ಬಿಜೆಪಿ ಯುವ ಮೋರ್ಚಾದಿಂದ ವಿವೇಕ ನಡಿಗೆ ವಾಕಾಥಾನ್‌-

KannadaprabhaNewsNetwork | Published : Jan 13, 2025 12:45 AM

ಸ್ವಾಮಿ ವಿವೇಕಾನಂದರ ಸಂದೇಶ, ತತ್ವಗಳು ಆಧುನಿಕ ಕಾಲದಲ್ಲೂ ಅನುಕರಣೀಯ

ಕನ್ನಡಪ್ರಭ ವಾರ್ತೆ ಮೈಸೂರು

ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಬಿಜೆಪಿ ನಗರ ಮತ್ತು ಜಿಲ್ಲಾ ಯುವ ಮೋರ್ಚಾ ಭಾನುವಾರ ಆಯೋಜಿಸಿದ್ದ ವಿವೇಕ ನಡಿಗೆ- ವಾಕಾಥಾನ್‌ ನಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರವುಳ್ಳ ಬಿಳಿ ಬಣ್ಣದ ಟಿ ಶರ್ಟ್ ಧರಿಸಿ ನೂರಾರು ಮಂದಿ ಪಾಲ್ಗೊಂಡಿದ್ದರು.

ನಗರದ ರಾಮಸ್ವಾಮಿ ವೃತ್ತದಲ್ಲಿ ಈ ವಾಕಾಥಾನ್‌ ಗೆ ಶಾಸಕರಾದ ಧೀರಜ್ ಮುನಿರಾಜು, ಟಿ.ಎಸ್. ಶ್ರೀವತ್ಸ, ಮಾಜಿ ಸಂಸದ ಪ್ರತಾಪ ಸಿಂಹ, ಮಾಜಿ ಶಾಸಕ ಎಲ್. ನಾಗೇಂದ್ರ ಚಾಲನೆ ನೀಡಿದರು. ನಡಿಗೆ ಆರಂಭವಾದ ಬಳಿಕ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಹ ಭಾಗಿಯಾದರು.

ಈ ನಡಿಗೆಯು ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ತಾತಯ್ಯ ವೃತ್ತ, ನಾರಾಯಣಶಾಸ್ತ್ರಿ ರಸ್ತೆ, ವಿವೇಕ ಸ್ಮಾರಕದ ಮುಂಭಾಗ ಸಾಗಿ, ಡಿ. ದೇವರಾಜ ಅರಸು ರಸ್ತೆ, ಜೆಎಲ್‌ ಬಿ ರಸ್ತೆ, ರಾಮಸ್ವಾಮಿ ವೃತ್ತದ ಮೂಲಕ ಚಾಮರಾಜ ಮೊಹಲ್ಲಾದಲ್ಲಿರುವ ಬಿಜೆಪಿ ಕಚೇರಿ ಬಳಿ ಅಂತ್ಯವಾಯಿತು.

ಈ ವೇಳೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಸ್ವಾಮಿ ವಿವೇಕಾನಂದರ ಸಂದೇಶ, ತತ್ವಗಳು ಆಧುನಿಕ ಕಾಲದಲ್ಲೂ ಅನುಕರಣೀಯ. ಅವರು ದೇಶಕ್ಕೆ ನೀಡಿರುವ ಕೊಡುಗೆ ಅಪಾರ. ಯುವ ಜನತೆಗೆ ವಿವೇಕಾನಂದರ ಸಂದೇಶವನ್ನು ಅನುಸರಿಸಬೇಕು. ಅವರ ಜೀವನ ಸದಾ ಸ್ಮರಣೀಯ ಎಂದರು.

ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ವಿವೇಕಾನಂದರು ನೀಡಿದ ಸಂದೇಶ ಸಾರ್ವಕಾಲಿಕವಾದದ್ದು. ಅವರ ತತ್ವ, ಆದರ್ಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಯುವ ಮೋರ್ಚಾ ನಗರಾಧ್ಯಕ್ಷ ರಾಕೇಶ್ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂದೀಪ್, ಪ್ರಣಯ್, ಮಾಜಿ ಮೇಯರ್‌ ಗಳಾದ ಸಂದೇಶ್ ಸ್ವಾಮಿ, ಶಿವಕುಮಾರ್, ಮುಖಂಡರಾದ ಜೋಗಿ ಮಂಜು, ವೇದರಾಜು, ಹೇಮಾ ನಂದೀಶ್, ರುದ್ರಮೂರ್ತಿ, ಎಚ್.ಜಿ. ಗಿರಿಧರ್, ಮಹೇಶ್, ಎಂ.ಎ. ಮೋಹನ್, ಕವೀಶ್ ಗೌಡ, ಅರ್ಜುನ್, ನವೀನ್, ಮಧು, ರವಿ, ದಿನೇಶ್ ಗೌಡ, ರಾಕೇಶ್ ಭಟ್, ಮಂಜುನಾಥ್, ವಾಣೀಶ್, ಡಾ. ಅನಿಲ್ ಥಾಮಸ್, ಶೈಲೇಂದ್ರ, ಗಿರೀಶ್ ಗೌಡ, ಪ್ರಮೀಳಾ ಭರತ್, ವೇದಾವತಿ ಮೊದಲಾದವರು ಇದ್ದರು.