- ಬೆಮ್ಮನೆ ಸರ್ಕಾರಿ ಶಾಲೆ ನಿವೃತ್ತ ಮುಖ್ಯೋಪಾಧ್ಯಾಯ ರೇವಣಪ್ಪಗೆ ಆತ್ಮೀಯ ಸನ್ಮಾನ
ಧಾರ್ಮಿಕ ಹಾಗೂ ಶಿಕ್ಷಣ ಕ್ಷೇತ್ರದ ಗುರುಗಳಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನವಿದೆ ಎಂದು ಹರಿಹರಪುರದ ಅಭಿನವ ರಮಾನಂದ ಸರಸ್ವತಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ.ಪಿ.ದಯಾನಂದ್ ತಿಳಿಸಿದರು.
ಕೊನೋಡಿಯ ಸಮುದಾಯ ಭವನದಲ್ಲಿ ನಿವೃತ್ತ ಬೆಮ್ಮನೆ ಮುಖ್ಯ ಶಿಕ್ಷಕ ರೇವಣಪ್ಪ ಅವರನ್ನು ಶಾಲೆ ಎಸ್ ಡಿಎಂಸಿ, ಗ್ರಾಮಸ್ಥರು, ಸರ್ಕಾರಿ ನೌಕರರ ಸಂಘ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದಿಂದ ಸನ್ಮಾನಿಸಿದ ಸಂದರ್ಭದಲ್ಲಿ ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕ ರೇವಣಪ್ಪ 29 ವರ್ಷಗಳ ಕಮಲಾಪುರ ಶಾಲೆ ಹಾಗೂ ಬೆಮ್ಮನೆ ಶಾಲೆಯಲ್ಲಿ ಮಾತ್ರ ಸೇವೆ ಸಲ್ಲಿಸಿದ್ದಾರೆ. ಮಕ್ಕಳ ಸಂಖ್ಯೆ ಕಡಿಮೆಯಾಗಿ ಶಾಲೆ ಮುಚ್ಚುವ ಹಂತ ಬಂದಾಗ ಗ್ರಾಮಸ್ಥರ ಸಹಕಾರದಿಂದ ಶಾಲೆ ಉಳಿಸುವ ಕೆಲಸ ಮಾಡಿದ್ದಾರೆ. 2007 ರಲ್ಲಿ ಬೆಮ್ಮನೆ ಶಾಲೆಗೆ ಬಂದಿದ್ದು 18 ವರ್ಷಗಳ ಕಾಲ ಪ್ರಾಮಾಣಿಕತೆಯಿಂದ ಶಾಲೆ ಅಭಿವೃದ್ದಿಗೆ ಶ್ರಮಿಸಿದ್ದಾರೆ ಎಂದರು.ಸೀತೂರು ಗ್ರಾಪಂ ಸದಸ್ಯ ಎಚ್.ಇ.ದಿವಾಕರ್ ಮಾತನಾಡಿ, ಬೆಮ್ಮನೆ ಶಾಲೆಯಲ್ಲಿ 18 ವರ್ಷಗಳ ಕಾಲ ರೇವಣಪ್ಪ ಅವರು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಬೇಕು. ಬೆಮ್ಮನೆ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಈಗ ದೊಡ್ಡ, ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ನೆನಪಿಸಿ ಕೊಂಡರು. ಪ್ರಾಥಮಿಕ ಶಾಲಾ ಭಡ್ತಿ ಮುಖ್ಯೋಪಾಧ್ಯಾಯರ ಸಂಘದ ರಾಜ್ಯ ಉಪಾಧ್ಯಕ್ಷ ಅಶೋಕ್ ಮಾತನಾಡಿ, ಸರ್ಕಾರಿ ನೌಕರರು, ಶಿಕ್ಷಕರು ಸೇವೆಯಲ್ಲಿ ವೃತ್ತಿ ನಿಷ್ಠೆ, ಬದ್ಧತೆ ಉಳಿಸಿಕೊಂಡರೆ ಜನರ ಪ್ರೀತಿ ಗಳಿಸಲು ಸಾಧ್ಯ. ಪ್ರಾಥಮಿಕ ಶಾಲಾ ಶಿಕ್ಷಕರು ಕಲಿಸಿದ ಪಾಠ ಜೀವನದ ಕಡೆಯವರಿಗೂ ಉಳಿಯಲಿದೆ. ಎಸ್ ಡಿಎಂಸಿ ಸದಸ್ಯರು, ಗ್ರಾಮಸ್ಥರು ,ಶಿಕ್ಷಕರು ಒಟ್ಟಾಗಿ ಸರ್ಕಾರಿ ಶಾಲೆಯ ಅಸ್ಮಿತೆ ಉಳಿಸಿಕೊಳ್ಳಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ಬೆಮ್ಮನೆ ಶಾಲೆ ಎಸ್ ಡಿಎಂಸಿ ಅಧ್ಯಕ್ಷ ಕೊನೋಡಿ ಗಣೇಶ್ ವಹಿಸಿದ್ದರು.ಸೀತೂರು ಸಹಕಾರ ಸಂಘದ ಅಧ್ಯಕ್ಷ ಬೆಮ್ಮನೆ ಮೋಹನ್ ಅತಿಥಿಗಳಾಗಿ ಪೂರ್ಣಿಮಾ ರೇವಣಪ್ಪ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಬಿ.ಎಸ್. ಮಂಜುನಾಥ್, ಗ್ರಾಪಂ ಸದಸ್ಯ ವಿಜಯ, ಸಿಆರ್ ಪಿ ಓಂಕಾರಪ್ಪ, ಮುಖಂಡರಾದ ಕೃಷ್ಣಮೂರ್ತಿ, ಚಂದ್ರಶೇಖರ, ಸುಂದರಿ, ಬಿ.ಟಿ.ರಘು, ಶಿಕ್ಷಣ ಸಂಯೋಜಕ ರಂಗಪ್ಪ, ಆರ್.ನಾಗರಾಜ್, ಬೋಗೇಶ್, ನಾಗೇಶ್, ಸುಭಾಷ್ ಮತ್ತಿತರರು ಇದ್ದರು.