ಕನ್ನಡಪ್ರಭ ವಾರ್ತೆ ಸುರಪುರ
ಮಹಾತ್ಮರು, ಸ್ವಾಮೀಜಿಗಳು, ಪೂಜ್ಯರು ಶಕ್ತಿಗಳಾಗಿದ್ದು, ಸಮುದಾಯ ಉತ್ತಮ ಕಾರ್ಯಗಳತ್ತ ಒತ್ತು ನೀಡಿ ಸತ್ಕಾರ್ಯಗಳನ್ನು ಮಾಡಬೇಕು. ಮಹಾತ್ಮರು ಮಾಡಿರುವ ಕೆಲಸಗಳನ್ನು ಸ್ಮರಿಸಬೇಕು ಎಂದು ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠದ ಪ್ರಭುಲಿಂಗ ಸ್ವಾಮೀಜಿ ನುಡಿದರು.ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಹಾಗೂ ಎಸ್ಸೆಸ್ಸೆಲ್ಸಿ ಪರಿಕ್ಷೆಯಲ್ಲಿ ಕನ್ನಡ ಪ್ರಥಮ ಭಾಷೆ ವಿಷಯದಲ್ಲಿ ಪ್ರತಿಶತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ "ಕನ್ನಡ ಭಾಷಾ ಗುಣಾಗ್ರಣಿ " ಪ್ರಶಸ್ತಿ ಪ್ರದಾನ ಹಾಗೂ ಭೀಮಬಾಯಿ ನಾರಾಯಣಪ್ಪ ಭಂಡಾರೆ ಅವರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಚನಕಾರ, ಸಾಹಿತಿಕಾರನಲ್ಲ. ಸ್ವಾಮೀಜಿಗಳಲ್ಲಿ ಪೂಜ್ಯದ ಶಕ್ತಿಯಿರುತ್ತದೆ. ಅವರು ನುಡಿದಂತೆ ನಡೆಯುತ್ತಿದೆ. ಪೂಜ್ಯ ಶಕ್ತಿಯಿಂದಲೇ ನಾವಿರುವ ಸ್ಥಳದಿಂದಲೇ ಒಳ್ಳೆಯ ಕಾರ್ಯಗಳನ್ನು ಮಾಡುತ್ತೇವೆ. ಮಂತ್ರದಿಂದಲೇ ಒಳಿತನ್ನು ಗಟ್ಟಿ ಮಾಡುತ್ತೇವೆ. ಪೂಜ್ಯರ ಶಕ್ತಿ ಬಂಗಾರವಿದ್ದಂತೆ ಎಂದರು.ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು. ಖಾಸಗಿ ಶಾಲೆಗಳತ್ತ ಪೋಷಕರು ಮುಖ ಮಾಡಿದ್ದಾರೆ. ಸರಕಾರ ಎಲ್ಲ ಸೌಲಭ್ಯ ಒದಗಿಸಿಕೊಟ್ಟರು ಉತ್ತಮ ಫಲಿತಾಂಶ ಬರುತ್ತಿಲ್ಲ. ಶಿಕ್ಷಕರು ಮಕ್ಕಳು ಸರಕಾರಿ ಶಾಲೆಗೆ ಯಾಕೆ ಬರುತ್ತಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಂಬಳಕ್ಕಾಗಿ ಕೆಲಸ ಮಾಡದೆ ವಿದ್ಯಾರ್ಥಿಗಳ ಜೀವನ ರೂಪಿಸುವ ಶಿಕ್ಷಣ ಬೋಧಿಸಬೇಕು ಎಂದು ತಿಳಿಸಿದರು.
ಕನ್ನಡ ಭಾಷೆಯಿಂದ ಜನತೆ ವಿಮುಖವಾಗುತ್ತ ಆಂಗ್ಲ ಭಾಷೆಯತ್ತ ಮೋಹಿತರಾಗುತ್ತಿದ್ದಾರೆ. ಕನ್ನಡ ಭಾಷೆಗೆ ಒತ್ತು ಕೊಟ್ಟಿದ್ದೇ ಆದಲ್ಲಿ ಕನ್ನಡ ಉಳಿಸಿ ಬೆಳೆಯಲು ಸಾಧ್ಯವಾಗುತ್ತದೆ. ಶಿಕ್ಷಕರು ಪರಿಣಾಮಕಾರಿಯಾಗಿ ಕನ್ನಡ ಭಾಷೆ ಮತ್ತು ಇತರೆ ವಿಷಯ ಬೋಧಿಸಿ ಮಕ್ಕಳ ರೂಪಿಸಿಕೊಳ್ಳಲು ನೆರವಾಗಬೇಕು ಎಂದು ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಶರಣಬಸಪ್ಪ ಎಚ್. ಯಾಳವಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತಿ ಮಹಾಂತೇಶ ಗೋನಾಲ, ಕಕ್ಕೇರಾದ ಸಾಹಿತಿ ಬಸಯ್ಯ ಸ್ವಾಮಿ, ಇಸಿಒ ಬಸವರಾಜ ಮಾತನಾಡಿದರು. ಸಂಸ್ಥಾನದ ರಾಜಾ ಪಿಡ್ಡ ನಾಯಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಬ್ಲಿಕ್ ರಿಕ್ರಿಯೇಶನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಪ್ರಶಸ್ತಿ ಪ್ರದಾನಿಸಿದರು.
ಶಿಕ್ಷಕ ಕನಕಪ್ಪ ವಾಗಣಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್. ರಾಠೋಡ್ ಸ್ವಾಗತಿಸಿದರು. ದೇವು ಹೆಬ್ಬಾಳ ನಿರೂಪಿಸಿದರು. ರಜಾಕ್ ಭಾಗವಾನ್ ವಂದಿಸಿದರು.ಕಸಾಪ ನಿಕಟ ಪೂರ್ವ ಅಧ್ಯಕ್ಷ ಸಾಹಿತಿ ಶ್ರೀನಿವಾಸ ಜಾಲವಾದಿ, ಬಸವರಾಜ ಜಮದ್ರಖಾನಿ, ವಕೀಲ ನಾಗರೆಡ್ಡಿ, ದೇವೇಂದ್ರಪ್ಪ, ಮಲ್ಲಿಕಾರ್ಜುನ ಸತ್ಯಂಪೇಟೆ, ನಬಿಲಾಲ್ ಮಕಾಂದರ, ಮಲ್ಲಿಕಾರ್ಜುನ ಕಮತಗಿ, ಶ್ರೀಶೈಲ ಯಂಕಂಚಿ, ಗಂಗಾಧರ ರುಮಾಲ್, ನಾರಾಯಣಪ್ಪ, ಶ್ರೀನಿವಾಸ ಕುಲಕರ್ಣಿ, ಶಿವಕುಮಾರ ಮಸ್ಕಿ ಸೇರಿದಂತೆ ಇತರರಿದ್ದರು.