ಕನ್ನಡಪ್ರಭ ವಾರ್ತೆ ತುರುವೇಕೆರೆ
ರಾಮಾಯಣ ಮತ್ತು ಮಹಾಭಾರತ ನಮ್ಮ ಎರಡು ಕಣ್ಣುಗಳು ಇದ್ದಂತೆ. ನಮ್ಮ ದೇಶದ ಸಂಸ್ಕೃತಿ, ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿರುವುದಲ್ಲಿ ಈ ಎರಡೂ ಮಹಾ ಕಾವ್ಯಗಳು ಮೊದಲ ಸಾಲಿನಲ್ಲಿ ನಿಲ್ಲುತ್ತವೆ ಎಂದು ತಾಲೂಕು ದಂಡಾಧಿಕಾರಿ ಎನ್. ಎ.ಕುಂ. ಇ. ಅಹಮದ್ ಹೇಳಿದರು.ಪಟ್ಟಣದ ತಿಪಟೂರು ರಸ್ತೆಯಲ್ಲಿನ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ. ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಮಾಯಣ ಮಹಾಕಾವ್ಯವು ಆದರ್ಶ ಸಮಾಜದ ಮೌಲ್ಯಗಳನ್ನು ಎತ್ತಿ ಹಿಡಿದಿದೆ. ಜಗತ್ತು ಮೆಚ್ಚುವ ಮಹಾಕಾವ್ಯವನ್ನು ಬರೆದ ವಾಲ್ಮೀಕಿ ಕವಿಯನ್ನು ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸದೆ ಎಲ್ಲರೂ ಕಾವ್ಯವನ್ನು ಓದಿ ಅದರಲ್ಲಿರುವ ಮೌಲ್ಯಗಳನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.ಪಟ್ಟಣದ ಪಿಎಲ್.ಡಿ ಬ್ಯಾಂಕ್ ಅಧ್ಯಕ್ಷ ಕೆಂಪರಾಜು ಮಾತನಾಡಿ, ರಾಮಾಯಣ ಕಾವ್ಯದಲ್ಲಿರುವ ಚಿಂತನೆಗಳು ಒಂದು ಪ್ರದೇಶಕ್ಕೆ ಮೀಸಲಾಗದೆ ಇಡೀ ಜಗದ ಮನುಕುಲವನ್ನು ಉದ್ದರಿಸುವ ಶ್ರೇಷ್ಠ ಕೃತಿಯಾಗಿದೆ. ಮನುಷ್ಯನಿಗೆ ಕಣ್ಣುಗಳು ಎಷ್ಟು ಮುಖ್ಯವೋ ಈ ಕಾವ್ಯವೂ ಜ್ಞಾನ ಶಕ್ತಿ ಮತ್ತು ವ್ಯಕ್ತಿತ್ವವನ್ನ ಪರಿಪೂರ್ಣಗೊಳಿಸಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮಕ್ಕೂ ಮುನ್ನಾ ವಾಲ್ಮೀಕಿಯವರ ಭಾವಚಿತ್ರವನ್ನು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಶಾಸಕ ಎಂ.ಟಿ.ಕೃಷ್ಣಪ್ಪ ಮೆರವಣಿಗೆಯನ್ನು ಉದ್ಘಾಟಿಸಿದರು. ಶಿಕ್ಷಕಿ ಜಲಜಾಕ್ಷಿ ಉಪನ್ಯಾಸ ನೀಡಿದರು. ಇದೇ ವೇಳೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಹಾಗು ನಿವೃತ್ತ ಶಿಕ್ಷಕರನ್ನು ಸಹ ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮುಲ್ ಜಿಲ್ಲಾ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ವಹಿಸಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶೀಲಾ ಶಿವಪ್ಪನಾಯಕ, ಸದಸ್ಯೆ ಜಯಮ್ಮ, ಮುಖಂಡರುಗಳಾದ ಎ.ಬಿ.ಜಗದೀಶ್, ಲೀಲಾವತಿ ಗಿಡ್ಡಯ್ಯ, ವಾಲ್ಮೀಕಿ ಸಂಘದ ಗೌರವಾಧ್ಯಕ್ಷ ಶಂಕರಪ್ಪ, ತಾಲೂಕು ಅಧ್ಯಕ್ಷ ವಸಂತ್ ಕುಮಾರ್, ಕಾರ್ಯದರ್ಶಿ ಶಿವಣ್ಣ, ಎಪಿಎಂಸಿ ಉಪಾಧ್ಯಕ್ಷ ಗೋವಿಂದಪ್ಪ, ಮುಖಂಡ ವಿಜಯಕುಮಾರ್, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್, ತಾಲ್ಲೂಕು ಸಂಚಾಲಕ ಮಲ್ಲೂರ್ ತಿಮ್ಮೇಶ್, ಬೋರಪ್ಪ, ಮಾಯಸಂದ್ರ ಸುಬ್ರಹ್ಮಣ್ಯ, ಕಲ್ಪನಾ ಮುನಿರಾಜು, ಬಿಇಒ ಎನ್.ಸೋಮಶೇಖರ್, ಪ.ಪಂ ಮುಖ್ಯಾಧಿಕಾರಿ ಶ್ರೀನಾಥ್ ಬಾಬು ಮತ್ತು ಸಮುದಾಯದ ಮುಖಂಡರು ಇದ್ದರು.