ಹಾವೇರಿ: ಜಾತಿ, ಧರ್ಮ, ಲಿಂಗ ತಾರತಮ್ಯ ಮೀರಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಿರಿಯರ ನಿಸ್ವಾರ್ಥ ಸೇವೆ ಹಾಗೂ ತ್ಯಾಗವನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವುದು ಅಗತ್ಯ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಇಂದಿನ ಯುವಕರು ಸಿನಿಮಾ ನಟರನ್ನು ನಾಯಕರನ್ನಾಗಿ ಪರಿಗಣಿಸುತ್ತಿರುವುದು ವಿಷಾದನೀಯ. ನಮ್ಮ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಹಾಗೂ ಸಮಾಧಿಗಳನ್ನು ರಥಯಾತ್ರೆ ಮೂಲಕ ಪರಿಚಯಿಸುತ್ತಿರುವುದು ಶ್ಲಾಘನೀಯ ಎಂದರು.
ಬರದೂರಿನ ಶ್ರೀ ಗುರು ರಾಮಲಿಂಗೇಶ್ವರ ಆನಂದಾಶ್ರಮದ ಡಾ. ಅಜಯಾನಂದ ಸ್ವಾಮೀಜಿ, ಶಿಕ್ಷಣ ಪ್ರೇಮಿ ನಿಜಲಿಂಗಪ್ಪ ಬಸೇಗಣ್ಣಿ, ನಿವೃತ್ತ ಶಿಕ್ಷಕ ಹನುಮಂತಗೌಡ ಗೊಲ್ಲರ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪರಿಮಳಾ ಜೈನ್ ಮಾತನಾಡಿ, ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ಶಾಲಾ-ಕಾಲೇಜುಗಳ ಮೂಲಕ ಯುವಜನರಿಗೆ ತಿಳಿಸುವ ಅಗತ್ಯವಿದೆ ಎಂದರು.ಜಗದೀಶ ಮಹಾರಾಜಪೇಟ ಅಧ್ಯಕ್ಷತೆ ವಹಿಸಿದ್ದರು. ಶಶಿಕಲಾ ಅಕ್ಕಿ, ಭಾರತಿ ಯಾವಗಲ್ಲ, ಮಮತಾ ಮಾಗಳ, ಹನುಮಂತಸಿಂಗ್ ರಜಪೂತ, ಡಾ. ಎಸ್.ಬಿ. ಬೆನ್ನೂರ, ಪೂರ್ವಿ ಬೆನ್ನೂರ ಸ್ವಾತಂತ್ರ್ಯ ಗೀತೆಗಳನ್ನು ಪ್ರಸ್ತುತಪಡಿಸಿದರು. ಸತೀಶ ಕುಲಕರ್ಣಿ, ಪರಮೇಶ್ವರಪ್ಪ ಮೈಲಾರ, ಆವರಗೆರೆ ರುದ್ರಮುನಿ, ವೀರಣ್ಣ ಮಹಾರಾಜಪೇಟ, ಕಲ್ಲನಗೌಡ ನರೇಂದ್ರ ಉಪಸ್ಥಿತರಿದ್ದರು. ಗೂಳಪ್ಪ ಅರಳಿಕಟ್ಟಿ ನಿರ್ವಹಿಸಿದರು.