ಕಂಪ್ಲಿಯಲ್ಲಿ ವಿಜಯನಗರ ಕಾಲದ ಅಪರೂಪದ ಶಾಸನ ಪತ್ತೆ

KannadaprabhaNewsNetwork |  
Published : Jun 14, 2026, 02:30 AM IST
ಕಂಪ್ಲಿ ತಾಲೂಕಿನ ಗೋನಾಳ ಗ್ರಾಮದಲ್ಲಿ ಪತ್ತೆಯಾಗಿರುವ ವಿಜಯನಗರ ಕಾಲದ ಅಪರೂಪದ ಶಾಸನ. | Kannada Prabha

ಸಾರಾಂಶ

ಈ ಪ್ರದೇಶದ ಇತಿಹಾಸ, ಸಾಂಸ್ಕೃತಿಕ ಪರಂಪರೆಯ ಅಧ್ಯಯನಕ್ಕೆ ಹೊಸ ಬೆಳಕು ಚೆಲ್ಲಿದೆ.

ಕಂಪ್ಲಿ: ತಾಲೂಕಿನ ಗೋನಾಳ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ಅವಧಿಗೆ ಸೇರಿದ ಮಹತ್ವದ ಶಾಸನವೊಂದು ಪತ್ತೆಯಾಗಿದೆ. ಈ ಪ್ರದೇಶದ ಇತಿಹಾಸ, ಸಾಂಸ್ಕೃತಿಕ ಪರಂಪರೆಯ ಅಧ್ಯಯನಕ್ಕೆ ಹೊಸ ಬೆಳಕು ಚೆಲ್ಲಿದೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪ ಮಣ್ಣಿನಲ್ಲಿ ಹೂತು ಹೋಗಿದ್ದ ಈ ಶಾಸನವನ್ನು ಸ್ಥಳೀಯ ಗ್ರಾಮಸ್ಥರು ಇತ್ತೀಚೆಗೆ ಗುರುತಿಸಿ ಸುರಕ್ಷಿತವಾಗಿ ಸಂರಕ್ಷಿಸಿರುವುದು ಇತಿಹಾಸಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

ಸುಮಾರು ಎಂಟು ಅಡಿ ಉದ್ದ, ಎರಡೂವರೆ ಅಡಿ ಅಗಲದ ಕಲ್ಲಿನ ಮೇಲೆ ಕೆತ್ತಲಾಗಿರುವ ಈ ಶಾಸನವು ಆರು ಸಾಲುಗಳ ಬರಹವನ್ನು ಹೊಂದಿದೆ. ಪ್ರಾಚೀನ ಕನ್ನಡ ಲಿಪಿಯಲ್ಲಿ ಕೆತ್ತಲಾದ ಈ ಶಾಸನವು 16ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇರಿದೆ. ಆ ಕಾಲದ ಆಡಳಿತ, ಧಾರ್ಮಿಕ ನಂಬಿಕೆ, ದಾನ ಧರ್ಮದ ವ್ಯವಸ್ಥೆಗಳ ಕುರಿತು ಮಹತ್ವದ ಮಾಹಿತಿ ಒಳಗೊಂಡಿದೆ.

ಶಾಸನದ ಮೇಲ್ಭಾಗದಲ್ಲಿ ತ್ರಿಶೂಲ, ಈಶ್ವರ, ನಂದಿ, ಸೂರ್ಯ, ಚಂದ್ರರ ಆಕೃತಿಗಳನ್ನು ಕೆತ್ತಲಾಗಿದೆ. ಇವು ವಿಜಯನಗರ ಕಾಲದ ಧಾರ್ಮಿಕ ಸಂಕೇತಗಳಾಗಿವೆ. ದೇವಾಲಯಗಳಿಗೆ ಸಂಬಂಧಿಸಿದ ದಾನ ಶಾಸನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶಗಳಾಗಿವೆ. ಶಾಸನದ ಕೆಳಭಾಗದಲ್ಲಿ ಗೋವಿನ ಚಿತ್ರವನ್ನು ಕೆತ್ತಲಾಗಿದ್ದು, ಕಾಲದ ಹೊಡೆತಕ್ಕೆ ಸಿಲುಕಿ ಆ ಚಿತ್ರ ಬಹುತೇಕ ಅಳಿಸಿಹೋಗಿದೆ.

ಇತಿಹಾಸ ಉಪನ್ಯಾಸಕ ಜೀರಿಗನೂರಿನ ಕೆ. ಆಂಜಿನೇಯ್ಯ ಮಾಹಿತಿ ನೀಡಿ, ಈ ಶಾಸನವು ಈಗಾಗಲೇ ಪುರಾತತ್ವ ಇಲಾಖೆಯ ದಾಖಲೆಗಳಲ್ಲಿ ಪ್ರಕಟಿತಗೊಂಡಿರುವುದಾಗಿ ತಿಳಿಸಿದ್ದಾರೆ. 1997ರಲ್ಲಿ ಮೈಸೂರಿನ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯಗಳ ನಿರ್ದೇಶನಾಲಯ ಪ್ರಕಟಿಸಿದ ಇನ್‌ಸ್ಕ್ರಿಪ್ಷನ್ಸ್ ಆಫ್ ಬಳ್ಳಾರಿ ಡಿಸ್ಟ್ರಿಕ್ಟ್ ಕೃತಿಯಲ್ಲಿ ಈ ಶಾಸನದ ಪಠ್ಯ ದಾಖಲೆಯಾಗಿದೆ ಎಂದರು.

ಶಾಸನದ ವಿಷಯದ ಪ್ರಕಾರ, ಅಂದಿನ ಗೊನಹಾಳ (ಈಗಿನ ಗೋನಾಳ) ಗ್ರಾಮವನ್ನು ಹಂಪಿಯ ವಿರೂಪಾಕ್ಷ ದೇವಾಲಯಕ್ಕೆ ದಾನವಾಗಿ ನೀಡಲಾಗಿತ್ತು. ದೇವಾಲಯಕ್ಕೆ ಸಲ್ಲಿಕೆಯಾಗಿದ್ದ ಗ್ರಾಮದ ಹಕ್ಕುಗಳು ಮತ್ತು ಆಸ್ತಿಯನ್ನು ಯಾರೂ ದುರುಪಯೋಗಪಡಿಸಿಕೊಳ್ಳಬಾರದು ಎಂಬ ಎಚ್ಚರಿಕೆಯ ಸಂದೇಶವನ್ನು ಈ ಶಾಸನದಲ್ಲಿ ದಾಖಲಿಸಲಾಗಿದೆ. ದೇವಾಲಯಗಳ ಆರ್ಥಿಕ ಮೂಲಗಳನ್ನು ರಕ್ಷಿಸುವ ಉದ್ದೇಶದಿಂದ ಇಂತಹ ಶಾಸನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾಗುತ್ತಿತ್ತು ಎಂದು ಇತಿಹಾಸ ತಜ್ಞರು ಅಭಿಪ್ರಾಯಪಡುತ್ತಾರೆ. ಇದೇ ಗ್ರಾಮದಲ್ಲಿ ಇನ್ನೊಂದು ಶಾಸನ ದೊರೆತಿರುವ ಬಗ್ಗೆ ದಾಖಲೆಗಳಲ್ಲಿ ಉಲ್ಲೇಖವಿದ್ದು, ಅದು ಪ್ರಸ್ತುತ ಮಣ್ಣಿನಡಿ ಹೂತುಹೋಗಿರುವ ಸಾಧ್ಯತೆ ಇದೆ. ಆ ಶಾಸನವನ್ನು ಪತ್ತೆಹಚ್ಚಿ ಸಂರಕ್ಷಿಸುವ ಅಗತ್ಯವಿದೆ ಎಂದರು.

ಗಂಗಾವತಿಯ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಮಾತನಾಡಿ, ಗೊನಹಾಳ ಗ್ರಾಮವನ್ನು ಹಂಪಿಯ ವಿರೂಪಾಕ್ಷ ದೇವರಿಗೆ ದಾನವಾಗಿ ನೀಡಿರುವುದನ್ನು ದಾಖಲಿಸುವ ಉದ್ದೇಶದಿಂದ ಈ ಶಾಸನವನ್ನು ಸ್ಥಾಪಿಸಲಾಗಿತ್ತು ಎಂದು ತಿಳಿಸಿದ್ದಾರೆ. ಇದು ಒಂದು ರೀತಿಯ ನಾಮಫಲಕ ಅಥವಾ ಗಡಿ ಗುರುತು ಶಾಸನವಾಗಿದ್ದು, ದೇವಾಲಯದ ಆಸ್ತಿಯ ರಕ್ಷಣೆಗೆ ಸಂಬಂಧಿಸಿದ ಮಹತ್ವದ ದಾಖಲೆ ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿಕ ಮಾಸ, ಆಂಜನೇಯ ದೇವಾಲಯಗಳಲ್ಲಿ ಭಕ್ತ ಸಾಗರ
ಮಕ್ಕಳನ್ನೇ ಜೋಡೆತ್ತು ಮಾಡಿ ಎಡೆಕುಂಟೆ ಹೊಡೆದ ಅಪ್ಪ