ಸಮಾಜದ ಸತ್ಯದರ್ಶನಕ್ಕಾಗಿ ಸಾಹಿತ್ಯ ಓದಿ: ಜಯಪ್ರಕಾಶ ಶೆಟ್ಟಿ

KannadaprabhaNewsNetwork |  
Published : Feb 22, 2026, 02:30 AM IST
ಕಾರವಾರ ನಗರದ ಶಿವಾಜಿ ಶಿಕ್ಷಣ ಸಂಸ್ಥೆಯ ಶಂಕರ ಬಾಬಿ ಸಾವಂತ ವೇದಿಕೆಯಲ್ಲಿ ಶನಿವಾರ ಕಾರವಾರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪ್ರಾಂಶುಪಾಲ ಪ್ರೊ. ಜಯಪ್ರಕಾಶ ಶೆಟ್ಟಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಕಾರವಾರ ನಗರದ ಶಿವಾಜಿ ಶಿಕ್ಷಣ ಸಂಸ್ಥೆಯ ಶಂಕರ ಬಾಬಿ ಸಾವಂತ ವೇದಿಕೆಯಲ್ಲಿ ಶನಿವಾರ ಕಾರವಾರ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಪ್ರಾಂಶುಪಾಲ ಪ್ರೊ. ಜಯಪ್ರಕಾಶ ಶೆಟ್ಟಿ ಉದ್ಘಾಟಿಸಿದರು.

ಕಾರವಾರ: ಬಹುಭಾಷೆ, ಬಹುಸಂಸ್ಕೃತಿಯ ಬೀಡಾದ ಗಡಿ ಪ್ರದೇಶವಾದ ಕಾರವಾರದಲ್ಲಿ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಅತ್ಯಂತ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಜರುಗಿತು.

ನಗರದ ಶಿವಾಜಿ ಶಿಕ್ಷಣ ಸಂಸ್ಥೆಯ ಶಂಕರ ಬಾಬಿ ಸಾವಂತ ವೇದಿಕೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು, ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಪ್ರಕಾಶ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ನಾವು ಅಜ್ಞಾನದ ಬೆಳಕಿನಿಂದ ಜ್ಞಾನದ ಕೇಡನ್ನು ನೋಡುವ ಆತಂಕದ ಕಾಲದಲ್ಲಿದ್ದೇವೆ. ಸುಳ್ಳುಗಳು ವಿಜೃಂಭಿಸುತ್ತಿರುವ ಈ ಹೊತ್ತಿನಲ್ಲಿ, ಸತ್ಯಕ್ಕೆ ಚಿರಾಯುಷ್ಯ ಹಾಗೂ ಸುಳ್ಳಿಗೆ ಅಲ್ಪಾಯುಷ್ಯ ಎಂಬುದನ್ನು ಯುವಜನತೆ ಅರಿಯಬೇಕು ಎಂದು ಕಿವಿಮಾತು ಹೇಳಿದರು.

ಸಾಹಿತ್ಯವನ್ನು ಕೇವಲ ವಿಮರ್ಶೆಗಾಗಿ ಓದದೇ, ಸಮಾಜದ ಸತ್ಯದ ದರ್ಶನಕ್ಕಾಗಿ ಓದಬೇಕು ಎಂದ ಅವರು, ಆದಿಕವಿ ಪಂಪ, ಯಶವಂತ ಚಿತ್ತಾಲ, ಆರ್.ವಿ. ಭಂಡಾರಿ ಅವರಂಥ ದಿಗ್ಗಜರ ಸಾಹಿತ್ಯಿಕ ಕೊಡುಗೆ ಸ್ಮರಿಸಿದರು. ಗಾಂಧೀಜಿ ಅವರೊಂದಿಗಿನ ಈ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ನಂಟನ್ನು ವಿಶೇಷವಾಗಿ ಸ್ಮರಿಸಿದರು.

ಕಾರವಾರ-ಅಂಕೋಲಾ ಶಾಸಕ ಸತೀಶ ಸೈಲ್ ಮಾತನಾಡಿ, ಕಾರವಾರದಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಸೂಕ್ತ ಜಾಗ ಒದಗಿಸಿದರೆ, ಸುಸಜ್ಜಿತವಾದ ಹೊಸ ಕನ್ನಡ ಭವನವನ್ನೇ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ, ಕಾರವಾರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶೀಘ್ರದಲ್ಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಆಗಮಿಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು. ಅಲ್ಲದೇ ಜನರಿಗೋಸ್ಕರ ಕೆಲಸ ಮಾಡಲು ತಾನು ಎಂದಿಗೂ ಸಿದ್ಧನಿದ್ದೇನೆ. ಈ ನಿಟ್ಟಿನಲ್ಲಿ ಪಕ್ಷಭೇದ ಮರೆತು ಎಲ್ಲರೂ ಒಟ್ಟಿಗೆ ಇರೋಣ, ಕನ್ನಡ ಉಳಿವಿಗೆ ಎಲ್ಲರೂ ಸೇರಿ ಶ್ರಮಿಸೋಣ ಎಂದು ಕರೆಕೊಟ್ಟರು.

ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಅವರು ಆಶಯ ನುಡಿಗಳನ್ನಾಡಿ, 15ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಗಡಿಭಾಗದ ಕನ್ನಡ ಶಾಲೆಗಳು ಮತ್ತು ಅಂಗನವಾಡಿಗಳನ್ನು ಮುಚ್ಚಲು ಸರ್ಕಾರ ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲೇ ಅತಿ ಹೆಚ್ಚು ಬುಡಕಟ್ಟು ಸಮುದಾಯಗಳನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಕುಣಬಿ, ಹಾಲಕ್ಕಿ, ಗೌಳಿ, ಗೊಂಡ ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಮೀಸಲಾತಿ ಪಡೆಯುವ ಅರ್ಹತೆಯಿದೆ. ಆದರೆ ಮೀಸಲಾತಿ ನೀಡಿದರೆ ಇಡೀ ಜಿಲ್ಲೆ ಮೀಸಲಾತಿ ಕ್ಷೇತ್ರವಾಗಲಿದೆ ಎಂಬ ಆಳುವವರ ರಾಜಕೀಯ ಭಯದಿಂದಾಗಿ ಈ ಸಮುದಾಯಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕೇವಲ ಶಿಷ್ಟ ಸಾಹಿತಿಗಳನ್ನು ಮಾತ್ರ ಆಯ್ಕೆ ಮಾಡುವ ಸಂಪ್ರದಾಯವನ್ನು ಬದಿಗೊತ್ತಿ, ಈ ಬಾರಿ ಬುಡಕಟ್ಟು ಸಮುದಾಯದ ರಂಗಭೂಮಿ ಕಲಾವಿದ ಗೋವಿಂದ ಕುಮಾರ್ ಗೌಡ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದರ ಕುರಿತು ಮೆಚ್ಚುಗೆ ಸೂಚಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಕಸಾಪ ಅಧ್ಯಕ್ಷ ರಾಮಾ ನಾಯ್ಕ, ಕಾರವಾರದ ಗಡಿಭಾಗದಲ್ಲಿ ಕನ್ನಡ ಗಟ್ಟಿಯಾಗಲು ಕನ್ನಡ ಸಾಹಿತ್ಯ ಪರಿಷತ್ ಬಿತ್ತಿದ ಪ್ರೀತಿಯ ಬೀಜವೇ ಕಾರಣ ಎಂದರು. ಕಳೆದ ಮೂರು ವರ್ಷಗಳಿಂದ ಸಮ್ಮೇಳನಕ್ಕೆ ಸರ್ಕಾರದಿಂದ ಅನುದಾನ ಬಂದಿಲ್ಲ, ದಾನಿಗಳ ನೆರವಿನಿಂದಲೇ ಈ ನುಡಿಹಬ್ಬವನ್ನು ಆಚರಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿ, ಕಾರವಾರದಲ್ಲಿ ಉಚಿತ ರಂಗಮಂದಿರದ ಅಗತ್ಯವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮದ ಆರಂಭಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರಾದ ಸಾಹಿತಿಗಳು, ರಂಗಭೂಮಿ ಕಲಾವಿದರಾದ ಜಿ.ಡಿ. ಗೋವಿಂದಕುಮಾರ ಅವರನ್ನು ನಗರದ ಮಿತ್ರಸಮಾಜ ಮೈದಾನದಿಂದ ಸಮ್ಮೇಳನದ ವೇದಿಕೆ ವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಈ ವೇಳೆ ಆಯೋಜಿಸಲಾಗಿದ್ದ ಬರೋಬ್ಬರಿ 500 ಮೀಟರ್ ಉದ್ದದ ಬೃಹತ್ ಕನ್ನಡ ಧ್ವಜದ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು. ವೇದಿಕೆಯಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಪ್ರೇಮಾ ಟಿ.ಎಂ.ಆರ್., ಕರಾವಳಿ ಮುಂಜಾವು ಸಂಪಾದಕ ಗಂಗಾಧರ ಹಿರೇಗುತ್ತಿ, ಕೆ.ಪಿ. ನಾಯ್ಕ, ಜಿ.ಡಿ. ಮನೋಜೆ, ಪಿ.ಆರ್. ನಾಯ್ಕ, ದೇವಿದಾಸ ನಾಯ್ಕ, ಮಾಧವ ನಾಯ್ಕ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಳ್ಳತನದ ಆತಂಕ: ಕನಕಾಚಲಪತಿ ದೇಗುಲದ ಆಭರಣ ಗಂಗಾವತಿಗೆ ಶಿಪ್ಟ್
ಭೂ ಗ್ಯಾರಂಟಿ ಪ್ರಭಾವ: ಸರ್ಕಾರಿ ಜಾಗೆಗೆ ಲಗ್ಗೆಯಿಟ್ಟ ಗ್ರಾಮಸ್ಥರು