ಶಿರಹಟ್ಟಿ ಪಟ್ಟಣದಲ್ಲಿ ಗುರುವಾರ ಸಂಭ್ರಮದಿಂದ ಮುಸ್ಲಿಂ ಬಾಂಧವರು ಪಟ್ಟಣದ ಹರಿಪುರ ಗ್ರಾಮದ ಹೊರ ವಲಯದಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ನಮಾಜ್ ಮಾಡಿದರು.
ಶಿರಹಟ್ಟಿ: ಪಟ್ಟಣದಲ್ಲಿ ಗುರುವಾರ ಸಂಭ್ರಮದಿಂದ ಮುಸ್ಲಿಂ ಬಾಂಧವರು ಪಟ್ಟಣದ ಹರಿಪುರ ಗ್ರಾಮದ ಹೊರ ವಲಯದಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ನಮಾಜ್ ಮಾಡಿದರು. ಹಬ್ಬದ ಹಿನ್ನೆಲೆಯಲ್ಲಿ ಹೊಸ ಬಟ್ಟೆ ತೊಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಈ ವೇಳೆ ಮೌಲಾನ ಮಜಹರಖಾನ್ ಪಠಾಣ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಧರ್ಮೋಪದೇಶ ನೀಡಿದರು.
ಅಧ್ಯಾತ್ಮ ಭಾವವನ್ನು ವೃದ್ಧಿಗೊಳಿಸಿ ಆತ್ಮಶುದ್ಧಿಯ ದಾರಿ ತೋರುವ ಪವಿತ್ರ ರಂಜಾನ್ ಮಾಸದಲ್ಲಿ ರೋಜಾ ಆಚರಣೆ, ಜಕಾತ್ ವಿತರಣೆಯಂತಹ ಪ್ರಮುಖವಾದ ಧಾರ್ಮಿಕ ಆಚರಣೆ ಬಡವರ ಹಸಿವಿನ ನೋವು ಏನು ಎಂಬುದು ತಿಳಿಸುವ ಜತೆಗೆ ಸಹನ ಶಕ್ತಿ, ಆರೋಗ್ಯ ವೃದ್ಧಿಗೆ ಕಾರಣವಾದಂತೆ ಎಂದು ಹೇಳಿದರು.
ಕಳೆದ ಒಂದು ತಿಂಗಳಿನಿಂದ ಉಪವಾಸ ಮಾಡುತ್ತಿದ್ದ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಸಂಭ್ರಮ ಸಡಗರದೊಂದಿಗೆ ಆಚರಣೆ ಮಾಡಿದರು. ಬುಧವಾರ ಸಂಜೆ ಚಂದ್ರ ದರ್ಶನವಾಗುತ್ತಿದ್ದಂತೆ ರಂಜಾನ್ ಆಚರಣೆಗೆ ನಿರ್ಧಾರ ಕೈಗೊಂಡರು. ಪಟ್ಟಣದ ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಶಾಂತಿ, ಸಮೃದ್ದಿ, ಉತ್ತಮ ಮಳೆ, ಬೆಳೆಗಾಗಿ ಬೇಡಿಕೊಂಡರು.
ಡಂಬಳದಲ್ಲಿ ಉತ್ತಮ ಮಳೆ-ಬೆಳೆಗೆ ಪ್ರಾರ್ಥನೆ: ಪವಿತ್ರ ರಂಜಾನ್ ಹಬ್ಬದಲ್ಲಿ ಉತ್ತಮ ಮಳೆ-ಬೆಳೆಯಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಧರ್ಮಗುರು ಖಾದರಸಾಬ್ ಮುಲ್ಲಾ ಹೇಳಿದರು.ಡಂಬಳ ಗ್ರಾಮದಿಂದ ಗದಗ ನಗರಕ್ಕೆ ಹೋಗುವ ರಸ್ತೆ ಪಕ್ಕ ಇರುವ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಿ ಮಾತನಾಡಿದ ಅವರು, ಐದು ಕಡ್ಡಾಯ ಆಚರಣೆಗಳನ್ನು ಪ್ರತಿಯೊಬ್ಬ ಮುಸ್ಲಿಂ ಪಾಲಿಸಬೇಕು ಮತ್ತು ಎಲ್ಲ ಧರ್ಮೀಯರ ಜತೆ ಭಾವೈಕ್ಯದಿಂದ ಇರಬೇಕು ಎಂದರು. ಪವಿತ್ರ ರಂಜಾನ್ 30 ದಿನಗಳ ಕಠಿಣ ಉಪಾವಾಸ ವ್ರತವನ್ನು ಸಂಪೂರ್ಣವಾಗಿ ಮಾಡಿದ ಭಕ್ತನಿಗೆ, ಇದು ಪರಿಶ್ರಮದ ಬೆಲೆಯನ್ನು ಪಡೆಯುವಂತಹ ಪವಿತ್ರ ದಿನವಾಗಿದೆ ಎಂದು ಹೇಳಿದರು.
ಅಂಜುಮನ್ ಅಧ್ಯಕ್ಷ ಬಶೀರಹಮ್ಮದ ತಾಂಬೋಟಿ ಮಾತನಾಡಿ, ರಂಜಾನ್ ತಿಂಗಳ ನಿಮಿತ್ತ ಮಸೀದಿಗೆ ದೇಣಿಗೆ ನೀಡಿದ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.ಧರ್ಮಗುರು ಖಾದರಸಾಬ್ ಮುಲ್ಲಾ ಅವರು ಪವಿತ್ರ ನಮಾಜ್ ನೆರವೇರಿಸಿದರು. ಆನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು ಮತ್ತು ತಮ್ಮವರು ಮೃತಪಟ್ಟ ಹಿರಿಯರ ಸಮಾಧಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.