ಕನ್ನಡಪ್ರಭ ವಾರ್ತೆ ತುಮಕೂರು
ಕಾಂಗ್ರೆಸ್ ಕಚೇರಿಯಲ್ಲಿ ದಿ.ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಮಾಜಿ ಪ್ರಧಾನಿಗಳ ಜೀವನ ಮತ್ತು ಸಾಧನೆಯನ್ನು ನೆನಪು ಮಾಡಿಕೊಂಡು ಮಾನವ ಬಾಂಬ್ಗೆ ತುತ್ತಾದ ಪಕ್ಷದ ನಾಯಕರಿಗೆ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ, ದೇಶ ಅಭಿವೃದ್ಧಿಯಾಗಬೇಕಾದರೆ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂಬ ಸತ್ಯವನ್ನು ಅರಿತು,ವಿಜ್ಞಾನದ ತಳಹದಿಯ ಮೇಲೆ ದೇಶ ಕಟ್ಟಲು ಮುಂದಾದ ಪ್ರಧಾನಿ ರಾಜೀವ ಗಾಂಧಿಯವರು, ತಂತ್ರಜ್ಞಾನದ ಒಂದು ಭಾಗವಾದ ಮಾನವ ಬಾಂಬ್ಗೆ ಬಲಿಯಾಗಿದ್ದು ವಿಪರ್ಯಾಸ ಎಂದರು.ಕಂಪ್ಯೂಟರ್, ಟಿ.ವಿ, ಮೊಬೈಲ್ನಂತಹ ಅತ್ಯಾಧುನಿಕ ಸಲಕರಣೆಗಳು ಅಭಿವೃದ್ಧಿಯ ಭಾಗವಾಗಿ ಬಳಕೆ ಮಾಡುವ ಮೂಲಕ ದೇಶವನ್ನು ಮುಂದುವರಿದ ರಾಷ್ಟ್ರಗಳ ಸಾಲಿಗೆ ನಿಲ್ಲಿಸಿದ್ದು ನಮ್ಮ ರಾಜೀವಗಾಂಧಿಯವರು, ಫೈಲಟ್ ಆಗಬೇಕಾದವರು, ಪ್ರಧಾನಿಯಾಗಿ ಅಪಾರ ಜನಮನ್ನಣೆಯ ಜೊತೆಗೆ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಅವರು ಪರಿಚಯಿಸಿದ ಆಧುನಿಕ ತಂತ್ರಜ್ಞಾನವನ್ನು ಮುಂದಿಟ್ಟುಕೊಂಡು ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂದು ಪ್ರಶ್ನಿಸುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ, ಕಿರಿಯ ವಯಸ್ಸಿನಲ್ಲಿಯೇ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿ, ದೇಶವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುವ ಮೂಲಕ ಆ ಹುದ್ದೆಗೆ ಘನತೆಯನ್ನು ತಂದುಕೊಟ್ಟವರು ರಾಜೀವ್ಗಾಂಧಿ ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ಒಂದು ದೇಶದ ಪ್ರಧಾನಿಯ ಮಗನಾಗಿ ಏರ್ಫೈಲಟ್ ಆಗುವ ಮೂಲಕ ದೇಶ ಸೇವೆಗೆ ಮುಂದಾಗಿದ್ದ ರಾಜೀವ್ಗಾಂಧಿ, ಇಂದಿರಾಗಾಂಧಿಯ ಹತ್ಯೆಯಿಂದಾಗಿ ಅನಿವಾರ್ಯವಾಗಿ ಪ್ರಧಾನಿ ಪಟ್ಟ ವಹಿಸಿಕೊಂಡರು. ದೇಶ ಹಿಂದೆ ಉಳಿಯಲು ಕಾರಣವೆನೆಂದು ತಿಳಿಯಲು ಹಲವಾರು ದೇಶಗಳಲ್ಲಿ ಪ್ರವಾಸ ಮಾಡಿ, ಅಧ್ಯಯನ ನಡೆಸಿ, ವಿಜ್ಞಾನ, ತಂತ್ರಜ್ಞಾನವನ್ನು ಅಳವಡಿಸಿಕೊಂಡು ಭಾರತಕ್ಕೆ ಭದ್ರ ಬುನಾದಿ ಹಾಕಿದರು ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಪಾಲಿಕೆ ಮಾಜಿ ಸದಸ್ಯ ನಯಾಜ್, ಯೂತ್ ಕಾಂಗ್ರೆಸ್ನ ಜೆನ್ ಷೇಕ ಫಯಾಜ್, ಸುಜಾತ, ಮುಬೀನಾ ಬಾನು,ಕೆಂಪರಾಜು, ಅನಿಲ್ಕುಮಾರ್,ಸೇವಾದಳದ ಶಿವಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.