ಕನ್ನಡಪ್ರಭ ವಾರ್ತೆ ಗುಬ್ಬಿ
ಗುಬ್ಬಿ ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಮಚಂದ್ರ, ಉಪಾಧ್ಯಕ್ಷರಾಗಿ ಎಸ್. ಟಿ. ಅಂಜುನಪ್ಪ ಅವಿರೋಧವಾಗಿ ಆಯ್ಕೆಯಾಗಿ ಮಾತನಾಡಿದರು.
ಗುಬ್ಬಿ ತಾಲೂಕಿನಲ್ಲಿರುವ ಎಲ್ಲಾ ವ್ಯವಸಾಯ ಸೇವಾ ಸಹಕಾರ ಸಂಘಗಳಿಗೆ ಪಡಿತರ ವಿತರಣೆಗೆ ಕ್ರಮ ಕೈಗೊಂಡಿದ್ದೇವೆ.ಸ್ಥಳೀಯವಾಗಿ ಜನತಾ ಬಜಾರ್ ತೆರೆಯುವ ಮೂಲಕ ಗುಣಮಟ್ಟದ ಆಹಾರವನ್ನು ನೀಡುವುದಕ್ಕೆ ಸಹ ಯೋಜನೆ ಮಾಡುತ್ತಿದ್ದೇವೆ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ರೈತರಿಗೆ ಅನುಕೂಲವಾಗಲು ರಸಗೊಬ್ಬರವನ್ನು ಸಗಟು ರೂಪದಲ್ಲಿ ನೀಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ಉಪಾಧ್ಯಕ್ಷ ಎಸ್. ಟಿ. ಅಂಜನಪ್ಪ ಮಾತನಾಡಿ, ರೈತರಿಗೆ ಅನುಕೂಲವಾಗಲು ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡುವುದಕ್ಕೆ ನಮ್ಮ ನಿರ್ದೇಶಕರು ಸೇರಿ ಅಧ್ಯಕ್ಷರು ಸಹ ಬದ್ಧರಾಗಿದ್ದೇವೆ. ತಾಲೂಕಿನ ವ್ಯವಸಾಯ ಸೇವಾ ಸಹಕಾರ ಸಂಘದ ಅಭಿವೃದ್ಧಿಗೆ ಎಲ್ಲ ಸಹಕಾರವನ್ನೂ ನೀಡುತ್ತೇವೆ ಎಂದು ತಿಳಿಸಿ, ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರಿಗೂ ಧನ್ಯವಾದಗಳನ್ನರ್ಪಿಸಿದರು.
ಮಾಲಮ್ಮ, ಎನ್. ಜಗದೀಶಯ್ಯ, ಡಿ. ಎಸ್. ಪಂಚಾಕ್ಷರಿ, ಎಚ್. ಸಿ. ಪ್ರಭಾಕರ್, ಗಿರೀಶ್, ನಿರಂಜನ ಮೂರ್ತಿ, ರಮೇಶ್, ಸೇರಿ ಸಿಬ್ಬಂದಿ ವರ್ಗ ಹಾಜರಿದ್ದರು.