ಉತ್ತರ ಕನ್ನಡ : ಫಸಲ್ ಬಿಮಾ ಯೋಜನೆಯಡಿ 44.34 ಕೋಟಿ ಬಿಡುಗಡೆ

KannadaprabhaNewsNetwork |  
Published : May 23, 2024, 01:05 AM ISTUpdated : May 23, 2024, 02:16 PM IST
Indian Money

ಸಾರಾಂಶ

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯ ರೈತರಿಗೆ ₹44 ಕೋಟಿಗಳಿಗೂ ಅಧಿಕ ಮೊತ್ತದ ವಿಮಾ ಮೊತ್ತ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದೆ.

ಕಾರವಾರ: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2023- 24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಮ್ಮ ಬೆಳೆಗಳಿಗೆ ವಿಮೆ ಪಡೆದಿದ್ದ ಜಿಲ್ಲೆಯ 27,637 ರೈತರಿಗೆ ಒಟ್ಟು ₹44,34,77,748ವಿಮಾ ಮೊತ್ತವು ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದೆ.

ಪ್ರಕೃತಿ ವಿಕೋಪಗಳಿಂದ ತಮ್ಮ ಯಾವುದೇ ಅಧಿಸೂಚಿತ ಬೆಳೆ ವಿಫಲವಾದ ಪಕ್ಷದಲ್ಲಿ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲ ಒದಗಿಸುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಶೇ. 50:50 ನೆರವಿನ ಈ ಯೋಜನೆಯಡಿ, 2023- 24ರಲ್ಲಿ ತಮ್ಮ ಮುಂಗಾರು ಬೆಳೆಗಳಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ವಿಮೆ ಪಡೆದಿದ್ದ ಜಿಲ್ಲೆಯ ರೈತರಿಗೆ ಈ ಪರಿಹಾರದ ಮೊತ್ತ ಬಿಡುಗಡೆಗೊಂಡಿದೆ.

ಜಿಲ್ಲೆಯಲ್ಲಿ ಈ ಯೋಜನೆಯಡಿ ನೊಂದಾವಣೆ ಮಾಡಿಕೊಂಡಿದ್ದ, ಭಟ್ಕಳ ತಾಲೂಕಿನ 271 ರೈತರಿಗೆ ₹1,54,644 , ದಾಂಡೇಲಿ ತಾಲೂಕಿನ 103 ರೈತರಿಗೆ ₹4,63,893, ಹಳಿಯಾಳ ತಾಲೂಕಿನ 8883 ರೈತರಿಗೆ ₹5,35,41,942 , ಹೊನ್ನಾವರ ತಾಲೂಕಿನ 84 ರೈತರಿಗೆ ₹36,671, ಜೋಯಿಡಾ ತಾಲೂಕಿನ 275 ರೈತರಿಗೆ ₹1,29,795, ಕುಮಟಾ ತಾಲೂಕಿನ 57 ರೈತರಿಗೆ ₹50,408, ಮುಂಡಗೋಡ ತಾಲೂಕಿನ 7041 ರೈತರಿಗೆ ₹20,28,49,480, ಸಿದ್ದಾಪುರ ತಾಲೂಕಿನ 421 ರೈತರಿಗೆ ₹3,59,997, ಶಿರಸಿ ತಾಲೂಕಿನ 9123 ರೈತರಿಗೆ ₹17,72,58,214, ಯಲ್ಲಾಪುರ ತಾಲೂಕಿನ 1379 ರೈತರಿಗೆ ₹86,32,698 ಸೇರಿದಂತೆ ಒಟ್ಟು ₹44.34 ಕೋಟಿ ರೂ ಮೊತ್ತವು ರೈತರ ಖಾತೆಗಳಿಗೆ ಜಮೆಗೊಂಡಿದೆ.

ಈ ಯೋಜನೆಯ ಮೂಲಕ ಪ್ರಾಕೃತಿಕ ವಿಪತ್ತು ಸಂಭವಿಸಿದ ವರ್ಷದಲ್ಲಿ ಕೃಷಿಯನ್ನೇ ನಂಬಿಕೊಂಡಿದ್ದ ರೈತರ ಕೃಷಿ ಆದಾಯ ಸ್ಥಿರವಾಗಿರುವಂತೆ ಮಾಡಲು ಈ ಯೋಜನೆಯು ನೆರವಾಗಿದೆ. ಈ ಯೋಜನೆಯು ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘ ಸ್ಫೋಟ, ಸಿಡಿಲು, ಬೆಂಕಿ ಅವಘಡಗಳಿಂದ ಉಂಟಾಗುವ ನಷ್ಟವನ್ನು, ವೈಯಕ್ತಿಕವಾಗಿ ನಿರ್ಧರಿಸಿ, ಬೆಳೆನಷ್ಟ ಪರಿಹಾರವನ್ನು ಇತ್ಯರ್ಥಪಡಿಸುವ ಮೂಲಕ ಆರ್ಥಿಕ ಸಂಕಷ್ಟದಿಂದ ರೈತರನ್ನು ಪಾರು ಮಾಡಲಾಗುತ್ತಿದೆ.

2023- 24ರ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಭತ್ತ, ಮೆಕ್ಕಜೋಳ ಮತ್ತು ಹತ್ತಿ ಬೆಳೆಗಳನ್ನು ಅಧಿಸೂಚಿತ ಬೆಳೆಗಳನ್ನಾಗಿ ಗುರುತಿಸಿದ್ದು, ಜಿಲ್ಲೆಯಲ್ಲಿ ಈ ಬೆಳೆಗಳನ್ನು ಬೆಳೆಯುವ 27,637 ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದರು.

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಯ ರೈತರಿಗೆ ₹44 ಕೋಟಿಗಳಿಗೂ ಅಧಿಕ ಮೊತ್ತದ ವಿಮಾ ಮೊತ್ತ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದೆ. 2023- 24ರಲ್ಲಿ ಮುಂಗಾರು ಕೊರತೆಯಿಂದ ಜಿಲ್ಲೆಯ 11 ತಾಲೂಕುಗಳು ಬರ ಪೀಡಿತ ಎಂದು ಘೋಷಣೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ನಶಿಸುತ್ತಿರುವ ಚಿತ್ರಕಲೆ ಉಳಿಸಿ ಬೆಳೆಸಿ