ತೀರ್ಥಹಳ್ಳಿ: ತೀರ್ಥಹಳ್ಳಿಯ ಪಪಂ ಅಧ್ಯಕ್ಷರಾಗಿದ್ದ ರಹಮತ್ ಉಲ್ಲಾ ಅಸಾದಿ ಮಂಗಳವಾರ ಶಿವಮೊಗ್ಗ ಉಪವಿಭಾಗಾಧಿಕಾರಿಗಳ ಮೂಲಕ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು. ಕಾಂಗ್ರೆಸ್ಸಿನಲ್ಲಿ ಉದ್ಭವಿಸಿರುವ ಈ ವಿದ್ಯಮಾನದ ಲಾಭವನ್ನು ಬಿಜೆಪಿ ಹೇಗೆ ಬಳಸಿಕೊಳ್ಳಲಿದೆ ಎಂಬುದು ಕುತೂಹಲದ ಸಂಗತಿಯಾಗಿದೆ.
ಇದರೊಂದಿಗೆ ಕಳೆದ ಸುಮಾರು ಎರಡು ತಿಂಗಳಿನಿಂದ ಪಪಂ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿ ಕಾಂಗ್ರೆಸ್ ಪಕ್ಷದಲ್ಲಿ ನಡೆದಿದ್ದ ಗೊಂದಲ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ.
ಪಕ್ಷದ ಆಂತರಿಕ ನಿರ್ಧಾರದಂತೆ ಎರಡು ತಿಂಗಳ ಹಿಂದೆ ಅಧ್ಯಕ್ಷ ಸ್ಥಾನವನ್ನು ತೆರವು ಮಾಡಿ ಬೇರೆ ಸದಸ್ಯರಿಗೆ ಅವಕಾಶ ಕಲ್ಪಿಸಬೇಕಿತ್ತು. ಈ ನಡುವೆ ರಹಮತ್ ಉಲ್ಲಾ ಅಸಾದಿಯವರ ಪ್ರಯತ್ನದಲ್ಲಿ ಪಪಂಗೆ ಸರ್ಕಾರದಿಂದ ಒಂದಿಷ್ಟು ಅನುದಾನವನ್ನು ಮಂಜೂರಾಗಿದ್ದು ಕಾಮಗಾರಿಗಳನ್ನು ಪೂರೈಸಲು ಅವಕಾಶ ನೀಡುವಂತೆ ಪಕ್ಷದ ಮುಖಂಡರನ್ನು ಕೋರಿದ್ದರು.ಪಕ್ಷದ ಒಮ್ಮತದ ತೀರ್ಮಾನ ಮತ್ತು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಒತ್ತಡದ ಹಿನ್ನೆಲೆಯಲ್ಲಿ ಪಪಂಯಲ್ಲಿದ್ದ 9 ಸದಸ್ಯರಲ್ಲಿ ರಹಮತ್ ಉಲ್ಲಾ ಅಸಾದಿ ಸೇರಿ ಮೂವರನ್ನು ಹೊರತು ಪಡಿಸಿ 6 ಮಂದಿ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸದಸ್ಯರಲ್ಲಿ ಒಮ್ಮತ ಮುಡದ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಲಾಗಿದೆ. ಮುಂದಿನ ಬೆಳವಣಿಗೆ ಕುತೂಹಲಕರವಾಗಿದೆ.