ಸ್ವಾಮಿ ವಿವೇಕಾನಂದರು ಯೋಗಾಭ್ಯಾಸದಿಂದ ಜ್ಞಾನ, ಪ್ರೀತಿ, ಸಂತೋಷ, ಬೆಳಕಿನ ಭಾವ ಹೆಚ್ಚುತ್ತದೆ ಎಂದು ತಿಳಿಸಿದ್ದಾರೆ. ಭಾರತವು ಯೋಗವನ್ನು ಜಗತ್ತಿಗೆ ಕೊಡುಗೆಯನ್ನಾಗಿ ನೀಡಿದೆ. ಯೋಗ ಎನ್ನುವುದು ದೇಹ ಹಾಗೂ ಮನಸ್ಸನ್ನು ಸದಾ ಕ್ರಿಯಾಶೀಲವಾಗಿಡುವ ಮಾರ್ಗವಾಗಿದೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಇಂದಿನ ತಾಂತ್ರಿಕ ಯುಗದಲ್ಲಿ ಮನುಷ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ಸತ್ವಾಂಶ ಕಡಿಮೆಯಾಗುತ್ತಿದೆ. ಹೀಗಾಗಿ ಸ್ವಸ್ಥ ಮಾನಸಿಕ ಹಾಗೂ ಶಾರೀರಿಕ ಆರೋಗ್ಯಕ್ಕಾಗಿ ಯೋಗಾಭ್ಯಾಸವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಪಟ್ಟಣದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಬಿ.ಕೇಶವಮೂರ್ತಿ ಕರೆ ನೀಡಿದರು.
ಪಟ್ಟಣದ ಹೊರವಲಯದಲ್ಲಿರುವ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕುರಿತು ಅವರು ಮಾತನಾಡಿದರು.
ಮಾನಸಿಕ ಒತ್ತಡ ನಿವಾರಣೆ
ಇಂದಿನ ಆಧುನಿಕತೆಯ ತಾಂತ್ರಿಕ ಜೀವನದಲ್ಲಿ ಮಾನವನಿಗೆ ಮಾನಸಿಕ ಒತ್ತಡವು ಅಧಿಕವಾಗಿದ್ದು, ಅದನ್ನು ನಿವಾರಿಸಿಕೊಳ್ಳಲು ಇಲ್ಲಸಲ್ಲದ ದಾರಿಗಳನ್ನು ಹುಡುಕಿಕೊಳ್ಳುವುದರ ಬದಲು ಯೋಗಮಾರ್ಗಗಳನ್ನು ಅನುಸರಿಸುವುದರಿಂದ ಮನುಷ್ಯನು ಮಾನಸಿಕ ಜೊತೆ ಶಾರೀರಿಕವಾಗಿಯೂ ಸಧೃಢವಾಗುವುದರಲ್ಲಿ ಅನುಮಾನಗಳಿಲ್ಲ ಎಂದರು.
ಸ್ವಾಮಿ ವಿವೇಕಾನಂದರು ಯೋಗಾಭ್ಯಾಸದಿಂದ ಜ್ಞಾನ, ಪ್ರೀತಿ, ಸಂತೋಷ, ಬೆಳಕಿನ ಭಾವ ಹೆಚ್ಚುತ್ತದೆ ಎಂದು ತಿಳಿಸಿದ್ದಾರೆ. ಭಾರತವು ಯೋಗವನ್ನು ಜಗತ್ತಿಗೆ ಕೊಡುಗೆಯನ್ನಾಗಿ ನೀಡಿದೆ ಎಂದು ತಿಳಿಸಿದರು.
ದೇಹ ಸದಾ ಕ್ರೀಯಾಶೀಲ
ಯೋಗ ಎನ್ನುವುದು ದೇಹ ಹಾಗೂ ಮನಸ್ಸನ್ನು ಸದಾ ಕ್ರಿಯಾಶೀಲವಾಗಿಡುವ ಮಾರ್ಗವಾಗಿದೆ. ಯೋಗ ಎಂಬುದು ದೀಪ. ಒಮ್ಮೆ ನೀವು ಅದನ್ನು ಹೊತ್ತಿಸಿದರೆ ಅದರ ಬೆಳಕು ಎಂದಿಗೂ ನಂದಿ ಹೋಗದು. ಪ್ರತಿದಿನ ಯೋಗಭ್ಯಾಸ ಮಾಡಿದಂತೆಲ್ಲ ದೀಪ ಪ್ರಜ್ವಲಿಸತ್ತಲೇ ಇರುತ್ತದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ದಿನನಿತ್ಯವೂ ಯೋಗ ಮಾಡುವುದನ್ನು ಅಳವಡಿಸಿಕೊಳ್ಳಬೇಕು ಎಂದರು.
ವಿವಿಧ ಆಸನಗಳ ಅಭ್ಯಾಸ
ಯೋಗ ಶಿಕ್ಷಕರಾಗಿ ಹಿರಿಯ ವಕೀಲ ಎನ್.ಜಯಪ್ರಕಾಶ್ ಎಲ್ಲರಿಗೂ ಸಾಮೂಹಿಕವಾಗಿ, ಸೂರ್ಯ ನಮಸ್ಕಾರ, ಅರ್ಧಚಕ್ರಾಸನ, ಪಾದ ಹಸ್ತಾಸನ, ತ್ರಿಕೋನಾಸನ, ಪರಿವರ್ತಾಸನಾ ತ್ರಿಕೋನಾಸನ, ವಜ್ರಾಸನ, ಶಶಕಾಂಗಾಸನ, ಪಶ್ಚಿಮೊತ್ತಾಸನ, ಮಜಾಂಗಾಸನ, ಅರ್ನೂಸನ, ಸರ್ವಾಂಗಾಸನ, ಹಾಲಾಸನ, ಚಕ್ರಾಸನ, ಕಪಾಲಾಮಾತಿ, ಪ್ರಾಣಾಯಾಮದಂತಹ ಹಲವು ಯೋಗಾಸನಗಳನ್ನು ಕಲಿಸಿದರು.
೧ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸುಕೀತಾ ಅದಾಲಿ, ೩ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ್, ವಕೀಲರ ಸಂಘದ ಅಧ್ಯಕ್ಷ ಎಸ್.ನಾರಾಯಣಪ್ಪ, ಮಾಜಿ ಅಧ್ಯಕ್ಷ ಎಂ.ಅಮರೇಶ್. ವಿ.ಎಸ್.ವೇಣುಗೋಪಾಲ್, ಆರ್.ರಮೇಶ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ನೋಟರಿ ಕೆ.ಸಿ.ಪ್ರಸಾದ್ ಸೇರಿ ನ್ಯಾಯಾಲಯದ ಸಿಬ್ಬಂದಿ, ವಕೀಲರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.