- ಎವಿಕೆ ರಸ್ತೆಯಲ್ಲಿ ಬೆಂಗಳೂರಿನ ಸಪ್ನ ಬುಕ್ ಹೌಸ್ನ 23ನೇ ಶಾಖೆ ಉದ್ಘಾಟನೆ ಕಾರ್ಯಕ್ರಮ
- - - ಕನ್ನಡಪ್ರಭ ವಾರ್ತೆ ದಾವಣಗೆರೆಮನೆಗಳಲ್ಲಿ ಪುಸಕ್ತಗಳನ್ನು ಅಲಂಕಾರಕ್ಕೆ ಸೀಮಿತವಾಗಿಡದೇ, ನಿಮ್ಮ ಜ್ಞಾನ, ತಿಳಿವಳಿಕೆ, ಅರಿವು ಹೆಚ್ಚಿಸಿಕೊಳ್ಳಲು ಅವುಗಳನ್ನು ಓದಬೇಕ. ಆ ಮೂಲಕ ಪುಸ್ತಕಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.
ನಗರದ ಎವಿಕೆ ರಸ್ತೆಯಲ್ಲಿ ಶುಕ್ರವಾರ ಬೆಂಗಳೂರಿನ ಸಪ್ನ ಬುಕ್ ಹೌಸ್ನ 23ನೇ ಶಾಖೆ ಉದ್ಘಾಟಿಸಿ ನಂತರ ವೇದಿಕೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಮನೆಗಳಲ್ಲಿ ಇರುವ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ರೂಢಿಸಿಕೊಳ್ಳಬೇಕು ಎಂದರು.ಓದಿ, ಜ್ಞಾನ ಸಂಪಾದಿಸಿಕೊಳ್ಳಲೆಂಬ ಸದುದ್ದೇಶದಿಂದ ಸಾಹಿತಿಗಳು ಸ್ನೇಹಪೂರ್ವಕವಾಗಿ ಪುಸ್ತಕ ನೀಡುತ್ತಾರೆ. ಪುಸ್ತಕಗಳಲ್ಲಿ ಸಿಗುವ ಜ್ಞಾನ, ಅರಿವನ್ನು ನೀವು ಬಳಸುವ ಯಾವುದೇ ಅತ್ಯಾಧುನಿಕ ವಿಧಾನದಲ್ಲೂ ಸಿಗುವುದಿಲ್ಲ. ಸ್ನೇಹಪೂರ್ವಕವಾಗಿ ನಿಮಗೆ ನೀಡುವ ಪುಸ್ತಕಗಳು, ಖರೀದಿಸಿದ ಪುಸ್ತಕಗಳು ಅಥವಾ ಯಾರ ಬಳಿಯಾದರೂ ಎರವಲು ಪಡೆದ ಪುಸ್ತಕವಾಗಿರಲಿ, ಮೊದಲು ಅದನ್ನು ನೀವು ಓದಬೇಕು. ಆಗ ಮಾತ್ರ ಪುಸ್ತಕಗಳನ್ನು ಬರೆದ ಸಾಹಿತಿಗಳ ಶ್ರಮವು ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮಾತನಾಡಿ, ನಮಗೆ ಬೇಕಾದ ಪುಸ್ತಕಗಳನ್ನು ಖರೀದಿಸಲು ಈ ಹಿಂದೆ ಬೆಂಗಳೂರಿಗೆ ಹೋಗಬೇಕಿತ್ತು. ಈಗ ಸಪ್ನ ಬುಕ್ ಹೌಸ್ ಇಲ್ಲಿ ಸ್ಥಾಪನೆಯಾಗಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ತಾವು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ ದಿನಗಳೆಲ್ಲಾ ಒಂದು ಕ್ಷಣ ಕಣ್ಣುಗಳ ಮುಂದೆ ಹಾದುಹೋದವು. ಹಳೆಯ ನೆನಪುಗಳೆಲ್ಲಾ ಮರುಕಳಿಸಿದವು ಎಂದರು.ನಿವೃತ್ತ ಡಿಜಿಪಿ ಡಾ. ಡಿ.ವಿ.ಗುರುಪ್ರಸಾದ ಮಾತನಾಡಿ, ಪೊಲೀಸ್ ಇಲಾಖೆಗೆ ಸಂಬಂಧಿಸಿದ 96 ಪುಸ್ತಕಗಳನ್ನು ಸಪ್ನ ಬುಕ್ ಹೌಸ್ ಪ್ರಕಾಶನದಡಿ ಪ್ರಕಟಿಸಿದ್ದಾರೆ. ಈ ಪುಸ್ತಕಗಳು ಅತ್ಯದ್ಭುತವಾಗಿವೆ. ಮಕ್ಕಳಿಗೆ ಓದುವ ಹವ್ಯಾಸವನ್ನು ಪಾಲಕರು ಬಾಲ್ಯದಿಂದಲೇ ಕಲಿಸಬೇಕು ಎಂದರು.
ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಮಾತನಾಡಿ, ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ಕಲೆ, ವಾಣಿಜ್ಯ ಸೇರಿದಂತೆ ಹತ್ತು ಹಲವು ಕಾಲೇಜುಗಳಿರುವ ದಾವಣಗೆರೆ ಈಗ ಧಾರವಾಡದಂತೆ ವಿದ್ಯಾಕಾಶಿಯಾಗಿ ಹೊರಹೊಮ್ಮಿದೆ. ವೈದ್ಯಕೀಯ, ಎಂಜಿನಿಯರಿಂಗ್ ಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸಲು ಸರ್ಕಾರ ಒತ್ತು ನೀಡಿದೆ. ಇದರಿಂದ ಸಪ್ನ ಬುಕ್ ಹೌಸ್ನಿಂದ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿದರೆ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ತಮ್ಮ ಮಾತೃಭಾಷೆಯಲ್ಲಿ ಓದಲು ಅನುಕೂಲವಾಗುತ್ತದೆ. ಏಷ್ಯಾದಲ್ಲೇ ಅತೀ ದೊಡ್ಜ ಮಳಿಗೆ ಹೊಂದಿರುವ ಬುಕ್ ಹೌಸ್ ಇದ್ದರೆ, ಅದು ಸ್ವಪ್ನ ಬುಕ್ ಹೌಸ್ ಎಂದು ಶ್ಲಾಘಿಸಿದರು.ಹಿರಿಯ ಸಾಹಿತಿ, ವಿದ್ವಾಂಸ ನಾಡೋಜ ಪ್ರೊ. ಹಂ.ಪ. ನಾಗರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಎಚ್.ಎನ್. ಕೃಷ್ಣ, ಸ್ವಪ್ನ ಬುಕ್ ಹೌಸ್ ಮಾಲೀಕರಾದ ನಿತಿನ್ ಶಾ, ನಿಜೇಶ್ ಶಾ, ವ್ಯವಸ್ಥಾಪಕ ದೊಡ್ಡೇಗೌಡ ಇತರರು ಇದ್ದರು. ಸಾಹಿತಿ ವತ್ಸಲಾ ಮೋಹನ್ ನಿರೂಪಣೆ ಮಾಡಿದರು. ಬಸಾಪುರ ಬಸವ ಕಲಾ ಲೋಕದ ಅರುಣ ಮತ್ತು ತಂಡದವರು ನಾಡಗೀತೆ ಹಾಡಿದರು.
- - - -13ಕೆಡಿವಿಜಿ8: ದಾವಣಗೆರೆಯಲ್ಲಿ ಸಪ್ನ ಬುಕ್ ಹೌಸ್ ಉದ್ಘಾಟನಾ ಸಮಾರಂಭವನ್ನು ಜಿಲ್ಲಾ ಎಸ್ಪಿ ಉಮಾ ಪ್ರಶಾಂತ ಉದ್ಘಾಟಿಸಿದರು. ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ನಾಡೋಜ ಪ್ರೊ. ಹಂ.ಪ. ನಾಗರಾಜಯ್ಯ, ನಿತಿನ್ ಶಾ ಇತರರು ಇದ್ದರು.- - - -13ಕೆಡಿವಿಜಿ14: ದಾವಣಗೆರೆಯಲ್ಲಿ ಸಪ್ನ ಬುಕ್ ಹೌಸ್ ಉದ್ಘಾಟಿಸಿದ ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸಂಸ್ಥೆ ಮಾಲೀಕ ನಿತಿನ್ ಶಾ, ನಾಡೋಜ ಪ್ರೊ.ಹಂ.ಪ.ನಾಗರಾಜಯ್ಯ ಶಾಖೆ ಬಗ್ಗೆ ವಿವರಿಸಿದರು.