ಮೌಲ್ಯ ಎಚ್ಚರಿಸುವುದು, ಧರ್ಮ ಸಂರಕ್ಷಣೆ ಸಮಾಜದ ಕೆಲಸ: ಬಿ.ಎಸ್.ಯಡಿಯೂಪ್ಪ

KannadaprabhaNewsNetwork |  
Published : Mar 06, 2026, 01:45 AM IST
6ಜಿಪಿಟಿ1ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿಯಲ್ಲಿ ಧಾರ್ಮಿಕ ಸಭೆಯನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ಧರ್ಮ ಉಳಿಸಲು ಎಲ್ಲರೂ ಕಾರಣರಾಗಬೇಕು. ಸಮಾಜಕ್ಕೆ ಸಾಕಷ್ಟು ಸಹಕಾರ ಹಾಗೂ ಬೆಂಬಲ ನೀಡಿದಾಗ ಮಾತ್ರ ಧರ್ಮ, ಸಂಸ್ಕೃತಿ, ಪರಂಪರೆ ತಾನಾಗಿಯೇ ಉಳಿಯುತ್ತವೆ.

ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ

ಬಸವಣ್ಣ ಹೇಳಿದಂತೆ ದಯವೇ ಧರ್ಮದ ಮೂಲವಯ್ಯ ಎಂಬಂತೆ ಮೌಲ್ಯವನ್ನು ಎಚ್ಚರಿಸುವುದು ಹಾಗೂ ಧರ್ಮಗಳ ಸಂರಕ್ಷಣೆ ಸಮಾಜದ ಕೆಲಸವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ಗುರುವಾರ ಸದ್ಗುರು ಷಟ್‌ಸ್ಥಲ ಚಕ್ರವರ್ತಿ ಶ್ರೀ ಸಿದ್ಧಮಲ್ಲಿಕಾರ್ಜುನ ಮಹಾಸ್ವಾಮೀಜಿ 76ನೇ ವಾರ್ಷಿಕ ಆರಾಧನೆ ಮತ್ತು ಶಿಲಾ ಮಠದ ನೂತನ ಕಟ್ಟಡ ಹಾಗೂ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಧರ್ಮ ಉಳಿಸಲು ಎಲ್ಲರೂ ಕಾರಣರಾಗಬೇಕು. ಸಮಾಜಕ್ಕೆ ಸಾಕಷ್ಟು ಸಹಕಾರ ಹಾಗೂ ಬೆಂಬಲ ನೀಡಿದಾಗ ಮಾತ್ರ ಧರ್ಮ, ಸಂಸ್ಕೃತಿ, ಪರಂಪರೆ ತಾನಾಗಿಯೇ ಉಳಿಯುತ್ತವೆ. ಜಾತಿ, ಮತ ಒಂದಾಗಿಸುವುದೇ ಲಿಂಗಾಯಿತ ಧರ್ಮದ ಸಾರ ಎಂದು ಅವರು ಹೇಳಿದರು.ರಾಷ್ಟೀಯತೆ ಹಾಗೂ ಧರ್ಮ ರಕ್ಷಣೆ ಹಿಂದೂ ಸಮಾಜದ್ದು. ಭಾರತ ಭೂಮಿ, ಯೋಗ, ಧ್ಯಾನ, ಕರ್ಮಕ್ಕೆ ಹೆಸರುವಾಸಿ. ದೇವತೆಗಳು ಇಲ್ಲಿ ‌ಜನಿಸಲು ಇಚ್ಚಿಸುತ್ತಾರೆ. ಕಾರಣ ಇದು ರಾಮ‌ ನಡೆದ ಜಾಗ. ಸೋಮಹಳ್ಳಿ ವೀರ ಸಿಂಹಾಸನ ಶಿಲಾಮಠ 800 ವರ್ಷಗಳ ಇತಿಹಾಸ ಹೊಂದಿದ್ದು, ಮೂಲ ಶ್ರೀಗಳಾದ ಗಂಗಾಧರೇಶ್ವರ ಮನುಕುಲದ ಉದ್ಧಾರಕ್ಕೆ ಜನಿಸಿದರು ಎಂದು ಹೇಳಿದರು.

ನಾನು ಸಿಎಂ ಆಗಿದ್ದಾಗ ಅಂದಿನ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಮನವಿ ಮೇರೆಗೆ 1.70 ಕೋಟಿ ಅನುದಾನ ನೀಡಿದ್ದೆ ಎಂದು ಹೇಳಿದರು.ಭಾಗ್ಯ ಲಕ್ಷ್ಮಿ ಯೋಜನೆ:

ರಾಜ್ಯದಲ್ಲಿ ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರ ಬೇಡ ಎಂದು ನಾನು ಸಿಎಂ ಆಗಿದ್ದಾಗ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದೆ. ಮುಂದಿನ ದಿನಗಳಲ್ಲಿ ನನ್ನ ಕೈ, ಕಾಲು ಗಟ್ಟಿಯಾಗಿರುವ ತನಕ ನಾಡಿನಾದ್ಯಂತ ಹೋರಾಟ ಮಾಡಿ ರಾಜ್ಯ ಅಭಿವೃದ್ಧಿಯತ್ತ ಸಾಗಿಸಬೇಕಿದೆ. ಸರ್ಕಾರ ಯಾವುದೇ ಇರಲಿ. ಅನ್ನದಾತ ರೈತನಿಗೆ ಸವಲತ್ತು ಸಿಗಬೇಕು. ರೈತ ಪರ ಯೋಜನೆಗಳು ರೂಪಿಸಬೇಕು ಹಾಗೂ ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ದೇಶದ ಗೌರವ ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ಇಡೀ ದೇಶಕ್ಕೆ ಹಾಗೂ ಪ್ರಪಂಚಕ್ಕೆ ಮಾರ್ಗದರ್ಶನ ಮಾಡುವ ಪ್ರಧಾನಿ ನಮಗೆ ಸಿಕ್ಕಿರುವುದು ನಮ್ಮ ಸೌಭಾಗ್ಯ ಎಂದು ಹೊಗಳಿಸಿದರು.ವಿಧಾನ ಪರಿಷತ್‌ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಮನುಷ್ಯ ಹಣದ ಹಿಂದೆ ಹೋಗಬಾರದು. ಹಣ ನಮ್ಮ ಹಿಂದೆ ಬರಬೇಕು. ಮನುಕುಲದ ನಡುವೆ ಸಂಘರ್ಷ ಹೆಚ್ಚಾಗುತ್ತಿದೆ. ಇದು ಮನುಕುಲದ ಉದ್ದಾರಕ್ಕಾಗಿ ಅಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಮಾತನಾಡಿ, ಯಡಿಯೂರಪ್ಪ ಅವರು ಸೋಮಹಳ್ಳಿ ಮಠಕ್ಕೆ ನಾನು ಶಾಸಕನಾಗಿದ್ದ ಅವಧಿಯಲ್ಲಿ 1.70 ಕೋಟಿ ಅನುದಾನ ನೀಡಿದ್ದರು. ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ ಕೆರೆಗಳಿಗೆ ನೀರು ತರಲು ಕಾರಣರಾದರು ಎಂದು ಸ್ಮರಿಸಿದರು.ಸೋಮಹಳ್ಳಿ ಮಠಾಧೀಶ ಸಿದ್ದಮಲ್ಲಸ್ವಾಮೀಜಿ ಮಾತನಾಡಿ ಮಠದ ನೂತನ ಕಟ್ಟಡ ನಿರ್ಮಾಣಕ್ಕೆ ಎಲ್ಲರ ಸಹಕಾರವಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ 1.70 ಕೋಟಿ ಅನುದಾನ ಬಂತು. ಮಠದ ಭಕ್ತರ ನೆರವಿನಿಂದ ಇಂದು ಉದ್ಘಾಟನೆಗೊಂಡಿದೆ ಎಂದು ಹೇಳಿದರು.ಕನಕಪುರ ದೇಗುಲ ಮಠಾಧೀಶ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ, ದೇವನೂರು ಮಠಾಧೀಶ ಮಹಾಂತಸ್ವಾಮೀಜಿ ಹಾಗೂ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ ಮಾತನಾಡಿದರು.ಮಾಜಿ ಶಾಸಕ ಎಸ್.ಬಾಲರಾಜ್‌, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್‌, ಬಿಜೆಪಿ ಮುಖಂಡರಾದ ರುದ್ರೇಶ್‌, ಜನದನಿ ವೆಂಕಟೇಶ್‌, ತಹಸೀಲ್ದಾರ್‌ ಎಂ.ಎಸ್. ತನ್ಮಯ್‌, ಗ್ರಾಮದ ಪ್ರಮುಖರಾದ ಎಸ್.ಶಿವನಾಗಪ್ಪ, ಎಸ್.ಎಸ್. ಮಧುಶಂಕರ್‌, ಶಿವಕುಮಾರಸ್ವಾಮಿ, ಕುಮಾರಸ್ವಾಮಿ, ಯು.ಎಂ. ಮಲ್ಲೇಶ್‌, ನಂದ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದಿಶ್‌ ಹಾಗೂ ಬಿಜೆಪಿ ಮುಖಂಡರಾದ ಕುಂಬರಹಳ್ಳಿ ಸುಬ್ಬಣ್ಣ, ಸಿಂಧುವಳ್ಳಿ ಕೆಂಪಣ್ಣ, ಎಸ್. ಮಹದೇವಯ್ಯ, ಛಾಯ ಮೂಗೂರು ಇದ್ದರು.

6ಜಿಪಿಟಿ1

ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿಯಲ್ಲಿ ಧಾರ್ಮಿಕ ಸಭೆಯನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು.

---------------ಬಾಕ್ಸ

-----------

ಚಾಮರಾಜನಗರ ಜಿಲ್ಲೆ ಪ್ರಾಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಶ್ರೀಮಂತಿಕೆ ಮೂಲಸ್ಥಳ

ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆ ಪ್ರಾಕೃತಿಕ, ಧಾರ್ಮಿಕ ಹಾಗೂ ಆದ್ಯಾತ್ಮಿಕವಾಗಿ ಭಕ್ತರ ಭಕ್ತಿಯ ಶ್ರೀಮಂತಿಕೆಯ ಮೂಲ ಸ್ಥಳವಾಗಿದೆ ಎಂದು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು.

ಭಾರತ ಆಧ್ಯಾತ್ಮಿಕವಾಗಿ ಸಂಪತ್ಬರಿತ ದೇಶ. ಪ್ರಸ್ತುತ ಜಗತ್ತಿನಲ್ಲಿ ಸ್ಥಿತಿ ಅಲ್ಲೋಲ,ಕಲ್ಲೋಲವಾಗಿದ್ದನ್ನು ನೋಡಿದರೆ ಹಿಂದೆ ಮಹಾ 2ನೇ ಯುದ್ದ ನೆನಪಿಗೆ ಬರುತ್ತದೆ. ಜಪಾನ್ ಹಿರೋಸಿಮಾ ಹಾಗೂ ನಾಗಸಾಕಿ ಮೇಲೆ ಅಣು ಬಾಂಬ್ ಬಿದ್ದಿದ್ದು ನೋಡಿದರೆ ಜಗತ್ತಿನ ಕಣ್ಣು ತೆರೆಸಬೇಕು. ಭಾರತ ಅಣು ಬಾಂಬ್ ಗಳಿಂತ ಆತ್ಮಸ್ಥೈರ್ಯದ ಮೇಲೆ ನಂತಿದೆ ಎಂದು ಹೇಳಿದರು.ಸಿದ್ದಗಂಗಾ ಮಠಾಧೀಶ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ, ಚಾಮರಾಜನಗರ ಜಿಲ್ಲೆ ಶಿವಯೋಗಿಗಳು ಹಾಗೂ ಸಿದ್ದ ಪುರುಷರನ್ನು ನೀಡಿದೆ. ಬಸವಾದಿ ತತ್ವಗಳನ್ನು ಸಾರಿದ್ದು ಇಲ್ಲೆ. ದಾಸೋಹ ಚಕ್ರವರ್ತಿ ಗುರುಮಲ್ಲೇಶ್ವರರು ಧಾರ್ಮಿಕ ಕ್ರಾಂತಿ ಮಾಡಿದ್ದಾರೆ. ಅವರನ್ನು ಎಲ್ಲರು ಸ್ಮರಿಸಬೇಕು ಎಂದು ಹೇಳಿದರು.ಚಾಮರಾಜನಗರ ಜಿಲ್ಲೆಯಲ್ಲಿರುಷ್ಟು ಮಠ ಬೇರೆ ಯಾವ ಜಿಲ್ಲೆಯಲ್ಲೂ ಇಲ್ಲ. ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರದಲ್ಲಿ ಬಹಳ ದೊಡ್ಡ ಬದಲಾವಣೆ ಮಾಡುತ್ತಿರುವುದು ಮಠ, ಮಾನ್ಯಗಳು ಎಂದು ಅಭಿಪ್ರಾಯಪಟ್ಟರು.ಹನ್ಮೆರಡನೇ ಶತಮಾನದಲ್ಲಿ ಚೆನ್ನಬಸವಣ್ಣನಿಗೆ ಷಟ್‌ಸ್ಥಲ ಚಕ್ರವರ್ತಿ ಬಿರುದು ನೀಡಲಾಗಿತ್ತು. ಹಾಗೆಯೇ ಸೋಮಹಳ್ಳಿ ಸಿದ್ದಮಲ್ಲಿಕಾರ್ಜುನ‌ ಮಹಾಸ್ವಾಮೀಜಿಗೂ ಷಟ್‌ಸ್ಥಲ ಚಕ್ರವರ್ತಿ ಎಂಬ ಬಿರುದು ನೀಡಲಾಗಿದೆ. 76ನೇ ಸಂಸ್ಮರಣೆ ಜೊತೆಗೆ ಬೃಹತ್ ನೂತನ ಮಠವನ್ನು ಉದ್ಘಾಟಿಸಿರುವುದು ಸಂತಸದ ವಿಚಾರ ಎಂದು ತಿಳಿಸಿದರು.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವೇದಿಕೆಗೆ ಬರುತ್ತಿದ್ದಂತೆ ಸಮಾರಂಭದಲ್ಲಿ ವಿದ್ಯುತ್ ಸಂಚಾರ ಆದಂತಾಗಿ ಹೋಯಿತು. ರಾಜಕೀಯ ಹಾದಿಯಲ್ಲಿ ಮಠಗಳ ಸೇವೆ, ಸ್ವಾಮೀಜಿಗಳ ಸೇವೆ ಗುರುತಿಸಿರೋದು ಯಡಿಯೂರಪ್ಪ ಮಾತ್ರ ಎಂದು ಹೇಳಿದರು.ಬಿಎಸ್‌ವೈ ಜೈಲಿಗೂ ಹೋಗ್ತೇನೆ ಅಂದಿದ್ರು!

ಗುಂಡ್ಲುಪೇಟೆ-ಚಾಮರಾಜನಗರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತು ಸುತ್ತೂರು ಜಾತ್ರೆಯಲ್ಲಿ ಚರ್ಚೆಯಾಯ್ತು. ಆಗ ಕಾವೇರಿ ಟ್ರಿಬುನಲ್‌ ಕೇಸಿದೆ ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದಾಗ ಸಿಎಂ ಆಗಿದ್ದ ಯಡಿಯೂರಪ್ಪ ಹಿಂದೆ ಮುಂದೆ ಯೋಚಿಸದೆ ಜೈಲಿಗೆ ಹೋದ್ರೆ ಹೋಗ್ತೀನಿ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದನ್ನು ಸುತ್ತೂರು ಶ್ರೀ ಕಾರ್ಯಕ್ರಮದಲ್ಲಿ ಮೆಲುಕು ಹಾಕಿದರು.

ಯಡಿಯೂರಪ್ಪ ಏಕಾ ಏಕಿ ಸಿಎಂ ಆಗಲಿಲ್ಲ.ಶಿಕಾರಿಪುರದ ಪುರಸಭೆ ಸದಸ್ಯರಾದ ಬಳಿಕ ರಾಜಕೀಯದಲ್ಲಿ ಪಳಗಿ ರಾಜ್ಯದಲ್ಲಿ ಮೂರು ಬಾರಿ ಮುಖ್ಯಮಂತ್ರಿ ಯಾದವರು ಎಂದರಲ್ಲದೆ ಯಡಿಯೂರಪ್ಪ ರಾಜಕೀಯ ಕ್ಕೆ ಬಂದು ಐವತ್ತು ವರ್ಷವಾಗಿದೆ ಎಂದರು.ಬಿಎಸ್‌ವೈ ಮಾಜಿ ಆದ್ರೂ ಜನಪ್ರಿಯ!

ಗುಂಡ್ಲುಪೇಟೆ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಎಷ್ಟು ಪ್ರಸಿದ್ಧರಾಗಿದ್ದರೋ ಮಾಜಿಯಾದರೂ ಅಷ್ಟೇ ಜನಪ್ರಿಯರಾಗಿದ್ದಾರೆ ಎಂದು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು.

ಯಡಿಯೂರಪ್ಪ ದಿಟ್ಟ ನಿಲುವು ತೆಗೆದುಕೊಳ್ಳುತ್ತಾರೆ. ದೇಶದಲ್ಲಿ ರೈತರ ಪರವಾದ ಅಯವ್ಯ ಯ ಮಂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೊಗಳಿದರು.-------------

6ಜಿಪಿಟಿ2

ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಮಠದ ಉದ್ಘಾಟನೆ ಸಭೆಯಲ್ಲಿ ಸುತ್ತೂರು ಶ್ರೀ ಮಾತನಾಡಿದರು.--------------------

110 ಕೆರೆಗೆ ನೀರು ತುಂಬಿಸುವ ಯೋಜನೆಗೆ ಶೀಘ್ರ ಚಾಲನೆ : ಶಾಸಕ ಗಣೇಶ್‌ ಪ್ರಸಾದ್‌

ಗುಂಡ್ಲುಪೇಟೆ: ತಾಲೂಕಿನಲ್ಲಿ 475 ಕೋಟಿ ವೆಚ್ಚದಲ್ಲಿ 110 ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಅತೀ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಭೂಮಿ ಪೂಜೆ ಮಾಡಿಸುತ್ತೇನೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು. ಸೋಮಹಳ್ಳಿ ನೂತನ ಮಠದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನೂರತ್ತು ಕೆರೆ,ಕಟ್ಟೆಗಳಿಗೆ ನೀರು ತುಂಬಿಸಲು ಟೆಂಡರ್‌ ಆಗಿದೆ. ಭೂಮಿ ಪೂಜೆ ಮಾಡೋದೊಂದೆ ಬಾಕಿ ಎಂದು ಹೇಳಿದರು.

ಸೋಮಹಳ್ಳಿ ಮಠಕ್ಕೆ ನಾನೂ ಸಹ ಜಲ್ಲಿ, ಎಂ.ಸ್ಯಾಂಡ್‌ ಹಾಗೂ ಇನ್ನಿತರ ನೆರವು ನೀಡಿದ್ದೇನೆ. ಇಂದಿನ ಸಭೆಗೆ ಸಚಿವ ಈಶ್ವರ್‌ ಖಂಡ್ರೆ, ವಿ.ಸೋಮಣ್ಣ, ಶಾಸಕ ಪುಟ್ಟರಂಗಶೆಟ್ಟಿ ಹಾಗೂ ತಾಲೂಕಿನ ವಿವಿಧ ಮಠಾಧೀಶರು ಬಂದಿಲ್ಲ. ಪರವಾಗಿಲ್ಲ ಸೋಮಹಳ್ಳಿ ಮಠದ ಆಶೀರ್ವಾದ ಎಲ್ಲರಿಗೂ ಸಿಗಲಿ ಎಂದು ಆಶಿಸಿದರು.--------------

6ಜಿಪಿಟಿ3

ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಮಠದ ಉದ್ಘಾಟನೆ ಸಮಾರಂಭದಲ್ಲಿ ಸೇರಿದ್ದ ಭಕ್ತರ ಸಮೂಹ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿನ್ನೇನಹಳ್ಳಿ ಸೊಸೈಟಿಗೆ ಯುವ ನಾಯಕರ ಆಯ್ಕೆ
ಗಂಗಕಲ್ಯಾಣ ಯೋಜನೆ ಬಡ ರೈತರಿಗೆ ಅನುಕೂಲ