ರಾಸಾಯನಿಕ ಗೊಬ್ಬರ ತಗ್ಗಿಸಿ, ಸಾವಯವ ಕೃಷಿಗೆ ಆದ್ಯತೆ ನೀಡಿ

KannadaprabhaNewsNetwork |  
Published : Jun 24, 2026, 02:00 AM IST
ಕೋಳೂರು ಹೋಬಳಿಯ ದಮ್ಮೂರು ಗ್ರಾಮದ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ‘ಖೇತ್ ಬಚಾವೋ ಅಭಿಯಾನ್, ಧರ್ತಿ ಮಾತಾ ಬಚಾವೋ’ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  | Kannada Prabha

ಸಾರಾಂಶ

ಸಸ್ಯಗಳ ಸಮೃದ್ಧ ಬೆಳವಣಿಗೆಗೆ 16 ಅತ್ಯಗತ್ಯ ಪೋಷಕಾಂಶಗಳ ಅವಶ್ಯಕತೆ ಇದೆ.

ಬಳ್ಳಾರಿ: ಪ್ರಸ್ತುತ ದಿನಗಳಲ್ಲಿ ಮಣ್ಣಿನ ಆರೋಗ್ಯ ಕಾಪಾಡುವುದು ಅತ್ಯಂತ ಅಗತ್ಯವಾಗಿದೆ. ರೈತರು ಅತಿಯಾಗಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಮಾಡುವುದನ್ನು ತಗ್ಗಿಸಬೇಕು. ಭೂಮಿಯ ಫಲವತ್ತತೆ ಹೆಚ್ಚಿಸಲು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಕರೆ ನೀಡಿದರು.

ಕೋಳೂರು ಹೋಬಳಿಯ ದಮ್ಮೂರು ಗ್ರಾಮದ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಕೃಷಿ ಇಲಾಖೆ, ಬಳ್ಳಾರಿ ಹಾಗೂ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಹಗರಿ ಜಂಟಿ ಸಹಯೋಗದೊಂದಿಗೆ ಆಯೋಜಿಸಿದ್ದ ಖೇತ್ ಬಚಾವೋ ಅಭಿಯಾನ್, ಧರ್ತಿ ಮಾತಾ ಬಚಾವೋ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೆವಿಕೆ ಹಗರಿಯ ಕೃಷಿ ವಿಜ್ಞಾನಿ ಡಾ.ರವಿ ಮಾತನಾಡಿ, ಸಸ್ಯಗಳ ಸಮೃದ್ಧ ಬೆಳವಣಿಗೆಗೆ 16 ಅತ್ಯಗತ್ಯ ಪೋಷಕಾಂಶಗಳ ಅವಶ್ಯಕತೆ ಇದೆ. ಇವುಗಳಲ್ಲಿ ಕೆಲವು ಮಣ್ಣಿನಲ್ಲಿ ಲಭ್ಯವಿದ್ದರೆ ಇನ್ನು ಕೆಲವು ಪೋಷಕಾಂಶಗಳು ವಾತಾವರಣದಿಂದ ದೊರೆಯುತ್ತವೆ. ರೈತರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಿ, ಅದರಿಂದ ಬರುವ ಫಲಿತಾಂಶದ ಆಧಾರದಲ್ಲಿ ರಸಗೊಬ್ಬರಗಳನ್ನು ಸಮರ್ಪಕವಾಗಿ ಬಳಸಬೇಕು ಎಂದು ವೈಜ್ಞಾನಿಕ ಮಾಹಿತಿ ನೀಡಿದರು.

ಇನ್ನೋರ್ವ ವಿಜ್ಞಾನಿ ಡಾ.ನವೀನ್ ಮಾತನಾಡಿ, ಮನೆಯಲ್ಲೇ ತಯಾರಿಸಬಹುದಾದ ಪಂಚಗವ್ಯ, ಜೀವಾಮೃತ, ಬೀಜಾಮೃತದಂತಹ ಸಾವಯವ ಕೃಷಿ ಪರಿಕರಗಳನ್ನು ಬಳಸುವುದರಿಂದ ಕೃಷಿ ವೆಚ್ಚವನ್ನು ಗಣನೀಯವಾಗಿ ತಗ್ಗಿಸಬಹುದು. ನಮ್ಮ ಮುಂದಿನ ಪೀಳಿಗೆಗೆ ವಿಷಮುಕ್ತ ಆಹಾರವನ್ನು ನೀಡಲು ಸಾಧ್ಯವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಕೃಷಿ ಅಧಿಕಾರಿ ಬಸವರಾಜ್ ಕೃಷಿ ಇಲಾಖೆಯಲ್ಲಿ ಲಭ್ಯವಿರುವ ವಿವಿಧ ಯೋಜನೆಗಳು ಹಾಗೂ ಸಹಾಯಧನಗಳ ಬಗ್ಗೆ ರೈತರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ರೈತ ಸಂಪರ್ಕ ಕೇಂದ್ರದ ಅಧಿಕಾರಿ ಡಾ.ಅರುಣಾ ತೊಗರಿ ಬೆಳೆಯಲ್ಲಿ ಬೀಜೋಪಚಾರ ಮಾಡುವ ಸುಲಭ ವಿಧಾನಗಳು ಮತ್ತು ಅದರ ಮಹತ್ವವನ್ನು ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ, ಪ್ರಮುಖರಾದ ದಯಾನಂದ, ಉಮೇಶ್, ಕೃಷಿ ಅಧಿಕಾರಿ ಯೇಸುಬಾಬು, ಆತ್ಮ ಸಂಸ್ಥೆಯ ಸಿಬ್ಬಂದಿ ಕವಿತಾ, ರೇಣುಕಾರಾಧ್ಯ, ರೈತರಾದ ಆದಿನಾರಾಯಣ ರೆಡ್ಡಿ, ಶಂಕರ ಗೌಡ, ಜೆ. ನಾರಾಯಣ ರೆಡ್ಡಿ, ರೇವಣಸಿದ್ಧಯ್ಯ ಸ್ವಾಮಿ, ಮಾಣಿಕ್ಯ ರೆಡ್ಡಿ ಹಾಗೂ ಸ್ಥಳೀಯ ಕೃಷಿ ಸಖಿಯರು ಉಪಸ್ಥಿತರಿದ್ದರು.

ದಮ್ಮೂರು ಮತ್ತು ಕೋಳೂರು ಗ್ರಾಮದ ನೂರಾರು ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೃಷಿ ತಜ್ಞರಿಂದ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನ ಪಡೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಂಧ್ರ ಜೋಳ ಕರ್ನಾಟಕದಲ್ಲಿ ಮಾರಾಟ ಮಾಡುವ ಜಾಲ ಪತ್ತೆ; ಪ್ರಕರಣ ದಾಖಲು
ಸ್ವರ್ಣವಲ್ಲೀ ಶ್ರೀಗಳ 59ನೇ ವರ್ಧಂತಿ ಉತ್ಸವ