ಮಂಗಳೂರು: ಭಾರತೀಯ ರೆಡ್ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ನಗರದ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಗೆ ಮೂರು ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ಕೊಡುಗೆಯಾಗಿ ನೀಡಲಾಯಿತು. ಕೊಡುಗೆ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್.ಎಂ.ಆರ್. ಮಾತನಾಡಿ, ಜಿಲ್ಲಾ ರೆಡ್ಕ್ರಾಸ್ ಸೊಸೈಟಿಯ ಈ ಕೊಡುಗೆ ಉನ್ನತ ದೃಷ್ಟಿಕೋನದ ಸೇವೆಯಾಗಿದೆ. ಆಸ್ಪತ್ರೆಯ ರೋಗಿಗಳು, ವೈದ್ಯರು ಹಾಗೂ ಶುಶ್ರೂಷಕಿಯರಿಗೆ ಸಂಬಂಧಿಸಿದ ಯಾವುದೇ ಸರ್ಜಿಕಲ್ ಬಟ್ಟೆಗಳಲ್ಲಿ ನ್ಯೂನತೆಯಾದ ಸಂದರ್ಭ ಅದನ್ನು ಹೊಲಿದು ಸುಸ್ಥಿತಿಯಲ್ಲಿ ಉಪಯೋಗ ಮಾಡಲು ಈ ಹೊಲಿಗೆ ಯಂತ್ರಗಳು ಬಹಳಷ್ಟು ಉಪಕಾರಿಯಾಗುತ್ತದೆ ಎಂದರು.
ಜಿಲ್ಲಾ ರೆಡ್ಕ್ರಾಸ್ ಸೊಸೈಟಿ ಖಜಾಂಜಿ ಗುರುದತ್ ಎಂ. ನಾಯಕ್, ಕಾರ್ಯದರ್ಶಿ ಡಾ.ಸತೀಶ್ ಕುಮಾರ್ ಶೆಟ್ಟಿ, ಸಂಯೋಜಕ ಗಿರೀಶ್, ಲೇಡಿಗೋಷನ್ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಜಗದೀಶ್, ಹಿರಿಯ ತಜ್ಞ ಡಾ.ದಯಾನಂದ್, ನರ್ಸಿಂಗ್ ವಿಭಾಗದ ಮುಖ್ಯಸ್ಥರಾದ ಗೀತಾ ಮತ್ತು ಮಲ್ಲಿಕಾ ಇದ್ದರು.
ಜ್ಯೋತಿಪ್ರಭಾ ಸ್ವಾಗತಿಸಿದರು. ಶುಶ್ರೂಷಾಧಿಕಾರಿಗಳಾದ ಅಂಬಿಕಾ ಮತ್ತು ಜಯಲಕ್ಷ್ಮಿ ನಿರೂಪಿಸಿದರು.