ಕನ್ನಡಪ್ರಭ ವಾರ್ತೆ ಬೆಂಗಳೂರು
ಮೈಸೂರು ದಸರಾ ಜಂಬೂ ಸವಾರಿಗೆ ಕಾಡಿನಿಂದ ಬಂದಿರುವ ಆನೆಗಳೊಂದಿಗೆ ಸಾರ್ವಜನಿಕರು ರೀಲ್ಸ್ ಮಾಡಲು, ಫೋಟೋ ತೆಗೆಸಿಕೊಳ್ಳಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಅದರಿಂದ ಆನೆಗಳು ವಿಚಲಿತವಾಗಿದ್ದು, ಅನುಚಿತವಾಗಿ ವರ್ತಿಸುತ್ತಿವೆ. ಕೆಲದಿನಗಳ ಹಿಂದೆ ಕಂಜನ್ ಮತ್ತು ಧನಂಜಯ ಆನೆಗಳ ನಡುವೆ ಕಾದಾಟವಾಗಲು ಇದೂ ಕಾರಣ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆನೆಗಳನ್ನು ವೀಕ್ಷಿಸಲು ಬರುವವರಲ್ಲಿ ಕೆಲವರು ರೀಲ್ಸ್ ಮಾಡುವುದರ ಜತೆಗೆ ಆನೆಗಳ ಸೊಂಡಿಲನ್ನು ತಬ್ಬಿಕೊಂಡು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಶಿಬಿರದಿಂದ ಬಂದಿರುವ ಆನೆಗಳು ಸುರಕ್ಷಿತವಾಗಿ ಶಿಬಿರಕ್ಕೆ ವಾಪಾಸಾಗುವವರೆಗೂ ಯಾವುದೇ ಅನಾಹುತವಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಇನ್ನು ಮುಂದೆ ಆನೆಗಳೊಂದಿಗೆ ರೀಲ್ಸ್ ಮಾಡಲು, ಅನುಚಿತವಾಗಿ ಭಾವಚಿತ್ರ ತೆಗೆಸಿಕೊಳ್ಳಲು ಅವಕಾಶ ನೀಡಬಾರದು ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ.