ಸಂದೀಪ್ ವಾಗ್ಲೆ /ಮಹೇಶ ಛಬ್ಬಿ
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿರುವುದರಿಂದ ಈ ಬಾರಿಯ ಮುಂಗಾರು ಹಂಗಾಮಿನ ಬಿತ್ತನೆಗೆ ರಾಜ್ಯಾದ್ಯಂತ ರೈತರು ಸಜ್ಜಾಗಿದ್ದಾರೆ. ಆದರೆ, ಬಿತ್ತನೆ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿದವರಿಗೆ ದೊಡ್ಡ ಆಘಾತ ಕಾದಿದೆ. ಬಿತ್ತನೆ ಬೀಜದ ದರ ಗಗನಕ್ಕೇರಿದ್ದು, ಬರದಿಂದ ಕಂಗೆಟ್ಟ ರೈತರಿಗೆ ಬೆಲೆ ಏರಿಕೆಯ ಬರೆ ಬಿದ್ದಿದೆ!
ವಿವಿಧ ಭತ್ತದ ತಳಿಗಳ ಬಿತ್ತನೆ ಬೀಜದ ದರ ಕ್ವಿಂಟಾಲ್ಗೆ 675 ರು.ನಿಂದ 1,875 ರು.ವರೆಗೂ ಏರಿಕೆಯಾಗಿದೆ. ಹೆಸರು (5 ಕೆಜಿ) 501 ರಿಂದ 785ರವರೆಗೆ, ತೊಗರಿ (5 ಕೆಜಿ) 525ರಿಂದ 770ರವರೆಗೆ, ಜೋಳ (3 ಕೆಜಿ) 202 ರಿಂದ 285ರ ವರೆಗೂ ಏರಿಕೆಯಾಗಿದೆ. ಹೀಗಾಗಿ, ಸದ್ಯಕ್ಕೆ ಬಿತ್ತನೆ ಬೀಜದ ದಾಸ್ತಾನು ಸಾಕಷ್ಟಿದ್ದರೂ, ದರ ಏರಿಕೆಯಾಗಿರುವುದು ಮಾತ್ರ ಬಡ ರೈತರಿಗೆ ಹೊರೆಯಾಗಿದೆ.ಭತ್ತದ ಯಾವ ತಳಿಗೆ ಎಷ್ಟು?:
ದರ ಹೆಚ್ಚಳ ಏಕೆ?:
ಸರ್ಕಾರಿ ಸ್ವಾಮ್ಯದ ಕರ್ನಾಟಕ ರಾಜ್ಯ ಬೀಜ ನಿಗಮವು ಪ್ರತಿ ವರ್ಷ ರೈತರಿಂದ ಬೀಜ ಖರೀದಿ ಮಾಡಲು ಒಪ್ಪಂದ ಮಾಡಿಕೊಳ್ಳುತ್ತದೆ. ಅದರಂತೆ ಕಳೆದ ವರ್ಷ ಒಪ್ಪಂದ ಮಾಡುವಾಗ ಆಗಿನ ದರದಂತೆ ನಿಗದಿ ಮಾಡಲಾಗಿತ್ತು. ನಂತರದ ದಿನಗಳಲ್ಲಿ ರಾಜ್ಯದಲ್ಲಿ ಭತ್ತ ಉತ್ಪಾದನೆ ತೀವ್ರವಾಗಿ ಕುಸಿದಿದ್ದರಿಂದ ಮಾರುಕಟ್ಟೆ ದರ ದಿಢೀರನೆ ಹೆಚ್ಚಳವಾಗಿತ್ತು. ಬೀಜ ನಿಗಮವು ರೈತರಿಂದ ಮಾರುಕಟ್ಟೆ ದರಕ್ಕೆ ಬಿತ್ತನೆ ಬೀಜ ಕೊಳ್ಳದೆ ಇದ್ದರೆ ರೈತರು ಹೆಚ್ಚು ದರ ಸಿಗುವ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಾಧ್ಯತೆಯಿತ್ತು. ಹಾಗಾಗಿ, ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಬಿತ್ತನೆ ಬೀಜ ಖರೀದಿಸಿದ್ದರಿಂದ ಈ ಬಾರಿ ದರ ಏರಿಕೆಗೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.