- ಜಗಳೂರು ತಹಸೀಲ್ದಾರ್ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ - - -
ಕನ್ನಡಪ್ರಭ ವಾರ್ತೆ ಜಗಳೂರುಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ ಜ್ಞಾನದ ಭಂಡಾರ. ಒಬ್ಬ ವ್ಯಕ್ತಿಯ ಭೂತಕಾಲ ಅಥವಾ ಅವನ ಜೀವನದ ಹಿಂದಿನ ದಿನಗಳನ್ನು ಮರೆತು, ಮುಂದಿನ ದಿನಗಳಲ್ಲಿ ಉತ್ತಮ ಮಾರ್ಗವನ್ನು ಅನುಸರಿಸುವ ಮೂಲಕ ಸಮಾಜದಲ್ಲಿ ತನ್ನದೇ ಆದ ಹೆಸರನ್ನು ಗಳಿಸುವುದು ಹೇಗೆ ಎಂಬುದನ್ನು ವಾಲ್ಮೀಕಿಯ ಜೀವನದಿಂದ ನಾವೆಲ್ಲಾ ಕಲಿಯಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. 34 ಮಹಾನ್ ವ್ಯಕ್ತಿಗಳ ಆಚರಣೆಗಳನ್ನು ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಆರಾಧಿಸುತ್ತೇವೆ. ಇನ್ನು ಮುಂದೆ ಪ್ರತಿ ಮಹಾನ್ ವ್ಯಕ್ತಿಯ ಸಾಧನೆಗಳನ್ನು ತಿಳಿಯಲು ರಸಪ್ರಶ್ನೆಯ ರೀತಿಯಲ್ಲಿ ಮಾಡಬೇಕು ಎಂದರು.ಕೇವಲ ಹಾದಿ, ಬೀದಿಗಳಲ್ಲಿ, ನಾಲ್ಕು ಗೋಡೆಗಳ ಮಧ್ಯೆ ನಾಮಕಾವಸ್ತೆಗೆ ಮಾಡದೇ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರ್ಥಗರ್ಭಿತವಾಗಿ ತಿಳಿಯುವಂತೆ ಮಾಡಬೇಕು. ಇದೇ ಅ.13ರಂದು ಮದಕರಿ ನಾಯಕರ ಜಯಂತಿ ಇದೆ. ಮಾಜಿ ಶಾಸಕರು, ಎಲ್ಲ ಸಮುದಾಯದ ಮುಖಂಡರನ್ನು ಕರೆದು ಅರ್ಥಪೂರ್ಣವಾಗಿ ವಾಲ್ಮೀಕಿ ಜಯಂತಿ ಅದ್ಧೂರಿಯಾಗಿ ಆಚರಿಸೋಣ ಎಂದರು.
ನಿವೃತ್ತ ಉಪನ್ಯಾಸಕ ಹನುಮಂತಾಪುರ ರಾಜಪ್ಪ ಮಾತನಾಡಿ, ರಾಮಾಯಣ ಹೇಗೆ ರಚನೆಯಾದವು ಎಂಬ ಬಗ್ಗೆ ಒಂದು ಕಥೆ ಇದೆ. ಈ ಕಥೆಯ ಪ್ರಕಾರ, ವಾಲ್ಮೀಕಿ ಮಹರ್ಷಿಗಳ ಮೊದಲನೇ ಹೆಸರು ರತ್ನಾಕರ. ಈತ ಡಕಾಯಿತನಾಗಿದ್ದ. ಒಮ್ಮೆ ನಾರದ ಮುನಿಗಳ ಭೇಟಿಯಿಂದ ಅವನ ಮನಸ್ಸು ಮತ್ತು ಗುಣಗಳು ಬದಲಾದವು. ಅವನು ತನ್ನ ಜೀವನವನ್ನು ತಪಸ್ಸು ಮತ್ತು ಧ್ಯಾನದಲ್ಲಿ ತೊಡಗಿಸಿಕೊಂಡನು. ಒಂದು ದಿನ ವಾಲ್ಮೀಕಿ ಮಹರ್ಷಿಗಳು ನದಿಯ ದಡದಲ್ಲಿ ಕುಳಿತು ಧ್ಯಾನ ಮಾಡುತ್ತಿದ್ದಾಗ ರಾಮಾಯಣ ಬರೆಯುವುದಕ್ಕೆ ಸ್ಫೂರ್ತಿ ಪಡೆದುಕೊಂಡರು ಎಂದು ವಾಲ್ಮೀಕಿ ಬಗ್ಗೆ ಉಪನ್ಯಾಸ ನೀಡಿದರು.ತಹಸೀಲ್ದಾರ್ ಸೈಯದ್ ಕಲೀಂ ಉಲ್ಲ, ಕಾಂಗ್ರೆಸ್ ಮುಖಂಡ ಕೆ.ಪಿ.ಪಾಲಯ್ಯ ಮಾತನಾಡಿ, ಬಿಇಒ ಈ.ಹಾಲಮೂರ್ತಿ, ಸಿ.ತಿಪ್ಪೇಸ್ವಾಮಿ, ವಕೀಲ ಆರ್.ಓಬಳೇಶ್ ಮಾತನಾಡಿದರು. ತಾಪಂ ಇಒ ಕೆಂಚಪ್ಪ ನಾಯಕ ಸಂಘದ ತಾಲೂಕು ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ನಾಗರಾಜ್, ಬಿ.ಮಹೇಶ್ವರಪ್ಪ, ಸಿ.ತಿಪ್ಪೇಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಎಸ್ಟಿ ಅಧಿಕಾರಿ ರಾಘವೇಂದ್ರ, ಇನ್ಸ್ಪೆಕ್ಟರ್ ಸಿದ್ರಾಮಯ್ಯ, ಸಣ್ಣ ಸೂರಜ್ಜ, ಶಂಭುಲಿಂಗಪ್ಪ, ಕಿಲಾರಿ ಕೃಷ್ಣಮೂರ್ತಿ ಸೇರಿದಂತೆ ಅನೇಕರು ಇದ್ದರು.
- - --07ಜೆಜಿಎಲ್1:
ಜಗಳೂರು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿದರು.