ಕನ್ನಡಪ್ರಭ ವಾರ್ತೆ ವಿಜಯಪುರ
ತಾಲೂಕಿನ ನಾಗಠಾಣ ಗ್ರಾಮದ ಉದಯಲಿಂಗೇಶ್ವರ ಹಿರೇಮಠದಲ್ಲಿ ಮಹಾಶಿವರಾತ್ರಿ ನಿಮಿತ್ತ ಉದಯಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜನಮನವನ್ನು ನಿತ್ಯವೂ ಹಸನುಗೊಳಿಸುತ್ತಾ ನಿತ್ಯ ನೂತನ ಬದುಕಿಗೆ ಕಾರಣವಾಗಿ ನೀತಿ- ನಿಯಮ ಪಾಲನೆಗೆ ಉನ್ನತ ಜೀವನ ಮೌಲ್ಯಗಳಿಗೆ ಸದಾ ಮಾರ್ಗದರ್ಶಿಗಳಾದ ಇಲ್ಲಿಯ ಶ್ರೀಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರ ಕಾರ್ಯ ವೈಖರಿ ಬಹು ಶ್ರೇಷ್ಠವಾದುದು ಎಂದು ಹೇಳಿದರು.
ಮಹಾಶಿವರಾತ್ರಿಯ ಈ ಪರ್ವಕಾಲದಲ್ಲಿ ಶಿವನ ಪೂಜೆಯು ಭಕ್ತರ ಕಷ್ಟಗಳನ್ನು ನಿವಾರಿಸಿ, ಇಷ್ಟಾರ್ಥಗಳನ್ನು ಬೇಗನೆ ಪೂರೈಸುವ ಅತ್ಯಂತ ಸರಳ ಆರಾಧನೆಯಾಗಿದೆ. ನಿಷ್ಠೆಯಿಂದ ಶಿವನನ್ನು ಪೂಜಿಸಿದರೆ ಮಾನಸಿಕ ಶಾಂತಿ, ಆತ್ಮಸ್ಥೈರ್ಯ ಹೆಚ್ಚಿ, ಮಾನಸಿಕ ಶುದ್ಧತೆ ನೀಡುತ್ತದೆ. ಹಾಗೆಯೇ ಆಧ್ಯಾತ್ಮಿಕ ಬೆಳವಣಿಗೆಯಾಗಿ ಜ್ಞಾನೋದಯಕ್ಕೆ ಸಹಕಾರಿಯಾಗಿದೆ. ಭಕ್ತಿ, ಶ್ರದ್ಧೆಯಿಂದ ಮಾಡುವ ಸರಳ ಪೂಜೆಯು ಭಗವಾನ್ ಶಿವನಿಗೆ ಆಡಂಬರದ ಪೂಜೆಗಿಂತ ಹೆಚ್ಚು ಪ್ರಿಯವಾಗಿದೆ ಎಂಬುದನ್ನು ಎಲ್ಲರೂ ಅರಿತು ಬದುಕಿನಲ್ಲಿ ಮುನ್ನಡೆಯಬೇಕು ಎಂದರು.ನಾಗಠಾಣದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಈ ಜಾತ್ರಾ ಮಹೋತ್ಸವದಲ್ಲಿ ಸಂಸ್ಕೃತಿಯಿದೆ, ಭಕ್ತಿಯಿದೆ, ಧರ್ಮವಿದೆ, ಸದಾಚಾರವಿದೆ, ಪಾವಿತ್ರ್ಯತೆಯಿದೆ, ಮಂತ್ರಪುಷ್ಪವಿದೆ, ದೇವಗಾನವಿದೆ. ಇವೆಲ್ಲವುಗಳ ಸಮ್ಮಿಲನದಿಂದ ಜೀವನದಲ್ಲಿ ಸಾರ್ಥಕ್ಯವಿದೆ ಎಂಬ ಧೃಢ ನಿಲುವು ಭಕ್ತರ ವಿಶ್ವಾಸದಲ್ಲಿರುತ್ತದೆ. ಉದಯೇಶ್ವರರು ನಾಡಿನಾದ್ಯಂತ ಸಂಚರಿಸಿ ಪ್ರಸ್ತುತ ಸಮಾಜಕ್ಕೆ ಹಾಗೂ ಭಕ್ತರ ಬದುಕಿಗೆ ಬೆಳಕು ಬೀರುವ ಶಕ್ತಿಯಾಗಿದ್ದಾರೆ ಎಂದು ಹೇಳಿದರು.
ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ತಡವಲಗಾದ ರಾಚೊಟೇಶ್ವರ ಶಿವಾಚಾರ್ಯರು ಉಪದೇಶಾಮೃತ ನೀಡಿದರು. ಹಾವಿನಾಳದ ವಿಜಯಮಹಾಂತ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಬೊಮ್ಮನಳ್ಳಿಯ ಗುರುಶಾಂತ ಶಿವಾಚಾರ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶ್ರೀಗಳ ಅಡ್ಡ ಪಲ್ಲಕ್ಕಿ ಮಹೋತ್ಸವ:
ಧರ್ಮಸಭೆಗೂ ಮುನ್ನ ಮದ್ವೀರಶೈವ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರ ಅಡ್ಡ ಪಲ್ಲಕ್ಕಿ ಮಹೋತ್ಸವವು ಗ್ರಾಮದ ನೂತನ ಬಸ್ ನಿಲ್ದಾಣದಿಂದ ಆರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ, ಶ್ರೀಮಠಕ್ಕೆ ಆಗಮಿಸಿತು. ಮಹಿಳೆಯರ ಆರತಿ, ಕುಂಭಮೇಳ ಮತ್ತು ಭಜನೆ, ವಿವಿಧ ವಾದ್ಯಮೇಳ ಅಡ್ಡಫಲ್ಲಕ್ಕಿ ಮಹೋತ್ಸವಕ್ಕೆ ಮೆರುಗು ನೀಡಿತು. ಶಿಕ್ಷಕ ಸಾಹಿತಿ ಸಂತೋಷ ಬಂಡೆ, ಮುಖ್ಯ ಶಿಕ್ಷಕ ಸುರೇಶ ಹೂಗಾರ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮದ ಶರಣಬಸು ಪೂಜಾರಿ, ರಾವುತಪ್ಪ ಬಿಜ್ಜರಗಿ, ವಿಶ್ವನಾಥ ಕಲಗೊಂಡ, ಸುರೇಶ ಕತ್ನಳ್ಳಿ, ಶಂಕರಗೌಡ ಪಾಟೀಲ, ಶ್ರೀಶೈಲ ಕತ್ನಳ್ಳಿ, ರಾಮು ಹಂಡಿ, ಸುಭಾಷ ಮಸಳಿ, ಮುತ್ತು ಕತ್ನಳ್ಳಿ, ಮಹಾದೇವ ಲೋಣಿ, ಸುಭಾಷ ಕತ್ನಳ್ಳಿ, ತಾಯಂದಿರು, ಮಕ್ಕಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.