ಬಿಜಪಿ ಪಕ್ಷದಿಂದ ವಿಕಸಿತ ಭಾರತ ಸಂಕಲ್ಪ ಸಭೆ
ಪ್ರಧಾನಿ ನರೇಂದ್ರ ಮೋದಿಯವರು ಪ್ರಪಂಚದ ವಿವಿಧ ದೇಶಗಳಿಗೆ ಸಲಹೆ ನೀಡುವ ರೀತಿಯಲ್ಲಿ ಬೆಳವಣಿಗೆ ಹೊಂದಿದ್ದು ಈಗ ಭಾರತ ದೇಶ ತಲೆ ಎತ್ತಿ ನಿಂತಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ತಿಳಿಸಿದರು.
ಮಂಗಳವಾರ ಪಟ್ಟಣದ ಕರಿಬಸವೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಸಭೆ ಹಾಗೂ ಬಿಜೆಪಿ ಪಕ್ಷದ ಸ್ಥಾಪಕ ಅಧ್ಯಕ್ಷ ಶ್ಯಾಂ ಪ್ರಸಾದ್ ಮುಖರ್ಜಿ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಮೊದಲು ಭಾರತದ ಪ್ರಧಾನಿ ಆದವರು ವಿದೇಶಕ್ಕೆ ಹೋದರೆ ಸಾಕಷ್ಟು ಗೌರವ ಸಿಗುತ್ತಿರಲಿಲ್ಲ. ಆದರೆ ನರೇಂದ್ರ ಮೋದಿಯವರನ್ನು ಕೆನಡಾ, ಅಮೆರಿಕಾ ಸೇರಿದಂತೆ ಬಲಿಷ್ಠ ರಾಷ್ಟ್ರಗಳು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತಿದ್ದಾರೆ. ಪಾಕಿಸ್ತಾನ ದೇಶದ ಒಳಗೆ ನುಗ್ಗಿ ಭಯೋತ್ಪಾದಕರನ್ನು ಹೊಡೆಯುವ ತಾಕತ್ತು ಭಾರತ ದೇಶಕ್ಕೆ ಬಂದಿದೆ. ಇರಾನ್, ಇಸ್ರೇಲ್ ಯುದ್ಧ ನಡೆಯುವ ಸಂದರ್ಭದಲ್ಲಿ ಆ ದೇಶಗಳಲ್ಲಿ ಇರುವ ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಇತರ ಭಾರತೀ ಯರನ್ನು ಕರೆ ತರುವ ಕಾರ್ಯ ಭಾರತ ದೇಶ ಮಾತ್ರ ಮಾಡುತ್ತಿದೆ. ಇದಕ್ಕೆ 11 ವರ್ಷ ಪ್ರಧಾನಿಯಾದ ನರೇಂದ್ರ ಮೋದಿ ಕಾರಣರಾಗಿದ್ದಾರೆ ಎಂದರು.ಪ್ರತಿ ಮನೆಗೆ ಕುಡಿಯುವ ನೀರು ಕೊಡುವ ಜಲ್ ಜೀವನ್ ಮಿಷನ್ ಯೋಜನೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ್ದು, ಆದರೆ, ಒಂದು ಹನಿ ನೀರು ಜನರಿಗೆ ತಲುಪುತ್ತಿಲ್ಲ ಎಂದರು. ದೀನ್ ದಯಾಳ್ ಉಪಾಧ್ಯ ಯೋಜನೆಯಡಿ ಬಡವರ ಮನೆಗೆ ವಿದ್ಯುತ್, ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ನೀಡಲಾಗುತ್ತಿದೆ. ನಮ್ಮ ಹೆಮ್ಮೆಯ ಪ್ರಧಾನಿ ಇನ್ನೂ 10 ವರ್ಷ ಪ್ರಧಾನಿ ಯಾಗಿ ಕೆಲಸ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದರು.
ಶ್ಯಾಂ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಚಾರ್ಚನೆ ಮಾಡಲಾಯಿತು. ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಅರುಣಕುಮಾರ್, ಹೋಬಳಿ ಅಧ್ಯಕ್ಷ ಎಚ್.ಡಿ.ಲೋಕೇಶ್, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ದಯಾನಂದ್, ವಕ್ತಾರ ಎನ್.ಎಂ.ಕಾಂತರಾಜ್ ಇದ್ದರು.