾಡಿ ಸಿಂಪಡಿಸುವುದರಿಂದ ಅಣ್ಣೆ ಸೊಪ್ಪು ಹತೋಟಿ ಮಾಡಬಹುದು ಎಂದು ತಿಳಿಸಿದರು. ಪಶು ವಿಜ್ಞಾನಿ ಡಾ. ಎಚ್.ಬಿ. ಶಿವಪ್ಪ ನಾಯಕ್ ಮೇವಿನ ಲಭ್ಯತೆ, ಮೇವಿನ ಗುಣಮಟ್ಟ ಬಗ್ಗೆ ತಿಳಿಸಿದರು. ನಂತರ ರೈತರಿಗೆ ರಾಗಿ ಎಂ.ಎಲ್-322 ಬೀಜ, ಕಾರ್ಬೆಂಡೈಜಿಂ, ಸತುವಿನ ಸಲ್ಫೇಟ್ ಹಾಗೂ ಬೋರಾಕ್ಸ್ ಅನ್ನು ಕೆ.ವಿ.ಕೆ ವತಿಯಿಂದ ನೀಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.