ಕನ್ನಡಪ್ರಭ ವಾರ್ತೆ ಭಾಲ್ಕಿ
ಪಟ್ಟಣದ ಬಿಕೆಐಟಿ ಕಾಲೇಜು ಆವರಣದಲ್ಲಿ ಗುರುವಾರ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಗೆ ಸ್ವಾಗತಿಸಿ ಮಾತನಾಡಿದರು.
ಸ್ವಾತಂತ್ರ್ಯದ ನಂತರ ಹರಿದು ಹಂಚಿಹೋದ ಕರ್ನಾಟಕದ ಭಾಗಗಳನ್ನು ಸೇರಿಸಿ, ಕನ್ನಡ ಮಾತನಾಡುವ ಎಲ್ಲರನ್ನೂ ಒಗ್ಗೂಡಿಸಿದ ಶ್ರೇಯ ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಮಹನೀಯರಿಗೆ ಸಲ್ಲುತ್ತದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಹಲವು ಭಾಗಗಳು ಈಗಿನ ತೆಲಂಗಾಣ ಅಂದರೆ ಅಂದಿನ ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಗೆ ಸೇರಿಸಲು ಪ್ರಯತ್ನಿಸಲಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಹಿರೇಮಠದ ಲಿಂ. ಡಾ. ಚನ್ನಬಸವ ಪಟ್ಟದ್ದೇವರು, ನಮ್ಮ ತಂದೆ ಭೀಮಣ್ಣ ಖಂಡ್ರೆ, ಆರ್ವಿ ಬಿಡಪ್, ಕಂಬಳಿವಾಲೆ, ಕಾಕನಾಳೆ, ಜಯದೇವಿತಾಯಿ ಲಿಗಾಡೆ, ಮಾದಪ್ಪ ಲೋಖಂಡೆ ಸೇರಿ ಹಲವಾರು ಸ್ವಾತಂತ್ರ್ಯ ಯೋಧರು, ರೈಲು ರೋಕೊ, ರಸ್ತೆ ತಡೆ ಮಾಡುವ ಮೂಲಕ ಮಹಾಜನ ವರದಿ ಬಂದ ನಂತರ ದೆಹಲಿಗೆ ನಿಯೋಗ ತೆಗೆದುಕೊಂಡು ಹೋಗಿ ಈ ಭಾಗವನ್ನು ಕರ್ನಾಟಕದಲ್ಲಿ ಉಳಿಯುವಂತೆ ಮಾಡಿದ್ದಾರೆ. ಹೀಗಾಗಿ ನಾವೆಲ್ಲರೂ ಇಂದು ಅಚ್ಚ ಕನ್ನಡಿಗರಾಗಿರಲು ಅವರ ಸೇವೆ ಅನಂತವಾಗಿದೆ ಎಂದು ಸ್ಮರಿಸಿದರು.ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ, ಕರ್ನಾಟಕದಲ್ಲಿ ಕನ್ನಡ ರಥ ಎಲ್ಲಾ ಕಡೆ ಸಂಚಲನ ಉಂಟು ಮಾಡಿದೆ. ಕನ್ನಡ ವಾತಾವರಣ ನಿರ್ಮಾಣ ಮಾಡಿದೆ. ಇಂತಹ ಕನ್ನಡ ವಾತಾವರಣದ ಸಮಯದಲ್ಲಿ ಕನ್ನಡದ ಸಮಗ್ರ ಅಭಿವೃದ್ಧಿಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ. ನಮ್ಮ ರಕ್ತದ ಕಣ ಕಣದಲ್ಲಿ ಕನ್ನಡತನ ಸೇರಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಇದೇ ವೇಳೆ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು 1.ಕಿ.ಮೀ ಉದ್ದದ ಕನ್ನಡ ಧ್ವಜವನ್ನು ರಸ್ತೆಯುದ್ದಕ್ಕೂ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದರು. ಅದರಂತೆ ವಿವಿಧ ಕಲಾ ತಂಡದವರು ಮೆರವಣಿಗೆಯಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದರು.