ಕುರಿಗಾರರಲ್ಲಿ ಆಸಕ್ತಿ ಹೆಚ್ಚಿಸಿದ ಟಗರುಗಳ ಪ್ರದರ್ಶನ

KannadaprabhaNewsNetwork | Published : Mar 3, 2025 1:49 AM

ಸಾರಾಂಶ

ಹಂಪಿ ಉತ್ಸವದಲ್ಲಿ ಕಮಲಾಪುರ ಬಳಿ ಪಶು ಸಂಗೋಪನಾ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಆಯೋಜಿಸಿದ್ದ, ಟಗರುಗಳ ಪ್ರದರ್ಶನವು ಕುರಿಗಾರರಲ್ಲಿ ಇನ್ನು ಹೆಚ್ಚು ಕುರಿ ಸಾಕಾಣಿಕೆ ಮಾಡಬೇಕೆಂಬ ಆಸಕ್ತಿ ಹೆಚ್ಚಿಸಿತು.

ಬನ್ನೂರು, ರೆಂಬೋಲೇನ್‌ ಕೆಂಗುರಿ ತಳಿಗಳ ಆಗಮನಚಂದ್ರು ಕೊಂಚಿಗೇರಿ

ಕನ್ನಡಪ್ರಭ ವಾರ್ತೆ ಹಂಪಿ

ಹಂಪಿ ಉತ್ಸವದಲ್ಲಿ ಕಮಲಾಪುರ ಬಳಿ ಪಶು ಸಂಗೋಪನಾ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಆಯೋಜಿಸಿದ್ದ, ಟಗರುಗಳ ಪ್ರದರ್ಶನವು ಕುರಿಗಾರರಲ್ಲಿ ಇನ್ನು ಹೆಚ್ಚು ಕುರಿ ಸಾಕಾಣಿಕೆ ಮಾಡಬೇಕೆಂಬ ಆಸಕ್ತಿ ಹೆಚ್ಚಿಸಿತು.

ಕೊಬ್ಬಿದ ಟಗರು, ಕಾಳಗಕ್ಕೆ ಸಿದ್ಧಗೊಂಡ ಟಗರು, ಕಣ್ಣು ಹುಬ್ಬೇರಿಸುವ ಸುಂದರ ಕುರಿ ಹೀಗೆ ಹತ್ತಾರು ಬಗೆಯ ಟಗರು ಪ್ರದರ್ಶನವು ಜನರ ಗಮನ ಸೆಳೆದವು.

ಹೊಸಪೇಟೆ ಸುತ್ತಮುತ್ತಲಿನ ಗ್ರಾಮಗಳಿಂದ 51 ಟಗರು ಭಾಗವಹಿಸಿದ್ದವು. ಬಳ್ಳಾರಿ ತಳಿ(ಡೆಕ್ಕನ್ ತಳಿ), ಕೆಂದೂಳಿ, ಕಪ್ಪು ಕುರಿ, ಬನ್ನೂರ್ ಕುರಿ, ಡಾಬರ್ ತಳಿ ಹಾಗೂ ರ್ಯಾಂಬೋಲನ್ ತಳಿಯ ಟಗರು ಮತ್ತು ಕುರಿಗಳು ಹೆಚ್ಚಾಗಿ ಕಂಡುಬಂದವು.

ಮೂಲತಃ ಫ್ರಾನ್ಸ್ ನ ಬುಲೆಟ್ ರ್ಯಾಂಬೋಲೋ ತಳಿಯ ಟಗರು ಪ್ರದರ್ಶನದಲ್ಲಿ ಹೆಚ್ಚು ಗಮನ ಸೆಳೆಯಿತು. ಸುಮಾರು 48 ಸಾವಿರ ಮೌಲ್ಯದ ಈ ಟಗರನ್ನು ಕೊಂಡನಾಯಕನಹಳ್ಳಿ ಗ್ರಾಮದ ಮಾರುತಿ ಎನ್ನುವವರು ಸಾಕುತ್ತಿದ್ದಾರೆ. ಈ ಟಗರು ಹೆಚ್ಚು ಉಣ್ಣೆ ಉತ್ಪಾದಿಸುವ ಟಗರಾಗಿದ್ದು, ಉಣ್ಣೆ ಮತ್ತು ಮಾಂಸಕ್ಕೆ ಹೆಸರುವಾಸಿ ಎನ್ನಲಾಗುತ್ತಿದೆ.

ಹೀಗೆ ಹತ್ತು ಹಲವು ತಳಿಯ ಟಗರು ಮತ್ತು ಮೇಕೆಗಳು ಶನಿವಾರ ನಡೆದ ಕುರಿ ಪ್ರದರ್ಶನದಲ್ಲಿ ಸಾರ್ವಜನಿಕರ ಗಮನ ಸೆಳೆದವು.

ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ ಭೇಟಿ ನೀಡಿ, ಪ್ರದರ್ಶನ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರದರ್ಶನದಲ್ಲಿ ಟಗರುಗಳ ಮೂಲ ತಳಿ, ದೇಹದಾರ್ಢ್ಯತೆ, ಚುರುಕುತನ, ಅವುಗಳ ಚರ್ಮ ಸ್ಪರ್ಶಿಸುವ ಮೂಲಕ ಆರೋಗ್ಯ, ಹಲ್ಲು ಸೇರಿದಂತೆ ಸಮರ್ಥನೆಗೆ ಒಳಪಡಿಸಿದ ಬಳಿಕ ತೀರ್ಪುಗಾರರು ಅವುಗಳ ಚಲನ ವಲನಗಳನ್ನು ಪರಿಶೀಲಿಸಿ ಬಹುಮಾನ ಘೋಷಿಸಿದರು.

ಮಲಪನಗುಡಿಯ ಡೆಕ್ಕನ್ ತಳಿ(ಬಳ್ಳಾರಿ ತಳಿ) ಟಗರಿನ ಮಾಲೀಕ ಶಂಕ್ರಪ್ಪ ಪ್ರಥಮ ಬಹುಮಾನ ಪಡೆದುಕೊಂಡು, 10,000 ಹಾಗೂ ಪ್ರಮಾಣ ಪತ್ರ ಮುಡಿಗೇರಿಸಿಕೊಂಡಿತು.

ಕೊಂಡನಾಯಕನ ಹಳ್ಳಿಯ ಮಾರುತಿ ಅವರ ರ್ಯಾಂಬೋಲೋ ತಳಿಯ ಟಗರು 7,500 ಹಾಗೂ ಪ್ರಮಾಣ ಪತ್ರ ಒಳಗೊಂಡು ದ್ವಿತೀಯ ಸ್ಥಾನ ಪಡೆದುಕೊಂಡಿತು.

ಹೊಸಪೇಟೆಯ ಆರ್.ಮಂಜುನಾಥ ಅವರ ಬನ್ನೂರ್ ತಳಿಯ ಕುರಿಯ ತೃತೀಯ ಸ್ಥಾನ ಪಡೆದು, 5000 ಹಾಗೂ ಪ್ರಮಾಣ ಪತ್ರ ಗಿಟ್ಟಿಸಿಕೊಂಡಿತು.

4 ಮತ್ತು 5ನೇ ಸ್ಥಾನ ಪಡೆದ ಇಬ್ಬರಿಗೆ ಸಮಾಧಾನಕರ ಬಹುಮಾನವಾಗಿ ಪ್ರಮಾಣ ಪತ್ರ ಹಾಗೂ ಪಶು ಆಹಾರದ ಕಿಟ್ ವಿತರಿಸಿದರು.

ತೀರ್ಪುಗಾರರಾಗಿ ಶಿವಮೊಗ್ಗ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಡಾ. ಸತೀಶ್ ಮತ್ತು ಡಾ. ವೀರನಗೌಡ ಭಾಗವಹಿಸಿದ್ದರು.

ಪ್ರದರ್ಶನದಲ್ಲಿ ಕುರಿ ಮತ್ತು ಟಗರು ಸಾಕಾಣಿಕೆಯಲ್ಲಿ ಅನುಸರಿಸಬೇಕಾದ ಕ್ರಮ, ಆಹಾರ ಪದ್ಧತಿ ಹಾಗೂ ಅವುಗಳ ಆರೋಗ್ಯ ನಿರ್ವಹಣೆ ಕುರಿತು ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರು. ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲಾ ಕುರಿ ಮತ್ತು ಟಗರುಗಳಿಗೆ ಇಲಾಖೆ ವತಿಯಿಂದ ಮಾಲೀಕರಿಗೆ ಪ್ರಮಾಣ ಪತ್ರ, ಪಶು ಆಹಾರದ ಕಿಟ್ ವಿತರಿಸಲಾಯಿತು.

ಈ ವೇಳೆ ಪಶುಸೇವೆ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ. ಪೋವರ್ ಸಿಂಗ್ ನಾಯಕ, ಸಹಾಯಕ ನಿರ್ದೇಶಕ ಡಾ. ಮಂಜುನಾಥ, ಇಲಾಖೆಯ ಇತರೆ ಅಧಿಕಾರಿಗಳಾದ ಡಾ. ಸೂರಪ್ಪ, ಡಾ. ಸಂತೋಷ್, ಸಿ.ಚೆನ್ನಪ್ಪ, ಚಿದಾನಂದಪ್ಪ ಬಿ. ಸೇರಿದಂತೆ ಇತರರಿದ್ದರು.

Share this article