ಕಾರಟಗಿ: ಬಸವ ಜಯಂತಿ ನಿಮಿತ್ತ ಇಲ್ಲಿನ ನವಲಿ ರಸ್ತೆಯಲ್ಲಿನ ಕೆರೆ ಬಸವೇಶ್ವರ ದೇವಸ್ಥಾನದ ರಥೋತ್ಸವ ಶುಕ್ರವಾರ ಸಂಜೆ ಸಂಭ್ರಮದಿಂದ ನಡೆಯಿತು.
ಹೆಬ್ಬಾಳಮಠದ ಡಾ. ನಾಗಭೂಷಣ ಶಿವಾಚಾರ್ಯರು ರಥೋತ್ಸವದ ಸಾನ್ನಿಧ್ಯ ವಹಿಸಿದ್ದರು. ಮರಳಸಿದ್ದಯ್ಯ ಹಿರೇಮಠ ನೇತೃತ್ವದಲ್ಲಿ ರಥಕ್ಕೆ ವಿಶೇಷ ಪೂಜೆಗಳು ನಡೆದವು. ಬೆಳಗ್ಗೆ ದೇವಸ್ಥಾನದಲ್ಲಿ ಕೆರೆ ಬಸವೇಶ್ವರ ಉದ್ಭವ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರಗಳು ನಡೆದವು. ವೀರಶೈವ ಯುವಕ ಸಂಘದ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಕಾರ್ಯಕ್ರಮಗಳು ನಡೆದವು. ಸಂಘದ ಪದಾಧಿಕಾರಿಗಳು ಇದ್ದರು.
ಕಾರ್ಯಕ್ರಮ: ಆನಂತರ ದೇವಸ್ಥಾನದ ಆವರಣದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹೆಬ್ಬಾಳ ಡಾ. ನಾಗಭೂಣಷ ಸ್ವಾಮೀಜಿ ಮತ್ತು ಬೂದುಗುಂಪಾದ ಸಿದ್ದೇಶ್ವರ ದೇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ೧೨ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ಮಾಡಿದ ಬಸವಣ್ಣನವರ ವಿಚಾರ, ಕಾಯಕ ದಾಸೋಹ ಕುರಿತು ಶ್ರೀಗಳು ಮಾತನಾಡಿದರು. ಆನಂತರ ಹಾಸ್ಯ ಕಲಾವಿದ ಕೊಟ್ರೇಶ ಕೂಡ್ಲಿಗಿ ಅವರಿಂದ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಹಿರೇಮಠದ ಮರಳುಸಿದ್ದಯ್ಯ ಸ್ವಾಮಿ, ವೀರಶೈವ ಯುವಕ ಸಂಘದ ಅಧ್ಯಕ್ಷ ಜಿ. ಯಂಕನಗೌಡ ಇದ್ದರು.