ಲಕ್ಷ್ಮೇಶ್ವರ: ಪ್ರತಿಯೊಬ್ಬ ಮಗುವಿನಲ್ಲಿ ಒಂದಲ್ಲ ಒಂದು ವಿಶಿಷ್ಟ ಪ್ರತಿಭೆ, ಆಸಕ್ತಿ ಹಾಗೂ ಸೃಜನಶೀಲತೆ ಅಡಗಿರುತ್ತದೆ. ಮಕ್ಕಳಲ್ಲಿರುವ ಅಭಿರುಚಿ ಮತ್ತು ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ತಕ್ಕಂತೆ ಪ್ರೋತ್ಸಾಹ ನೀಡುವ ಜವಾಬ್ದಾರಿ ಪೋಷಕರು, ಶಿಕ್ಷಕರು ಹಾಗೂ ಸಮಾಜದ ಮೇಲಿದೆ ಎಂದು ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಹೇಳಿದರು.ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಸಾಹಿತಿ ಪ್ರೊ. ಸಿ.ವಿ. ಕೆರಿಮನಿ ಅವರು ಮಕ್ಕಳ ಸಾಹಿತ್ಯಕ್ಕೆ ನೀಡಿದ ಕೊಡುಗೆ ಕುರಿತು ಮಾತನಾಡಿದರು.
ಮಗುವಿನ ಆಸಕ್ತಿಗೆ ವಿರುದ್ಧವಾಗಿ ಒತ್ತಡ ಹೇರುವುದರಿಂದ ಅದರ ಸಹಜ ಪ್ರತಿಭೆ ಕುಂಠಿತವಾಗುವ ಸಾಧ್ಯತೆಯಿದೆ. ಬದಲಾಗಿ, ಮಕ್ಕಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಬೆಳೆಯಲು ಅಗತ್ಯವಾದ ಅವಕಾಶ, ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಬೇಕು. ಅವರ ಸಣ್ಣ ಸಾಧನೆಗಳನ್ನೂ ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.
ಪ್ರೊ. ಸಿ.ವಿ. ಕೆರಿಮನಿ ಹಾಗೂ ಎ.ಕೆ. ರಾಮೇಶ್ವರ ಸಂಪಾದಿತ ಬಾರೋ ಬಾರೋ ಚಂದ್ರಾಮ, ಪಾಟಿ ಮ್ಯಾಲ ಪಾಟಿ ನಮ್ಮ ಸಾಲಿ ಸೂಟಿ, ಮಕ್ಕಳ ಮನವೊಂದು ಬಿಳಿಹಾಳೆ ಕೃತಿಗಳು ಮಕ್ಕಳ ಹಾಗೂ ಓದುಗರ ಮನಗೆದ್ದಿವೆ ಎಂದರು.ಈ ವೇಳೆ ಸಾಹಿತಿ ಸಿ.ಆರ್. ಗೋಕಾವಿ ಹಾಗೂ ಪ್ರಗತಿಪರ ಚಿಂತಕ ರಾಮಗೇರಿಯ ಶಂಕರಣ್ಣ ಕಾಳೆ ಅವರು ಪ್ರೊ. ಸಿ.ವಿ. ಕೆರಿಮನಿ ಅವರ ಜತೆಗಿನ ಒಡನಾಟವನ್ನು ಸ್ಮರಿಸಿದರು.
ಸಮಾರಂಭದಲ್ಲಿ ಪಿ.ಬಿ. ಕರಾಟೆ, ಎಸ್.ಎಫ್. ಆದಿ, ಜಿ.ಎಸ್. ರಾಮಶೆಟ್ಟರ್, ಎಲ್.ಎಸ್. ಅರಳಿಹಳ್ಳಿ ದೇವಣ್ಣ ಬಳಿಗಾರ, ಶಕುಂತಲಾ ಅಳಗವಾಡಿ ನಿರ್ಮಲಾ ಅರಳಿ, ಪ್ರತಿಮಾ ಮಹಾಜನಶೆಟ್ಟರ, ಲಲಿತಕ್ಕ ಕೆರಿಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ನಾಗರಾಜ್ ಮಜ್ಜಿಗುಡ್ಡ ಕಾರ್ಯಕ್ರಮ ನಿರೂಪಿಸಿದರು. ರತ್ನಾಕರ್ಕಿ ಸ್ವಾಗತಿಸಿದರು. ನಾಗರಾಜ್ ಕಳಸಾಪುರ್ ವಂದಿಸಿದರು.