ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಮಳೆ: ಹಳಿಗಳ ಪರಿಶೀಲನೆ, ದುರಸ್ತಿ ಆರಂಭಿಸಿದ ನೈಋತ್ಯ ರೈಲ್ವೆ

KannadaprabhaNewsNetwork | Published : Jun 8, 2024 12:30 AM

ರೈಲ್ವೆ ಅಧಿಕಾರಿಗಳು, ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಪ್ರವಾಹ ಪೀಡಿತ ವೇಳೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ.

ಹುಬ್ಬಳ್ಳಿ:

ಮುಂಗಾರು ಮಳೆ ಶುರುವಾಗಿದ್ದು ನೈಋತ್ಯ ರೈಲ್ವೆ ವಲಯವು ತನ್ನ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಸುರಕ್ಷತಾ ಕ್ರಮಕೈಗೊಳ್ಳುತ್ತಿದೆ. ಪ್ರಯಾಣಿಕರ ಸುರಕ್ಷತೆಗೆ ಒತ್ತು ಕೊಟ್ಟು ಭೂಕುಸಿತ ಕಂಡುಬರುವ ಪ್ರದೇಶಗಳಲ್ಲಿ ರೈಲ್ವೆ ಹಳಿ ಪರಿಶೀಲನೆ, ದುರಸ್ತಿ ಕಾರ್ಯ ಭರದಿಂದ ಸಾಗಿದೆ.ಹುಬ್ಬಳ್ಳಿ ವಿಭಾಗದ ಕ್ಯಾಸಲರಾಕ್‌- ಕುಲೇಂ ಘಾಟ್‌ ಹಾಗೂ ಮೈಸೂರು ವಿಭಾಗದ ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರಸ್ತೆಗಳಲ್ಲಿ ಭೂಕುಸಿತ ಮಾಮೂಲಿ. ಈ ಪ್ರದೇಶಗಳಲ್ಲಿ ಕಳೆದ ಎರಡ್ಮೂರು ದಿನಗಳಿಂದ ಹಳಿಗಳ ಪರಿಶೀಲನೆ, ಹಳಿಗಳ ಮಧ್ಯೆ ನೀರು ನಿಲ್ಲದಂತೆ ಕ್ರಮಕೈಗೊಳ್ಳಲಾಗಿದೆ.

ಗಸ್ತು ವ್ಯವಸ್ಥೆ:

ಹವಾಮಾನ ಎಚ್ಚರಿಕೆ ಸಂದೇಶ ಬಂದ ಮೇಲೆ ತುರ್ತು ಗಸ್ತು ಆರಂಭಿಸುವುದು, ನೀರಿನ ಮಟ್ಟ, ಒಳಚರಂಡಿ ಹರಿವು, ಹಳಿ ಮೇಲೆ ಮರ ಬಿದ್ದರೆ ಅಥವಾ ಸಂಚಾರಕ್ಕೆ ಅಡ್ಡಿಯಾಗುವ ಯಾವುದೇ ಸಂಗತಿ ವೀಕ್ಷಿಸಲು ಸ್ಥಾಯಿ ಕಾವಲುಗಾರರನ್ನು ನಿಯೋಜಿಸಲಾಗಿದೆ. ಎಂಜಿನಿಯರ್‌ಗಳು ಸೇರಿದಂತೆ ಕಾವಲುಗಾರರು ನಿರಂತರವಾಗಿ ಪರಿಶೀಲನೆ ನಡೆಸಲಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಹಳಿಗಳಲ್ಲಿ ನೀರು ನಿಲ್ಲುವುದನ್ನು ತಡೆಯಲು, ಯಾರ್ಡ್‌ಗಳಲ್ಲಿನ ಒಳಚರಂಡಿ ವ್ಯವಸ್ಥೆ ಸರಿಪಡಿಸಲಾಗುತ್ತಿದೆ. ಮಳೆ ಸಮಯದಲ್ಲಿ ರೈಲುಗಳ ಕಾರ್ಯಾಚರಣೆಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗಿದೆ.

ಸಂವಹನ ಸಲಕರಣೆಗಳ ಪರೀಕ್ಷೆ:

ವಾಕಿ-ಟಾಕಿ ಸೆಟ್‌ ಚಾರ್ಜ್ ಮಾಡಿ ಸುಸ್ಥಿತಿಯಲ್ಲಿ ನಿರ್ವಹಣೆ, ತುರ್ತು ಸಂವಹನಕ್ಕಾಗಿ ಸಿದ್ಧತೆ, ತುರ್ತು ದೂರವಾಣಿ ಸಿದ್ಧಪಡಿಸುವುದು, ಕ್ಷೇತ್ರ ದೂರವಾಣಿಗಳ ಪರಿಶೀಲನೆ, ಸಿಗ್ನಲ್‌, ಟ್ರ್ಯಾಕ್‌ ಸೇರಿದಂತೆ ರೈಲ್ವೆ ಆಸ್ತಿಗೆ ಹಾನಿಯಾಗುವ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಸಮಸ್ಯೆಯಾಗುವ ಮರಗಳ ತೆರವುಗೊಳಿಸಲಾಗುತ್ತಿದೆ. ಭೂಕುಸಿತ ಸೇರಿದಂತೆ ವಿವಿಧ ಸಮಸ್ಯೆ ಎದುರಿಸುವ ಕ್ಯಾಸಲ್‌ರಾಕ್‌, ಕುಲೇಂ, ತಿನೈಘಾಟ್‌, ಸಕಲೇಶಪುರ, ಸುಬ್ರಹ್ಮಣ ರಸ್ತೆ ಮತ್ತು ಚಿತ್ರದುರ್ಗದಲ್ಲಿ ಅಗತ್ಯ ರೀತಿಯಲ್ಲಿ ಹಿಟಾಚಿ, ಜೆಸಿಬಿ ನಿಲ್ಲಿಸಲಾಗಿದೆ. ಬಂಡೆ, ಮರಳು ಚೀಲಗಳನ್ನು 90 ವ್ಯಾಗನ್‌ಗಳಲ್ಲಿ ಲೋಡ್‌ ಮಾಡಿ ಇಡಲಾಗಿದೆ. ಅಗತ್ಯ ಬಿದ್ದರೆ ಕಾರ್ಯಾಚರಣೆಗೆ ಅನುಕೂಲವಾಗಲೆಂದು ಮುಂಜಾಗ್ರತಾ ಕ್ರಮವಾಗಿ ಸಂಗ್ರಹಿಸಿಡಲಾಗಿದೆ.

ರೈಲ್ವೆ ಅಧಿಕಾರಿಗಳು, ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಪ್ರವಾಹ ಪೀಡಿತ ವೇಳೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ.

ಜತೆಗೆ ಟ್ರ್ಯಾಕ್ಮನ್‌ ಹಾಗೂ ಪಿವೇ ಸಿಬ್ಬಂದಿಗೆ ದುರ್ಬಲ ಸ್ಥಳಗಳಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು. ಅನಾಹುತ ಆಗದಂತೆ ಸಮಯಪ್ರಜ್ಞೆ ಮೆರೆಯಬೇಕು. ಒಂದು ವೇಳೆ ಸಮಸ್ಯೆ ಎದುರಾದರೆ ಯಾವ ರೀತಿ ಕ್ರಮಕೈಗೊಳ್ಳಬೇಕು ಎಂಬ ಬಗ್ಗೆ ತರಬೇತಿ ಕೂಡ ನೀಡಲಾಗಿದೆ. ಹಠಾತ್‌ ಮಳೆ, ಬಿರುಗಾಳಿ ಅಥವಾ ಹವಾಮಾನ ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಗೆ ಸಿದ್ಧರಾಗಲು ಸ್ಥಳೀಯ ಅಧಿಕಾರಿಗಳೊಂದಿಗೆ ಕಟ್ಟುನಿಟ್ಟಾದ ಜಾಗರೂಕತೆ ಮತ್ತು ನಿಕಟ ಸಮನ್ವಯ ಕಾಪಾಡಿಕೊಳ್ಳಲು ಸಂಬಂಧಪಟ್ಟ ಎಂಜಿನಿಯರಿಂಗ್‌ ಅಧಿಕಾರಿಗಳಿಗೆ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಅರವಿಂದ ಶ್ರೀವಾಸ್ತವ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.