ಬಳ್ಳಾರಿ: ರಂಗಭೂಮಿಯ ಮೂಲಕ ಬಳ್ಳಾರಿ ಕೀರ್ತಿಯನ್ನು ಬೆಳಗಿದ ತೆಲುಗು ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಾಚಾರ್ಯಲು ಅವರು ಕನ್ನಡ ಹಾಗೂ ತೆಲುಗು ನಾಟಕಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿದರು ಎಂದು ಕೋಲಾರದ ರಂಗನಿರ್ದೇಶಕ ಡಾ. ಇಂಚರ ನಾರಾಯಣಸ್ವಾಮಿ ನುಡಿದರು.
ಕನ್ನಡ ಹಾಗೂ ತೆಲುಗು ರಂಗಭೂಮಿ ಕ್ಷೇತ್ರಕ್ಕೆ ಧರ್ಮಾವರಂ ರಾಮಕೃಷ್ಣಾಚಾರ್ಯಲು ಅವರು ನೀಡಿದ ಕೊಡುಗೆ ಗಣನೀಯರವಾದದ್ದು. ವೃತ್ತಿಯಲ್ಲಿ ವಕೀಲರಾಗಿದ್ದರೂ ಪ್ರವೃತ್ತಿಯಲ್ಲಿ ರಂಗಭೂಮಿ ಪ್ರಗತಿಗೆ ಬದುಕಿನ ಭಾಗಶಃ ಸಮಯ ನೀಡಿದರು. ಅವರ ಶ್ರಮದಿಂದಾಗಿಯೇ ತೆಲುಗು ನಾಟಕ ರಂಗ ಸಾಕಷ್ಟು ಮುನ್ನಡೆ ಕಂಡಿದೆ ಎಂದರು.
ನಿವೃತ್ತ ಉಪನ್ಯಾಸಕ ಡಾ. ಕೆ. ಸುರೇಂದ್ರ ಬಾಬು, ಹಿರಿಯ ವಕೀಲ ಡಿ.ಎನ್. ಜಯಂತ್ ಹಾಗೂ ನಿವೃತ್ತ ಪ್ರಾಂಶುಪಾಲ ಜಿ.ಆರ್. ವೆಂಕಟೇಶಲು ಅವರು ಧರ್ಮಾವರಂ ರಾಮಕೃಷ್ಣಮಾಚಾರ್ಯಲು ಅವರು ನಾಟಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.ರಾಘವೇಂದ್ರ ಗುಡದೂರು, ಡಾ. ಅಣ್ಣಾಜಿ ಕೃಷ್ಣಾರೆಡ್ಡಿ, ಕೆ. ವಿಜಯೇಂದ್ರ ಅವರು ಸುಗಮ ಸಂಗೀತ, ರಂಗಗೀತೆಗಳು ಹಾಗೂ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.