ಮೊದಲಿನಿಂದಲೂ ಭಾನುವಾರ ರಥೋತ್ಸವ ಮತ್ತು ಕಡಲೆ ಕಾಯಿ ಪರಿಷೆ ನಡೆಯುತ್ತಿತ್ತು. ಆದರೆ ಹನುಮ ದೇವರಿಗೆ ಶನಿವಾರ ಇಷ್ಟವಾದ ದಿನವಾಗಿರುವುದರಿಂದ ಈ ವರ್ಷದಿಂದ ಶನಿವಾರವೇ ರಥೋತ್ಸವ ಮತ್ತು ಕಡಲೆ ಕಾಯಿ ಪರಿಷೆ ನಡೆಸಲು ತೀರ್ಮಾನಿಸಿದ್ದು ಇನ್ನು ಮುಂದೆ ಶನಿವಾರ ನಡೆಸಲು ನಿರ್ಧರಿಸಲಾಗಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹನುಮ ಜಯಂತಿಯ ಕೊನೆಯ ದಿನದ ಪ್ರಯುಕ್ತ ನಗರದ ಸೂಲಾಲಪ್ಪನದಿನ್ನೆ ಸಮೀಪದ ವೀರಾಂಜನೇಯಸ್ವಾಮಿ ದೇವಾಲಯದ ಎದುರು ಶನಿವಾರ ನಡೆದ ವೀರಾಂಜನೇಯನ ರಥೋತ್ಸವ ಮತ್ತು ಕಡಲೆಕಾಯಿ ಪರಿಷೆಗೆ ಆದಿಚುಂಚನಗಿರಿ ಮಠ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.
ಈವೇಳೆ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಮೊದಲಿನಿಂದಲೂ ಭಾನುವಾರ ರಥೋತ್ಸವ ಮತ್ತು ಕಡಲೆ ಕಾಯಿ ಪರಿಷೆ ನಡೆಯುತ್ತಿತ್ತು. ಆದರೆ ಹನುಮ ದೇವರಿಗೆ ಶನಿವಾರ ಇಷ್ಟವಾದ ದಿನವಾಗಿರುವುದರಿಂದ ಈ ವರ್ಷದಿಂದ ಶನಿವಾರವೇ ರಥೋತ್ಸವ ಮತ್ತು ಕಡಲೆ ಕಾಯಿ ಪರಿಷೆ ನಡೆಸಲು ತೀರ್ಮಾನಿಸಿದ್ದು ಇನ್ನು ಮುಂದೆ ಶನಿವಾರ ನಡೆಯುತ್ತದೆ ಎಂದು ತಿಳಿಸಿದರು.
ರಥೋತ್ಸವಕ್ಕೆ ಶ್ರೀಗಳ ಚಾಲನೆ
ಈ ವೇಳೆ ಮುತ್ತಿನ ಪಲ್ಲಕ್ಕಿಯಲ್ಲಿ ತಂದಿದ್ದ ವೀರಾಂಜನೇಯಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ಬಳಿಕ ಆದಿಚುಂಚನಗರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ತಂಬಿಟ್ಟಿನ ದೀಪೋತ್ಸವ
ಶ್ರೀ ವೀರಾಂಜನೇಯಸ್ವಾಮಿ ರಥೋತ್ಸವ ಪ್ರಯುಕ್ತ ಜಡಲತಿಮ್ಮನಹಳ್ಳಿ, ತುಮ್ಮಕಲಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸುಮಂಗಲಿಯರಿಂದ ನಡೆದ ತಂಬಿಟ್ಟಿನ ದೀಪೋತ್ಸವ ವೀರಾಂಜನೇಯಸ್ವಾಮಿ ಕಡಲೇ ಕಾಯಿ ಜಾತ್ರೆಗೆ ವಿಶೇಷ ಕಳೆ ತಂದು ಕೊಟ್ಟಿತು. ಈ ವೇಳೆ ಚುಂಚಶ್ರೀ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಖುದ್ದು ಕಡಲೇ ಕಾಯಿ ವಿತರಿಸಿ ಪರಿಷೆಗೆ ವಿಶೇಷ ಮೆರಗು ನೀಡಿದರು. ಶ್ರೀಗಳು ಜನರ ಬಳಿಗೆ ಎಸೆಯುತ್ತಿದ್ದ ಕಳ್ಳೇಕಾಯಿ ಪಡೆಯಲು ತಾ ಮುಂದು ನಾ ಮುಂದು ಎಂದು ಪರಿಷೆಯಲ್ಲಿ ಜನರ ನೂಕುನುಗ್ಗಲು ಏರ್ಪಟಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.