ದಾಬಸ್ಪೇಟೆ: ಜಗದ ಕವಿ, ಯುಗದ ಕವಿ ಎಂದೇ ಜನಮಾನಸದಲ್ಲಿ ಪ್ರಖ್ಯಾತಿಯಾದ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶಗಳು ಇಂದಿಗೂ ಪ್ರಸ್ತುತ, ಅವುಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುಖ್ಯಶಿಕ್ಷಕ ಆರ್.ಸಿದ್ದರಾಜಯ್ಯ ಸಲಹೆ ನೀಡಿದರು.
ಕನ್ನಡಕ್ಕೆ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಕುವೆಂಪು ಅವರು ರವೀಂದ್ರನಾಥ ಟ್ಯಾಗೂರ್ ರಂತೆ ರಾಷ್ಟ್ರಗೀತೆ ಮಾದರಿಯಲ್ಲಿ ನಾಡಗೀತೆ ಹಾಗೂ ರೈತಗೀತೆಯಂಥ ಸಾಕಷ್ಟು ಗೀತೆಗಳನ್ನು ನೀಡಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ಇಂಥ ಮಹಾನೀಯರ ಆದರ್ಶಗಳನ್ನು ಜೀವಂತವಾಗಿರಿಸುವ ಕೆಲಸವನ್ನು ಇಂದಿನ ಯುವಪೀಳಿಗೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ದೈಹಿಕ ಶಿಕ್ಷಕ ರುದ್ರಾರಾಧ್ಯ ಮಾತನಾಡಿ, ತಮ್ಮ ಅದ್ಭುತ ಸಾಹಿತ್ಯ ಮತ್ತು ಕವನಗಳ ಮೂಲಕ ಕುವೆಂಪು ಅವರು ಕನ್ನಡದ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದರು. ವಿದ್ಯಾರ್ಥಿಗಳು ಅವರ ಸಾಹಿತ್ಯ ಅಧ್ಯಯನ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.