-ವಿವಿಧ ಕಾಮಗಾರಿಗೆ ಭೂಮಿಪೂಜೆ
ಕನ್ನಡಪ್ರಭ ವಾರ್ತೆ ರಾಮನಗರ
ರಾಮನಗರ ಜಿಲ್ಲೆ ಮತ್ತು ಜನರು ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕಾದರೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಅಗತ್ಯವಿದೆ. ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಿಪಕ್ಷಗಳು ಹಾಗೂ ಸಂಘ ಸಂಸ್ಥೆಗಳು ಸಹಕಾರ ನೀಡುತ್ತವೆ ಎಂಬ ವಿಶ್ವಾಸವಿದೆ. ಇಲ್ಲದಿದ್ದರೆ ರಾಜ್ಯ ಸರ್ಕಾರ ಮುಂದಿನ ಕ್ರಮ ವಹಿಸಲಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಅಗತ್ಯವಿದೆ. ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಿಪಕ್ಷಗಳು ಹಾಗೂ ಸಂಘ ಸಂಸ್ಥೆಗಳು ಸಹಕಾರ ನೀಡುತ್ತವೆ ಎಂಬ ವಿಶ್ವಾಸವಿದೆ. ಇಲ್ಲದಿದ್ದರೆ ರಾಜ್ಯ ಸರ್ಕಾರ ಮುಂದಿನ ಕ್ರಮ ವಹಿಸಲಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು. ರಾಮನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿದರು. ನಗರದ ಮಳೆ ಹಾನಿ ಪ್ರದೇಶಗಳ ವಾರ್ಡ್ಗಳಲ್ಲಿ 5.40 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡ ಕಾಂಗ್ರೆಸ್ ಸರ್ಕಾರ ರಾಮನಗರ ಜಿಲ್ಲೆಗೆ ಮರುನಾಮಕರಣಕ್ಕೆ ಮುಂದಾಗಿದೆ. ಯಾರು ವಿರೋಧ ಮಾಡಿದರೂ ಸರ್ಕಾರ ತನ್ನ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಈಗಾಗಲೇ ಬಿಡದಿವರೆಗೆ ಮೆಟ್ರೋ ತರುವ ಬಗ್ಗೆ ಚಿಂತನೆ ನಡೆಯುತ್ತಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ, ಸ್ಮಾರ್ಟ್ ಸಿಟಿ, ರಾಮನಗರ - ಹಾರೋಹಳ್ಳಿ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಇದೆಲ್ಲವೂ ಮಾಡಬೇಕಾದರೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂಬ ಹೆಸರು ಬರುವುದರಿಂದ ಜನರ ಆಸ್ತಿ ಮೌಲ್ಯವೂ ಹೆಚ್ಚಾಗಲಿದೆ ಎಂದು ಹೇಳಿದರು.
ಹಾರೋಹಳ್ಳಿ ತಾಲೂಕನ್ನು ಹೆಸರಿಗಾಗಿ ಮಾಡಿದರು. ವರ್ಷಗಳೇ ಕಳೆದರೂ ಮೂಲಸೌಲಭ್ಯ ಕಲ್ಪಿಸಲಾಗಿಲ್ಲ. ಅಧಿಕಾರಿಗಳು ಕುಳಿತುಕೊಳ್ಳಲೂ ಜಾಗ ಇಲ್ಲ. ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೂ ಸಮಸ್ಯೆ ಉಂಟಾಗಿದೆ. ರಾಮನಗರದ ಕಂದಾಯ ಭವನ, ಪೊಲೀಸ್ ಭವನ ಕಾರ್ಯ ಅರ್ಧಕ್ಕೆ ನಿಂತಿತ್ತು. ಕಾಂಗ್ರೆಸ್ ಸರ್ಕಾರ ಆ ಕಾಮಗಾರಿಗಳನ್ನು ಪೂರ್ಣಗೊಳಿಸಿತು ಎಂದರು.ಕುಮಾರಸ್ವಾಮಿಯವರು ಮೂಲಭೂತ ಸೌಕರ್ಯ ಕಲ್ಪಿಸುವ ಮುಂದಾಲೋಚನೆ ಮಾಡದೆ ಘೋಷಣೆಗಳನ್ನು ಮಾಡಿದ್ದಾರೆ. ಈಗ ಸರ್ಕಾರದ ಕಟ್ಟಡ ಕಟ್ಟಲು ಸ್ಥಳಗಳಿಲ್ಲ, ಹಾಗಾಗಿ ನಾವು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಗುರುತಿಸಿಕೊಂಡಲ್ಲಿ ಎರಡು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿ ಹೊಂದುತ್ತೇವೆ. ರಾಮನಗರ ಜಿಲ್ಲೆಯನ್ನು ಬೆಂಗಳೂರ ದಕ್ಷಿಣ ಜಿಲ್ಲೆಯಂದು ಮರುನಾಮಕರಣ ಮಾಡಿದ ಬಳಿಕ ಅಭಿವೃದ್ದಿ ಕೆಲಸ ಮಾಡಿ ತೋರಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅನುದಾನ ಬಳಕೆ ಆರೋಪಕ್ಕೆ ತಿರುಗೇಟು:ಕುಮಾರಸ್ವಾಮಿ ಕುಟುಂಬದವರು ಶಾಸಕನಾಗುವ ಮೊದಲು ಇದ್ದ ನಗರದ ಪರಿಸ್ಥಿತಿ ಮತ್ತು ನಾನು ಶಾಸಕನಾದ ಮೇಲೆ ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಮಾಡಿರುವ ವಿಡಿಯೋಗಳನ್ನು ಚಿತ್ರೀಕರಿಸಲಾಗಿದೆ. ಅಧಿಕಾರಿಗಳು ಅದನ್ನು ಜನರಿಗೆ ಪರದೆಯ ಮೂಲಕ ತೋರಿಸುವ ಕೆಲಸ ಮಾಡಲಿದ್ದಾರೆ ಎಂದು ಮಾಜಿ ಶಾಸಕರ ಅನುದಾನ ಬಳೆಕೆಯ ಟೀಕೆಗೆ ತಿರುಗೇಟು ನೀಡಿದರು.
ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಪಟ್ಟಣದ ವ್ಯಾಪ್ತಿಯಲ್ಲಿ ಅಭಿವೃದ್ದಿಗೆ ವೇಗ ಸಿಕ್ಕಿದ್ದು, ಸಂಸದರಾಗಿದ್ದ ಡಿ.ಕೆ.ಸುರೇಶ್ ಅವರು ನೀಡಿದ 83 ಕೋಟಿ ರು. ಪಟ್ಟಣದ ಉದ್ಯಾನದ ಅಭಿವೃದ್ದಿಗೆ 157 ಕೋಟಿ ರು. ಅಲ್ಪಸಂಖ್ಯಾತ ಅಭಿವೃದ್ದಿ ಇಲಾಖೆ ವತಿಯಿಂದ 12.5 ಕೋಟಿ ರು. ಅನುದಾನ ಸೇರಿದಂತೆ ಒಟ್ಟು 300 ಕೋಟಿಯಷ್ಟು ಅಭಿವೃದ್ದಿ ಕೆಲಸಗಳು ಸಾಕಾರವಾಗುತ್ತಿವೆ ಎಂದು ಹೇಳಿದರು.ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ಕುಮಾರ್, ನಿರ್ದೇಶಕ ಪರ್ವಿಜ್ಪಾಷ, ನಗರಸಭೆ ಆಯುಕ್ತ ಎಲ್.ನಾಗೇಶ್, ಎಇಇ ನರಸಿಂಹರಾಜು, ನಗರಸಭಾ ಸದಸ್ಯರಾದ ಬಿ.ಸಿ.ಪಾರ್ವತಮ್ಮ, ಗಿರಿಜಮ್ಮ, ಅಸ್ಮದ್, ಪೈರೋಜ್, ಆರೀಪ್, ನಿಜಾಂ ಅಹಮದ್ ಷರೀಪ್, ಗ್ಯಾಬ್ರಿಯಲ್, ಗುತ್ತಿಗೆದಾರ ವಾಸು, ಗೋವಿಂದ್, ಯುವ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಅನಿಲ್ ಜೋಗಿಂದರ್, ಮತ್ತಿತರರಿದ್ದರು.