ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹೋರಾಟ, ದೇಶಭಕ್ತಿ ಅಜರಾಮರವಾಗಿದೆ. ರಾಯಣ್ಣನ ಶೌರ್ಯ, ಸಾಹಸ ಯುವಕರಿಗೆ ಮಾದರಿಯಾಗಬೇಕಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.ತಾಲೂಕಿನ ಆನೆಮಡು ಗ್ರಾಮದಲ್ಲಿ ಭಾನುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಉದ್ಘಾಟಿಸಿ ಮಾತನಾಡಿದ ಅವರು, ಚಿಕ್ಕ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಸಂತಸವಾಗಿದೆ. ಬರುವ ದಿನಗಳಲ್ಲಿ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.ಮುಖಂಡರಾದ ಪಾಪಣ್ಣ ಉಡುಪಿ, ಮಲ್ಲಣ್ಣ ಸಾಲಿ, ಸಿದ್ದು ಬುಳ್ಳಾ, ಬಿ.ಡಿ.ಪಾಟೀಲ ಮಾತನಾಡಿ, ರಾಯಣ್ಣನ ಸಾಮಾಜಿಕ ಕಳಕಳಿ ಯುವ ಸಮೂಹಕ್ಕೆ ಪ್ರೇರಣೆ ಎಂದರು.ಗೊಳಸಾರದ ಅಭಿನವ ಪುಂಡಲಿಂಗ ಮಹಾರಾಜರು, ನಿಪನಾಳ ದೇವ ಋಷಿಗಳು ಹಾಗೂ ಹುಲಜಂತಿ ಕೈಲಾಸಮಠದ ಮಾಳಿಂಗ ಮಹಾರಾಜರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ತಾಲೂಕು ಕುರುಬರ ಸಂಘದ ಅಧ್ಯಕ್ಷ ಗುರುನಾಥ ಮುರಡಿ ಮಾತನಾಡಿ, ಹಾಲುಮತ ಸಮಾಜ ಯಾರಿಗೂ ಕೇಡು ಬಯಸದ, ಶತ್ರುಗಳಿಗೂ ಸಹ ಹಾಲೆರೆಯುವ ಸಮಾಜವಾಗಿದ್ದು, ರಾಯಣ್ಣ ಸಮಾಜಕ್ಕೆ ಸೀಮಿತಗೊಳಿಸದೆ ವಿಶ್ವ ವ್ಯಾಪ್ತಿ ಪಸರಿಸಬೇಕಾಗಿದೆ ಎಂದರು.ಶಿಲ್ಪಾ ಕುದರಗೂಂಡ ಅವರು ರಾಯಣ್ಣ ಹೋರಾಟದ ಕುರಿತು ಉಪನ್ಯಾಸ ನೀಡಿದರು. ಇದಕ್ಕೂ ಮೊದಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಾವಚಿತ್ರ ಮೆರವಣಿಗೆ ಕಳಸ, ಕುಂಭಗಳೊಂದಿಗೆ ಮೆರವಣಿಗೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಬೋರಮ್ಮ ಪೂಜಾರಿ, ಮುಖಂಡರಾದ ಸುರೇಶಗೌಡ ಪಾಟೀಲ ಸಾಸನೂರ, ಸಂತೋಷ ದೊಡ್ಡಮನಿ, ಭೀಮರಾಯ ಅಮರಗೋಳ, ಸಾಹೇಬಣ್ಣ ಬಾಗೇವಾಡಿ, ಸುನೀಲಗೌಡ ಪಾಟೀಲ, ಸುನೀಲ ಮಾಗಿ, ನಿಖಿಲ ಪಾಟೀಲ ಡಂಬಳ, ದತ್ತಾತ್ರೇಯ ಹೊಸಮಠ, ಕಬೂಲ ಕೊಕಟನೂರ, ಶರಣು ಪೂಜಾರಿ, ಭೀರು ದೇವೂರ, ಸಾಬಣ್ಣ ಅಲ್ಯಾಳ, ಯಲ್ಲಾಲಿಂಗ ಪೂಜಾರಿ, ಭೀಮಣ್ಣ ಪೂಜಾರಿ, ಮಂಜು ಪೂಜಾರಿ, ಮಾಳಪ್ಪ ಪೂಜಾರಿ ಸೇರಿದಂತೆ ಗ್ರಾಮದ ಮುಖಂಡರು ಭಾಗವಹಿಸಿದ್ದರು.