ಕನ್ನಡಪ್ರಭ ವಾರ್ತೆ ತುರುವೇಕೆರೆ
ದೇವಾಲಯದ ಮುಂಭಾಗದಲ್ಲಿ ಅಲಂಕಾರಗೊಂಡಿದ್ದ ರಥಕ್ಕೆ ಕೆಂಪಮ್ಮದೇವಿ ಉತ್ಸವ ಮೂರ್ತಿಯನ್ನು ಕುಳ್ಳರಿಸಿ ಗ್ರಾಮದ ನೂರಾರು ಹೆಣ್ಣುಮಕ್ಕಳು ಆರತಿ ಮಾಡಿ ದೇವಿಗೆ ಜೈಕಾರ ಹಾಕಿದರು. ರಾಜ್ಯಸಭಾ ಸದಸ್ಯ ಹಾಗೂ ಚಲನಚಿತ್ರ ನಟ ಜಗ್ಗೇಶ್ ತೇರಿನ ಚಕ್ರಕ್ಕೆ ತೆಂಗಿನಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಜಗ್ಗೇಶ್ ಸಹ ರಥವನ್ನು ಎಳೆಯುವುದರ ಹಾಗೂ ರಥಕ್ಕೆ ಬಾಳೆ ಹಣ್ಣು ಮತ್ತು ಧವನವನ್ನು ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿದರು.
ಈ ವೇಳೆ ಮಾತನಾಡಿದ ಅವರು, ಮಾತನಾಡಿ ನಮ್ಮ ಪೂರ್ವಜರು ಹಾಕಿಕೊಟ್ಟ ಗ್ರಾಮ ದೇವತೆಗಳ ಉತ್ಸವವನ್ನು ಯಾವುದೇ ಜಾತಿ ಬೇಧವಿಲ್ಲದೆ ವಿಜೃಂಭಣೆಯಿಂದ ಆಚರಿಸಬೇಕು. ಗ್ರಾಮದೇವತೆಗೆ ಪೂಜೆ ಪುನಸ್ಕಾರ ಮಾಡಿದರೆ ಗ್ರಾಮಕ್ಕೆ ಮತ್ತು ಗ್ರಾಮದ ಜನಕ್ಕೆ ಯಾವುದೇ ತೊಂದರೆಗಳು ಬರುವುದಿಲ್ಲ. ಗ್ರಾಮದೇವತೆ ಎಲ್ಲರನ್ನು ಕಾಪಾಡುವಳು ಎಂಬ ನಂಬಿಕೆ ಜನರಲ್ಲಿ ಇದೆ ಎಂದರು. ಈ ರಥೋತ್ಸವದಲ್ಲಿ ಜಿ.ಪಂ ಮಾಜಿ ಸದಸ್ಯ ವಸಂತ್ಕುಮಾರಿ ಗ್ರಾಮದ ಹಿರಿಯ ಮುಖಂಡರಾದ ಕೆಂಪೇಗೌಡ, ಯೋಗೀಶ್, ಮೋಹನ್, ಕೆಂಪೇಗೌಡ, ಜಗ್ಗೇಶ್ ಆಪ್ತಸಹಾಯಕ ಮಂಜುನಾಥ್ ಸೇರಿದಂತೆ ಸುತ್ತಮುತ್ತಲ ಗ್ರಾಮದ ನೂರಾರು ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡಿದ್ದರು.