ನಟೇಶ್ ಪತ್ನಿಯನ್ನು 4 ಕಂಪನಿಗಳಿಗೆ ಪಾಲುದಾರರಾಗಿ ಮಾಡಿ, ಹಣ ಹೂಡಿದ್ದಾರೆ

KannadaprabhaNewsNetwork | Published : Dec 6, 2024 8:57 AM

ಸಾರಾಂಶ

ಬ್ಲೂ ಸ್ಟೋನ್ ವೆಂಚರಸ್, ಕಾವೇರಿ ಗಂಗಾ ವೆಂಚರೆಸ್ ಕಂಪನಿ, ವಿಪಾಸನ ಹೆಲ್ತ್ ಕೇರ್, ಅಕಿನೋವ ಹೆಲ್ತ್ ಕೇರ್ ‌ಸೇರಿದಂತೆ ಒಟ್ಟು 4 ಕಂಪನಿಗಳಲ್ಲಿ ರಶ್ಮಿ ನಿರ್ದೇಶಕರಾಗಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಮುಡಾದಲ್ಲಿ 50:50 ಅನುಪಾತದಡಿ ನಿವೇಶನಗಳ ಹಂಚಿಕೆಯಲ್ಲಿ ಸಾವಿರಾರು ಕೋಟಿ ಅಕ್ರಮ ನಡೆದಿದೆ. ಆ ಹಣವನ್ನು ಅಧಿಕಾರಿಗಳು ತಮ್ಮ ಕುಟುಂಬಸ್ಥರ ಹೆಸರಿನಲ್ಲಿ ಬೇರೆ ಬೇರೆ ಕಡೆ ಹೂಡಿಕೆ ಮಾಡಿದ್ದು, ನನ್ನ ಗಮನಕ್ಕೆ ಬಂದಿತ್ತು. ಈ ಹಿಂದಿನ ಮುಡಾ ಆಯುಕ್ತ ಡಾ.ಡಿ.ಬಿ. ನಟೇಶ್ ತಮ್ಮ ಪತ್ನಿ ರಶ್ಮಿಯನ್ನು ನಾಲ್ಕು ಕಂಪನಿಗಳಿಗೆ ಪಾಲುದಾರರಾಗಿ ಮಾಡಿ ಹಣ ಹೂಡಿಕೆ ಮಾಡಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಸ್ನೇಹಮಯಿ‌ ಕೃಷ್ಣ ಆರೋಪಿಸಿದರು.

ಮೈಸೂರಿನ ಲೋಕಾಯುಕ್ತ ಎಸ್ಪಿ ಕಚೇರಿಗೆ ಗುರುವಾರ ಭೇಟಿ ನೀಡಿ, ಮುಡಾದ ಹಿಂದಿನ ಆಯುಕ್ತ ಡಿ.ಬಿ. ನಟೇಶ್ ವಿರುದ್ಧ ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ ಅವರಿಗೆ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಲೂ ಸ್ಟೋನ್ ವೆಂಚರಸ್, ಕಾವೇರಿ ಗಂಗಾ ವೆಂಚರೆಸ್ ಕಂಪನಿ, ವಿಪಾಸನ ಹೆಲ್ತ್ ಕೇರ್, ಅಕಿನೋವ ಹೆಲ್ತ್ ಕೇರ್ ‌ಸೇರಿದಂತೆ ಒಟ್ಟು 4 ಕಂಪನಿಗಳಲ್ಲಿ ರಶ್ಮಿ ನಿರ್ದೇಶಕರಾಗಿದ್ದಾರೆ. ಅವರ ಹೆಂಡತಿ ಮೂಲಕ ಈ ಕಂಪನಿಗಳಿಗೆ ಹಣ ಹೂಡಿಕೆ ಮಾಡಿದ್ದಾರೆ ಎಂದು ದೂರಿದರು.

ಬ್ಲೂ ಸ್ಟೋನ್ ವೆಂಚರಸ್ ಕಂಪನಿ ಬೋಗಾದಿಯ ಅಪಾರ್ಟ್ಮೆಂಟ್ ನಲ್ಲಿ ಫ್ಲಾಟ್ ಖರೀದಿ ಮಾಡಿದ್ದಾರೆ. ಇಲವಾಲ ಬಳಿ ಒಂದು ಎಕರೆ ಮುವತ್ತು ಕುಂಟೆ ಖರೀದಿ ಮಾಡಿದ್ದಾರೆ. ಈ ಬಗ್ಗೆ ನನಗೆ ದಾಖಲೆಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ತನಿಖೆ ಮಾಡುವಂತೆ ಮನವಿ ಮಾಡಿದ್ದೇನೆ. ಈ ಆರೋಪ ಕಂಡು ಬಂದಲ್ಲಿ ಅವರನ್ನು ಆರೋಪಿಗಳಾಗಿ ಮಾಡುವಂತೆ ಮನವಿ ಮಾಡಿದ್ದೇನೆ. ಈ ವಿಚಾರವಾಗಿ ಜಾರಿ ನಿರ್ದೇಶನಾಲಯಕ್ಕೂ ದೂರು ಕೊಟ್ಟಿದ್ದೇನೆ ಎಂದು ಅವರು ತಿಳಿಸಿದರು.

ಸಿಎಂ ಮೇಲ್ಮನವಿ ಅರ್ಜಿ ವಜಾ ಆಗುತ್ತೆ

ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸಿಎಂ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಕಿರುವ ಮೇಲ್ಮನವಿ ಅರ್ಜಿ ವಜಾ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಮೇಲ್ಮನವಿಯನ್ನು ಪರಿಗಣಿಸಬೇಕಾದ ಯಾವುದೇ ಅಂಶ ಆ ಅರ್ಜಿಯಲ್ಲಿ ಇಲ್ಲ ಎಂದರು.

ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಅರ್ಜಿ ಡಿ.10 ರಂದು ವಿಚಾರಣೆ ಇದೆ. ಅರ್ಜಿ ವಿಚಾರಣೆ ಬಳಿಕ ನ್ಯಾಯಾಲಯ ಈ ಪ್ರಕರಣವನ್ನು ಸಿಬಿಐಗೆ ನೀಡುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾದ ಎಲ್ಲಾ ಸಾಕ್ಷಿಗಳು ನಮ್ಮ ಬಳಿ ಇವೆ. ಈ ಪ್ರಕರಣವನ್ನು ಸಿಬಿಐಗೇ ಏಕೆ ಕೊಡಬೇಕೆಂಬ ವಿಚಾರವನ್ನು ನಮ್ಮ ವಕೀಲರು ನ್ಯಾಯಾಲಯಕ್ಕೆ ತಿಳಿಸಲಿದ್ದಾರೆ. ನಮ್ಮ ಮನವಿ ಪರಿಗಣಿಸಿ ನ್ಯಾಯಾಲಯ ಸಿಬಿಐಗೆ ವಹಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಲೋಕಾಯುಕ್ತ ಅಧಿಕಾರಿಗಳಿಗೆ ಇಡಿ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ನಾನು ಮಾಡಿದ್ದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವುದು ಕಂಡು ಬಂದಿದೆ ಎಂದರು.

ಕಾನೂನು ಪ್ರಕಾರ ಸಿಎಂ ಸಿದ್ದರಾಮಯ್ಯ ಪತ್ನಿಗೆ ಸೈಟ್ ನೀಡಿದ್ದೇವೆ ಎಂಬ ಎಚ್.ವಿ. ರಾಜೀವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವ ಕಾನೂನಿನ ಪ್ರಕಾರ ಆಗಿದೆ, ಯಾವ ಕೋರ್ಟ್ ಆದೇಶದ ಪ್ರಕಾರ ಎಂಬುದರ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ. ಇದು ಅಕ್ರಮ ಎಂಬುದಕ್ಕೆ ನಾನು ಸಾಕಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಯಾರು ಕಾನೂನು ಪ್ರಕಾರ ಆಗಿದೆ ಎನ್ನುತ್ತಾರೋ ಅವರು ದಾಖಲೆ ನೀಡಲಿ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ 50:50 ಅನುಪಾತದಡಿಯಲ್ಲಿ ನಿವೇಶನ ಕೊಡಬೇಕೆಂದು ಎಲ್ಲಿಯೂ ಉಲ್ಲೇಖ ಇಲ್ಲ. ಜನರ ದಿಕ್ಕು ತಪ್ಪಿಸಲು ಈ ರೀತಿಯಾದ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಸಿಎಂ ಪತ್ನಿಗೆ ಸೈಟ್ ನೀಡುವಾಗ ಸಿಎಂ ಪ್ರಭಾವ ಬೀರಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಲಿಖಿತವಾಗಿಯೇ ಸಾಕ್ಷಿ ಆಧಾರಗಳು ಇರಬೇಕೆಂದಿಲ್ಲ. ಮೌಖಿತ ಸಾಕ್ಷಿಗಳು ಇರಬೇಕೆಂದು ಹೇಳುತ್ತವೆ. ಧ್ರುವಕುಮಾರ್ ಅವರು ಈ ಬಗ್ಗೆ ಸಿಎಂ ಬಳಿ ಹೇಳುವಾಗ, ನನ್ನ ಅಧಿಕಾರದ ಅವಧಿಯಲ್ಲಿ ಸೈಟ್ ನೀಡೋದು ಬೇಡ ಎಂದಿದ್ದೇ ಎಂದು ಸ್ವತಃ ಸಿಎಂ‌ ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದಾರೆ. ಇದು ಮೌಖಿಕವಾಗಿ ಅವರು ಪ್ರಭಾವ ಬೀರಿದ್ದಾರೆ ಎಂದು ತಿಳಿಸುತ್ತದೆ. ಕಾನೂನು ಮೌಖಿಕ ಆಧಾರಗಳನ್ನು ಕೆಲವೊಮ್ಮೆ ಪರಿಗಣಿಸುತ್ತದೆ ಎಂದರು.

Share this article