ರೈತರ ಸಾಲವನ್ನು ಒಟಿಎಸ್ ಮೂಲಕ ಬಗೆಹರಿಸಲು ರೈತ ಸಂಘ ಆಗ್ರಹ

KannadaprabhaNewsNetwork |  
Published : May 28, 2024, 01:07 AM IST
ಬಳ್ಳಾರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಮುಖಂಡರು ಬ್ಯಾಂಕ್‌ನಲ್ಲಿರುವ ರೈತರ ಕೃಷಿ ಸಾಲವನ್ನು ಒಟಿಎಸ್ ಮಾಡುವಂತೆ ಆಗ್ರಹಿಸಿದರು.  | Kannada Prabha

ಸಾರಾಂಶ

ಬೆಳೆನಷ್ಟ ಸೇರಿದಂತೆ ನಾನಾ ಸಂಕಷ್ಟದಲ್ಲಿರುವ ರೈತರ ಹಿತ ಕಾಯಲು ಜಿಲ್ಲಾಡಳಿತ ಮುಂದಾಗಬೇಕು.

ಬಳ್ಳಾರಿ: ಬರ ಪರಿಹಾರ ಸೇರಿದಂತೆ ರೈತರ ಖಾತೆಗಳಿಗೆ ಸರ್ಕಾರದಿಂದ ಬರುವ ಹಣವನ್ನು ಬ್ಯಾಂಕ್ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಆರ್‌.ಮಾಧವ ರೆಡ್ಡಿ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರ ಖಾತೆಗಳಿಗೆ ಬರ ಪರಿಹಾರ ಹಾಗೂ ನಾನಾ ಯೋಜನೆಯ ಬಿಡುಗಡೆ ಮಾಡಿದ ಹಣವನ್ನು ಬ್ಯಾಂಕ್‌ ಸಾಲಕ್ಕೆ ಜಮೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ರೈತರಿಗೆ ತೀವ್ರ ಸಮಸ್ಯೆಯಾಗಿದೆ. ಬೆಳೆನಷ್ಟ ಸೇರಿದಂತೆ ನಾನಾ ಸಂಕಷ್ಟದಲ್ಲಿರುವ ರೈತರ ಹಿತ ಕಾಯಲು ಜಿಲ್ಲಾಡಳಿತ ಮುಂದಾಗಬೇಕು. ಬ್ಯಾಂಕ್ ಅಧಿಕಾರಿಗಳು ರೈತರ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಹಲವು ವರ್ಷಗಳಿಂದಿರುವ ಸಾಲವನ್ನು ಏಕತೀರುವಳಿ (ಒಟಿಎಸ್‌) ಮೂಲಕ ಬಗೆಹರಿಸಬೇಕು. ಜೂನ್ ತಿಂಗಳಲ್ಲಿ ಒಟಿಎಸ್ ಜಾರಿಗೊಳಿಸಿ, ದಿನಾಂಕವನ್ನು ನಿಗದಿಗೊಳಿಸಬೇಕು. ಈ ಕುರಿತು ಗ್ರಾಮೀಣ ಭಾಗದಲ್ಲಿವ್ಯಾಪಕವಾದ ಪ್ರಚಾರ ಮಾಡಬೇಕು. ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ರೈತರ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿರುವ ಬ್ಯಾಂಕ್‌ಗಳ ವಿರುದ್ದ ವಿಪತ್ತು ನಿರ್ವಹಣಾ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಒಟಿಎಸ್ ಮೂಲಕ ಸಾಲ ತೀರುವಳಿಯಾದ ಬಳಿಕ ರೈತರಿಗೆ ಮತ್ತೆ ಕೃಷಿ ಸಾಲವನ್ನು ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಮೀಣ ಬ್ಯಾಂಕ್ ರೈತರ ಹಿತ ಕಾಯಲು ಮುಂದಾಗುತ್ತಿಲ್ಲ. ಸಂಕಷ್ಟದಲ್ಲಿರುವ ಅನ್ನದಾತರಿಗೆ ನೆರವಿಗೆ ಬರುತ್ತಿಲ್ಲ. ಹೀಗಾಗಿಯೇ ಅನೇಕ ಬಾರಿ ಹೋರಾಟಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬ್ಯಾಂಕ್ ಆಡಳಿತ ಕೂಡಲೇ ರೈತರ ಸಾಲವನ್ನು ಒಟಿಎಸ್ ಮಾಡುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಹಂತದ ಹೋರಾಟಗಳನ್ನು ರೂಪಿಸುವ ಕುರಿತು ಸಂಘದಲ್ಲಿ ಚರ್ಚಿಸಿ, ಸೂಕ್ತ ನಿಲುವು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ರೈತ ಮುಖಂಡರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಶ್ರೀಶೈಲ, ಆಲದಹಳ್ಳಿ ಬಸವರಾಜ, ಸ್ವಾಮಿ, ಪೊಂಪನಗೌಡ, ಸುರೇಂದ್ರ, ತಿಮ್ಮರೆಡ್ಡಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ
ಹತ್ಯೆ ಕೇಸಲ್ಲಿ ಬೈರತಿಗೆ ಸದ್ಯಕ್ಕಿಲ್ಲ ಬಂಧನ ಭೀತಿ