ಹೊಸಪೇಟೆ: ರಾಹುಲ್ ಗಾಂಧಿ ದೇಶದ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಭವಿಷ್ಯ ನುಡಿದರು.
ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ರಾಜಕೀಯ ಪುನರ್ಜನ್ಮ ಕೊಡಿ ಅಂತ ಕೇಳುತ್ತಿದಾರೆ. ಅವರು ಸೋಲು ಒಪ್ಪಿಕೊಂಡಿದ್ದಾರೆ ಎಂದರ್ಥ. ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ನಾಗೇಂದ್ರ ಮಾತನಾಡಿ, ಕಾಂಗ್ರೆಸ್ ಪಕ್ಷದ ಬಗ್ಗೆ ಮಾಜಿ ಸಚಿವ ಬಿ. ಶ್ರೀರಾಮುಲುಗೆ ಭಯವಿದೆ. ನನ್ನಿಂದ ಭಯವಿದೆ ಎನ್ನುವುದು ಸುಳ್ಳು. ನಾಗೇಂದ್ರ ಕಾಂಗ್ರೆಸ್ಗೆ ತೃಣ ಇದ್ದಂತೆ. ಈ ಹಿಂದೆ ನಾವಿಬ್ಬರೂ ಬಿಜೆಪಿಯಲ್ಲಿದ್ದವರು. ರಾಜಕೀಯ ಉದ್ದೇಶಗಳಿಂದ ಬೇರೆ ಪಕ್ಷಗಳಲ್ಲಿ ಇದ್ದೇವೆ. ಶ್ರೀರಾಮುಲು ವ್ಯಕ್ತಿತ್ವದ ಬಗ್ಗೆ ನನಗೆ ಯಾವುದೇ ಅಭ್ಯಂತರವಿಲ್ಲ. ವೈಯಕ್ತಿಕವಾಗಿ ಯಾವುದೇ ಸಿಟ್ಟಿಲ್ಲ. ಪಕ್ಷ ಬೇರೆ ಬೇರೆ ಇರುವುದರಿಂದ ಸಿದ್ಧಾಂತ ಬೇರೆ ಬೇರೆಯಾಗಿದೆ. ಹೀಗಾಗಿ ಅವರನ್ನು ಸೋಲಿಸಬೇಕೆಂದುಕೊಂಡಿದ್ದೇವೆ ಎಂದರು.ಬಳ್ಳಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿ ಪ್ರಚಾರ ಮಾಡುತ್ತಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೋದಿಯವರು ಬಂದು ಪ್ರಚಾರ ಮಾಡಿದರೆ ಕಾಂಗ್ರೆಸ್ಗೆ ಏನೂ ವ್ಯತ್ಯಾಸವಾಗಲ್ಲ ಎಂದರು.