ಮೂವರು ಪುಟಾಣಿಗಳ ಜೀವ ಉಳಿಸಲು ರವಿ ಕಟಪಾಡಿ ‘ಅವತಾರ್’ !

KannadaprabhaNewsNetwork | Published : Aug 27, 2024 1:33 AM

ಸಾರಾಂಶ

ಈ 10ನೇ ವರ್ಷ ಅವರು ಹಾಲಿವುಡ್‌ನ ಸೂಪರ್ ಹಿಟ್ ಅವತಾರ್ ಸಿನಿಮಾದ ಹಕ್ಕಿಯ ಮೇಲೆ ಹಾರಿ ಬರುವ ಹೀರೋನ ವೇಷ ಧರಿಸಿದ್ದಾರೆ. ಸೋಮವಾರ ಮುಂಜಾನೆ ‍ಈ ವೇಷ ಹಾಕಿರುವ ರವಿ, ಉಡುಪಿ ಮತ್ತು ಸುತ್ತಮುತ್ತಲಿನ ಪ್ರಮುಖ ಪೇಟೆಗಳಲ್ಲಿ ಸಂಚರಿಸುತ್ತಿದ್ದಾರೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಕಾಪು

ಇದುವರೆಗೆ ಬಡಕುಟುಂಬಗಳ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ 1 ಕೋಟಿ ರು.ಗೂ ಹೆಚ್ಚು ಹಣವನ್ನು ದಾನ ಮಾಡಿರುವ ರವಿ ಕಟಪಾಡಿ, ಈ ಬಾರಿ ಕೃಷ್ಣ ಜನ್ಮಾಷ್ಟಮಿಯ ಸಂದರ್ಭ ಮತ್ತೆ ವಿಭಿನ್ನ ವೇಷ ಹಾಕಿ ಸಾರ್ವಜನಿಕರ ಎದುರು ಕಾಣಿಸಿಕೊಳ್ಳುತ್ತಿದ್ದಾರೆ.

ಕಳೆದ 9 ವರ್ಷಗಳಿಂದ ಕೃಷ್ಣ ಜನ್ಮಾಷ್ಟಮಿಯ ಸಂದರ್ಭ ಹಾಲಿವುಡ್ ಸಿನಿಮಾಗಳ ಚಿತ್ರ ವಿಚಿತ್ರ ಪಾತ್ರಗಳ ವೇಷ ಧರಿಸಿ, ಜನರ ಮುಂದೆ ಪ್ರದರ್ಶಿಸಿ, ಹಣ ಸಂಗ್ರಹಿಸುವ ರವಿ ಕಟಪಾಡಿ, ಅಂದು ಸಂಪಾದಿಸಿದ ಅಷ್ಟು ಹಣವನ್ನು ಜಿಲ್ಲಾಧಿಕಾರಿ ಅವರ ಕೈಯಿಂದಲೇ ಬಡಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ದಾನ ಮಾಡುತ್ತಿದ್ದಾರೆ. 2 ದಿನ ಹಗಲು ರಾತ್ರಿ ಊಟ ನಿದ್ರೆ ವೇಷದೊಳಗೆ ಹಿಂಸೆಯಾದರೂ ಅದನ್ನೊಂದು ತಪಸ್ಸು ಎಂಬಂತೆ ನಡೆಸಿಕೊಂಡು ಬರುತ್ತಿರುವ ರವಿ ಕಟಪಾಡಿ, ಇದುವರೆಗೆ 130 ಮಕ್ಕಳಿಗೆ 1.28 ಕೋಟಿ ರು. ದಾನ ಮಾಡಿ ಅವರಿಗೆ ಮರಜೀವನ ನೀಡಿದ್ದಾರೆ.

ಈ 10ನೇ ವರ್ಷ ಅವರು ಹಾಲಿವುಡ್‌ನ ಸೂಪರ್ ಹಿಟ್ ಅವತಾರ್ ಸಿನಿಮಾದ ಹಕ್ಕಿಯ ಮೇಲೆ ಹಾರಿ ಬರುವ ಹೀರೋನ ವೇಷ ಧರಿಸಿದ್ದಾರೆ. ಸೋಮವಾರ ಮುಂಜಾನೆ ‍ಈ ವೇಷ ಹಾಕಿರುವ ರವಿ, ಉಡುಪಿ ಮತ್ತು ಸುತ್ತಮುತ್ತಲಿನ ಪ್ರಮುಖ ಪೇಟೆಗಳಲ್ಲಿ ಸಂಚರಿಸುತ್ತಿದ್ದಾರೆ.

ರವಿ ಮತ್ತವರ ತಂಡ ಈ ಬಾರಿ ಮುಖ್ಯವಾಗಿ ಮಕ್ಕಳಲ್ಲಿ ಜಾಗೃತಿಗಾಗಿ ಶಾಲಾ ಕಾಲೇಜುಗಳಿಗೂ ಭೇಟಿ ನೀಡುತ್ತಿದ್ದಾರೆ. ಇಂದು ಉಡುಪಿ ರಥಬೀದಿಯಲ್ಲಿ ಮೊಸರುಕುಡಿಕೆ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.

ವಿಶೇಷ ಎಂದರೆ ಈ ಬಾರಿ ರವಿ ಕಟಪಾಡಿ ಅವರೊಂದಿಗೆ ಆಶಿಕ್‌ ಎಂಬ ಯುವಕ ಕೂಡ ಅದೇ ಸಿನಿಮಾ ಹಿರೋಯಿನ್ ವೇಷ ಧರಿಸಿದ್ದಾರೆ. ಅವರಿಗೆ ದಿನೇಶ್ ಮಟ್ಟು ಅವರು ವೇಷಭೂಷಣ, ಮೇಕಪ್ ಮಾಡಿದ್ದು, ನೈಜವಾಗಿರುವ ಈ ವೇಷ ಜನ ಮನ ಸೆಳೆಯುತ್ತಿದೆ...........

ಜನರು ನೀಡುವ ಹಣ ನನಗಲ್ಲ, ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ 3 ಬಡ ಕುಟುಂಬಗಳ ಪುಟಾಣಿಗಳ ಜೀವ ಉಳಿಸುವುದಕ್ಕೆ ಈ ವೇಷ ಧರಿಸಿದ್ದೇನೆ. ಜನರ ಉದಾರ ಸಹಕಾರ ಬಯುಸುತ್ತಿದ್ದೇನೆ.

। ರವಿ ಕಟಪಾಡಿ

Share this article