ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ 30 ವರ್ಷಗಳಿಂದ ನಾವು ಇಲ್ಲಿ ವಾಸ ಮಾಡುತ್ತಿದ್ದೇವೆ. ಹರಿಜನ ಜನಾಂಗಕ್ಕೆ ಸೇರಿದವರಾಗಿದ್ದೇವೆ. ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಹಲವು ಬಾರಿ ಹೋರಾಟ ಮಾಡಿದ್ದೇವೆ. ಅಧಿಕಾರಿಗಳು ಸರ್ವೆ ಮಾಡುವವರು ಬರ್ತಾರೆ, ಸರ್ವೆ ಮಾಡ್ತಾರೆ, ಹಕ್ಕು ಪತ್ರ ಕೊಡ್ತೀವಿ ಅಂತ ವಾಪಾಸ್ ಹೋಗ್ತಾರೆ. ಇಷ್ಟು ವರ್ಷ ಪರದಾಡಿದರೂ ನಮಗೆ ಯಾವುದೇ ಹಕ್ಕುಪತ್ರ ನೀಡಿಲ್ಲ. ತಾತ್ಕಾಲಿಕ ಹಕ್ಕುಪತ್ರ ನೀಡಿದ್ದರೂ ಇದು ಪ್ರಯೋಜನಕ್ಕೆ ಬರ್ತಿಲ್ಲ ಎಂದು ಆರೋಪಿಸಿದರು.
ಜೋಗಮ್ಮ ಮಾತನಾಡಿ, 2006ರಲ್ಲಿಯೇ ನಾವು ಪುಟ್ಟ ಗುಡಿಸಲು ಹಾಕಿಕೊಂಡಿದ್ದೇವೆ. ಕೆಲವರು ಪುಟ್ಟ ಮನೆ ಕಟ್ಟಿಕೊಂಡಿದ್ದಾರೆ. ಗ್ರಾಮ ಠಾಣಾ ಜಾಗ ಇದು, ವಯಸ್ಸಾದವರು, ವೃದ್ಧರು, ಬಡ ಕಾರ್ಮಿಕರು, ಪರಿಶಿಷ್ಟ ವರ್ಗಕ್ಕೆ ಸೇರಿದವರು ಇಲ್ಲಿದ್ದಾರೆ. ಈ ಹಿಂದೆ ಸರ್ವೆ ಮಾಡಲೆಂದೇ 750 ರು.ಗಳನ್ನು ಪಡೆದಿದ್ದರು. ಆದೇನು ಸರ್ವೆ ಮಾಡಿದರೋ ನಮಗೆ ಗೊತ್ತಿಲ್ಲ. ಈಗಲಾದರೂ ನಮಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷ ವಾಟಾಳ್ ಮಂಜುನಾಥ್ ಮಾತನಾಡಿ, ನಿರಾಶ್ರಿತರ ಪರವಾಗಿ ನಮ್ಮ ವೇದಿಕೆ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಈಗಲೂ ಕೂಡಾ ಈ ಬಡ ಕಾರ್ಮಿಕರಿಗೆ, ಪರಿಶಿಷ್ಟರಿಗೆ ಮನೆ ಹಕ್ಕುಪತ್ರ ನೀಡಲು ಹೋರಾಟ ಮಾಡುತ್ತಿದ್ದೇವೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಸಚಿವ ಮಧು ಬಂಗಾರಪ್ಪರವರಿಗೆ ಮನವಿ ಕೊಟ್ಟಿದ್ದೇವೆ. ಅವರೇನೋ ಅಧಿಕಾರಿಗಳಿಗೆ ಹೇಳುತ್ತಾರೆ. ಆದರೆ, ತಹಸೀಲ್ದಾರ್ ಆಗಲೀ ಸಂಬಂಧಪಟ್ಟ ಅಧಿಕಾರಿಗಳು ಈ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಬದಲಾಗಿ ಅಸಡ್ಡೆ ದರ್ಪ ತೋರುತ್ತಾರೆ ಎಂದರು.
ಗೋಷ್ಠಿಯಲ್ಲಿ ರಾಮೇನಕೊಪ್ಪ ಗ್ರಾಮದ ನಿವಾಸಿಗಳಾದ ಮಂಜುಳಮ್ಮ, ಪರ್ವಿನ್ ಬೇಗಂ, ಬಾಷಾ ಸಾಬ್, ರವಿಕುಮಾರ್, ಶಿವಕುಮಾರ್ ಹಾಗೂ ವೇದಿಕೆಯ ಪದಾಧಿಕಾರಿಗಳಾದ ಲೋಕೇಶ್, ಅಕ್ಬರ್ ಬಾಷಾ, ಸಂಜು, ರಾಘವೇಂದ್ರ, ಮಾರುತಿ, ಸತೀಶ್ ಗೌಡ್ರು ಸೇರಿದಂತೆ ಹಲವರಿದ್ದರು.