ಜಗತ್ತಿನ ಒಳಿತಿಗೆ ರಾಮ ಬೇಕು: ಡಾ.ಜೆ.ಪಿ. ಕೃಷ್ಣೇಗೌಡ

KannadaprabhaNewsNetwork | Published : Jan 22, 2024 2:18 AM

ಚಿಕ್ಕಮಗಳೂರಿನ ರಂಗಣ್ಣನವರ ಛತ್ರದಲ್ಲಿ ಶ್ರೀರಾಮ ಸಾಂಸ್ಕೃತಿಕ ಸಂಭ್ರಮದಲ್ಲಿ ಸುಗಮ ಸಂಗೀತಗಂಗಾ ಅಧ್ಯಕ್ಷರಾದ ಡಾ.ಕೃಷ್ಣೇಗೌಡರು ಮಾತನಾಡಿದರು. ಸಮಾಜದ ಒಳಿತಿಗೆ ರಾಮ, ಸೀತಾಮಾತೆ, ಲಕ್ಷ್ಮಣ ಸೇರಿ ರಾಮಾಯಣ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ದೇಶದ ಅಭ್ಯುದಯಕ್ಕೆ ಜಗತ್ತಿನ ಒಳಿತಿಗೆ ರಾಮ ಬೇಕು. ರಾಮಾಯಣ ಪೂರಕ ಎಂದು ಸುಗಮ ಸಂಗೀತಗಂಗಾ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಅವರು ಹೇಳಿದರು.

ಸುಗಮ ಸಂಗೀತಗಂಗಾ ನೇತೃತ್ವದಲ್ಲಿ ಬಸವನಹಳ್ಳಿ ರಂಗಣ್ಣನವರ ಛತ್ರದಲ್ಲಿ ಆಯೋಜಿಸಿದ್ದ ಶ್ರೀರಾಮ ಸಾಂಸ್ಕೃತಿಕ ಸಂಭ್ರಮದಲ್ಲಿ ಮಾತನಾಡಿದರು. ಸಮಾಜದ ಒಳಿತಿಗೆ ರಾಮ, ಸೀತಾಮಾತೆ, ಲಕ್ಷ್ಮಣ ಸೇರಿ ರಾಮಾಯಣ ಮಾರ್ಗದರ್ಶಿಯಾಗಿದೆ. ಮಕ್ಕಳಿಗೆ ರಾಮಾಯಣ ಮತ್ತು ಮಹಾಭಾರತದಂತಹ ಆದರ್ಶ ಕೃತಿ ಕಲಿಸುವುದು ಇಂದಿನ ಅಗತ್ಯ ಎಂದರು.

ರಾಜನಾದ ಶ್ರೀರಾಮಚಂದ್ರ ತಂದೆಗೆ ಆದರ್ಶ ಮಗನೂ, ಆದರ್ಶ ಸಹೋದರನಾಗಿಯೂ ನಿಲ್ಲುತ್ತಾನೆ. ಒಟ್ಟಾರೆ ಸದ್ಗುಣಗಳ ಗಣಿಯಾದ ಶ್ರೀರಾಮನದು ಆದರ್ಶ ಜೀವನ. ರಾಮನ ಹೆಸರಿನಲ್ಲೆ ಬಿಸಿ ಮತ್ತು ತಂಪು ಎರಡೂ ಇದೆ. ದೇಶದ ಆರಾಧ್ಯ ದೈವವೂ ಹೌದು ಎಂದ ಡಾ.ಜೆ.ಪಿ.ಕೆ, ಶ್ರೇಷ್ಠ ಪ್ರಧಾನಿ ನರೇಂದ್ರ ಮೋದಿರನ್ನೂ ಭವ್ಯರಾಮ ಮಂದಿರ ನಿರ್ಮಾಣಕ್ಕಾಗಿ ಶ್ರೀರಾಮನೇ ಕರೆಸಿಕೊಂಡ ಎಂಬ ರಥಯಾತ್ರಾ ರೂವಾರಿ ಎಲ್.ಕೆ.ಅಡ್ವಾನಿಯವರ ಮಾತುಗಳಲ್ಲಿ ಸತ್ಯವಿದೆ ಎಂದು ಹೇಳಿದರು.

ರಾಮನಿಗೂ ಕನ್ನಡನಾಡಿಗೂ ನಿಕಟ ಸಂಬಂಧವಿದೆ. ಹಿರೇಮಗಳೂರಿನಲ್ಲಿರುವ ಕೋದಂಡರಾಮನ ಬಲಭಾಗದಲ್ಲಿ ಸೀತಾಮಾತೆ ಇರುವ ವಿಗ್ರಹ ಜಗತ್ತಿನ ಬೇರೆಲ್ಲೂ ಇಲ್ಲ. ಯುಗದ ಕವಿ ಕುವೆಂಪು 8 ವರ್ಷಗಳ ಕಾಲ ರಚಿಸಿದ ರಾಮಾಯಣದರ್ಶನಂ ವಾಲ್ಮೀಕಿ ರಾಮಾಯಣಕ್ಕಿಂತಲೂ ಚೆನ್ನಾಗಿದೆ ಎಂದರು.

ಸುಗಮ ಸಂಗೀತ ಗಂಗಾ ಉಪಾಧ್ಯಕ್ಷ ಸ.ಗಿರಿಜಾಶಂಕರ್ ಪ್ರಧಾನ ಉಪನ್ಯಾಸ ನೀಡಿ, ಶ್ರೀರಾಮ ದೇಶದ ಶ್ರದ್ಧಾಕೇಂದ್ರ. ರಾಷ್ಟ್ರ ಒಗ್ಗೂಡಿಸುವ ಸೂತ್ರ. ಸರ್ವಶ್ರೇಷ್ಠ ಗುಣಗಳ ರಾಮ ಆದರ್ಶಪ್ರಾಯ ಎಂದು ಹೇಳಿದರು.

ಅಧಿಕಾರ ನಿರಾಕರಣೆ, ಪಿತೃವಾಕ್ಯ ಪರಿಪಾಲನೆ, ತಮ್ಮಂದಿರಿಗೆ ಮಾರ್ಗದರ್ಶನ, ಉತ್ತಮ ಸ್ನೇಹಿತನಾಗಿ ರಾಮ ನಮ್ಮೆದುರು ನಿಲ್ಲುತ್ತಾನೆ. ವಾಲಿಯನ್ನು ಸೋಲಿಸಿ ರಾಜ್ಯವನ್ನು ಸುಗ್ರೀವನಿಗೆ ಒಪ್ಪಿಸುತ್ತಾನೆ. ಲಂಕೆ ಗೆದ್ದರೂ ವಿಭೀಷಣನಿಗೆ ರಾಜ್ಯಕೊಟ್ಟ. ಸ್ವರ್ಣಮಯವಾದ ಲಂಕೆಬೇಡ, ಮಾತೃಭೂಮಿ ಬೇಕೆಂದ ರಾಮ, ಎಂದೂ ರಾಜ್ಯ ವಿಸ್ತರಣೆ, ಆಕ್ರಮಣ ಆಸೆ ಹೊಂದಿರಲಿಲ್ಲ ಎಂದರು.

ಸುಗಮ ಸಂಗೀತ ಗಂಗಾ ಪದಾಧಿಕಾರಿಗಳೊಂದಿಗೆ ಉದಯಸಿಂಹ, ಡಿ.ಎಚ್.ನಟರಾಜ್, ಮಂಜುನಾಥ ಜೋಷಿ ಸೇರಿ 24 ಸಂಸ್ಥೆಗಳ ಮುಖ್ಯಸ್ಥರು ದೀಪಪ್ರಜ್ವಲನಗೊಳಿಸುವ ಮೂಲಕ ಕಾರ್‍ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾಪ್ರಸಾದ ಕಾರ್‍ಯಕ್ರಮ ನಿರೂಪಿಸಿದರು.

ವಿವೇಕಜಾಗೃತ ಬಳಗ ತಂಡದ ಶ್ರೀರಾಮ ರಕ್ಷಾಸ್ತೋತ್ರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಾಂಸ್ಕೃತಿಕ ಸಂಭ್ರಮದಲ್ಲಿ ಪಾವನಿ ವೀಣಾಶಾಲೆಯ ತಂಡದ ವೀಣಾವಾದನ, ಮಲ್ಲಿಗೆ ಸುಧೀರ್ ಕಂಠದಲ್ಲಿ ರಾಮನ ಕಥೆ ವಿವರಿಸುವ ರಾಮನ ಅವತಾರ ಇದು ರಘುಕುಲ ಗಾಯನಕ್ಕೆ ಹಿರಿಯ ಚಿತ್ರಕಲಾ ಶಿಕ್ಷಕ ಕಟ್ಟಿಮನಿ ರಚಿಸಿದ ರಾಮನಚಿತ್ರ ಗಮನಸೆಳೆಯಿತು.

ಶಶಿಕಲಾ ನೇತೃತ್ವದ ಗಮಕಿಗಳ ತಂಡ ಕುವೆಂಪು ರಾಮಾಯಣದರ್ಶನಂ ಶ್ಲೋಕ ಪ್ರಸ್ತುತಪಡಿಸಿದರೆ, ಶ್ರೀಕಂಠೇಶ್ವರ ಕಲಾಮಂದಿರದ ವಿದ್ಯಾರ್ಥಿಗಳ ಬೃಹತ್ ಸಮೂಹ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡಿಗೆ ಭಾವತುಂಬಿದರು. ಉದಯಸಿಂಹ ತಂಡದ ಸಮೂಹ ಭಜನೆ, ಲಾಲಿತ್ಯಅಣ್ವೇಕರ್ ದನಿಯಲ್ಲಿ ಮೀರಾಭಜನೆ, ಸಪ್ತಸ್ವರ ಸಂಗೀತಶಾಲೆ ಹಾಡು, ರೇಖಾ ಪ್ರೇಮಕುಮಾರ್ ಸಾರಥ್ಯದಲ್ಲಿ ನಾದಚೈತನ್ಯ ತಂಡ ಬನ್ನಿ ಅಯೋಧ್ಯೆಗೆ ಇದೇ ಸಂದರ್ಭಕ್ಕಾಗಿ ಬಾಲಕೃಷ್ಣ ಕಾಮತ್ ರಚಿಸಿದ ಅರ್ಥಪೂರ್ಣಗೀತೆ ಪ್ರಸ್ತುತಪಡಿಸಿ ಗಮನಸೆಳೆದರು.

ಯಕ್ಷಸಿರಿ ನಾಟ್ಯವೃಂದ ವೈಭವಯುತವಾದ ಶ್ರೀರಾಮ ಪಟ್ಟಾಭಿಷೇಕ ಅಭಿನಯಿಸಿ ಮೆರಗು ತಂದರೆ, ವಿಷ್ಣು ಸಮಾಜದ ಭಜನೆ ಮತ್ತು ಗುಜರಾತಿ ಪರಿವಾರದ ಗರ್ಭಾನೃತ್ಯ ಜಗದಾನಂದಕಾರಕ ಸಮೂಹಗಾಯನ ಮೂಲಕ ಅರ್ಥಪೂರ್ಣ ಸಾಂಸ್ಕೃತಿಕ ಕಾರ್‍ಯಕ್ರಮ ಸಂಪನ್ನಗೊಂಡಿತು. ವಿವಿಧ ನೃತ್ಯಶಾಲೆ ಕಲಾವಿದರು, ಭಜನಾಮಂಡಳಿ ಸದಸ್ಯರು ಶ್ರೀರಾಮನಿಗೆ ಕಲಾಸೇವೆ ಸಲ್ಲಿಸಿದರು. ಮಂಜುನಾಥ ಕಾಮತ್, ಅರವಿಂದ ದೀಕ್ಷಿತ್, ಸುಧೀರ್, ವೀಣಾ ಅರವಿಂದ್, ರೇಖಾ ನೇತೃತ್ವದ ತಂಡ ಅಪರೂಪದ ಸಾಂಸ್ಕೃತಿಕ ಸೊಬಗಿಗೆ ಕರ್ಣಧಾರತ್ವವಹಿಸಿದ್ದರು. ಕೃಷ್ಣಭಟ್‌ರಿಂದ ಮಹಾಮಂಗಳಾರತಿ ನೆರವೇರಿತು.