ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಪ್ರತಿಷ್ಠಿತ ರಂಗತಂಡವಾದ ರಂಗತರಂಗ ಟ್ರಸ್ಟ್ 30 ವರ್ಷಗಳ ಹಂದರದಲ್ಲಿದ್ದು ಅದರ ಸವಿನೆನಪಿಗಾಗಿ ಡಿ.13, 14, 15ರಂದು ನಾಟಕಗಳ ಉತ್ಸವವನ್ನು ಚಾಮರಾಜನಗರದಲ್ಲಿ ಏರ್ಪಡಿಸಿದೆ ಎಂದು ಅಧ್ಯಕ್ಷ ಸೋಮಶೇಖರ ಬಿಸಲ್ವಾಡಿ ತಿಳಿಸಿದ್ದಾರೆ.ಇದೇ ಸಂದರ್ಭದಲ್ಲಿ ''''ರಂಗತಜ್ಞ, ರಂಗನಿರ್ದೇಶಕ ಹಾಗೂ ಹಾರ್ಮೋನಿಯಂ ಮಾಸ್ಟರ್ ಜೆ.ಜಾಯಫುಲ್ ಜಯಶೇಖರ್ ಅವರಿಗೆ ರಂಗಭೀಷ್ಠ ಪ್ರಶಸ್ತಿ " ನೀಡಿ ಗೌರವಿಸಲು ರಂಗತರಂಗ ಟ್ರಸ್ಟ್ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ. ಜೆ.ಜಾಯ್ಫುಲ್ ಜಯಶೇಖರ್ ಅವರು ಸಂಪೂರ್ಣ ರಾಮಾಯಣ, ಶ್ರೀ ಕೃಷ್ಣ ಲೀಲಾ ವಿನೋದ, ಸತ್ಯಹರಿಶ್ಚಂದ್ರ, ನಳ ದಮಯಂತಿ, ಕುರುಕ್ಷೇತ್ರ, ದಾನಶೂರ ಕರ್ಣ ಸತ್ಯಮೂರ್ತಿ, ತ್ರಿಜನ್ಮ ಮೋಕ್ಷ, ಗಿರಿಜಾ ಕಲ್ಯಾಣ, ಕೌಂಡಲೀಕನ ವಧೆ, ಪಾಂಡವ ವಿಜಯ, ದಶಾವತಾರ ಮುಂತಾದ ಪೌರಣಿಕ ನಾಟಕಗಳನ್ನು ನಿರ್ದೇಶಿಸಿದ್ದಾರೆ.ದೀಪಾವಳಿ, ರತ್ನಮಾಂಗಲ್ಯ, ಮಾಂಗಲ್ಯಯೋಗ ದೇವರ ಮಕ್ಕಳು, ಮಹಾತ್ಯಾಗಿ, ಋಣಾನುಬಂಧ, ದೈವಸಾಕ್ಷಿ, ಗಂಡನಮನೆ, ರತ್ನಾತ್ರಯ, ಅಪೂರ್ವತಾರೆ, ತೀರ್ಪು, ಆದರ್ಶ ಕುಟುಂಬ, ಒಲವಿನ ಗೆಲವು ಮುಂತಾದ ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಗಿರಿಜಾಕಲ್ಯಾಣ, ರುಕ್ಕಾಂಗದ, ಕೌಂಡಲೀಕನ ವಧೆ ಇವು ಸ್ವರಚಿತ ಪೌರಾಣಿಕ ನಾಟಕಗಳು ಮೈಸೂರು ಅನಂತಸ್ವಾಮಿಯವರೊಂದಿಗೆ ವಾದ್ಯ ಸಂಗೀತಗಾರರಾಗಿ, ಚನ್ನೈ ಆಕಾಶವಾಣಿಗೆ ನಿಲಯ ಸಂಗೀತ ಕಲಾವಿದರಾಗಿ ಕೆಲಸ ಮಾಡಿದ ಜಿ.ಜಾಯ್ ಫುಲ್ ಜಯಶೇಖರ್ರ ಅವರನ್ನು ರಂಗಾಯಣ ಮೈಸೂರು ಸೇರಿದಂತೆ ರಂಗತರಂಗ ಟ್ರಸ್ಟ್, ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್, ಅಭ್ಯಾಸಿ ಟ್ರಸ್ಟ್, ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ.
ರಂಗತರಂಗ ಟ್ರಸ್ಟ್ ನೀಡುವ ಅತ್ಯುನ್ನತ ಪ್ರಶಸ್ತಿಯಾದ "ರಂಗಭೀಷ್ಮ ಪ್ರಶಸ್ತಿ " ಯನ್ನು ಈವರೆಗೆ ಪ್ರಸಿದ್ಧ ಚಲನಚಿತ್ರ ನಟರಾದ ವರನಟ ಡಾ.ರಾಜ್ಕುಮಾರ್, ಕೆ.ಎಸ್.ಅಶ್ವಥ್, ಮಂಡ್ಯ ರಮೇಶ್ ಹಾಗೂ ಪ್ರೊ.ಎಚ್.ಎಸ್.ಉಮೇಶ್ ಅವರಿಗೆ ನೀಡಲಾಗಿದೆ.