ಅಕ್ಷರ ಸಂತ ಆದಿಚುಂಚನಗಿರಿ ಶ್ರೀಗಳ 80ನೇ ಜನ್ಮದಿನದ ಸಂಭ್ರಮಾಚರಣೆ ಕನ್ನಡಪ್ರಭ ವಾರ್ತೆ, ಕಡೂರು
ಅಕ್ಷರ, ಅನ್ನ, ಆರೋಗ್ಯ ವಿಷಯಗಳಿಗೆ ಆದ್ಯತೆ ನೀಡಿ ಸಾವಿರಾರು ಜನರಿಗೆ ಶಿಕ್ಷಣ, ಆರೋಗ್ಯ ಅನ್ನ ನೀಡಿದ ಅಕ್ಷರ ಸಂತ ಡಾ.ಬಾಲಗಂಗಾಧರನಾಥ ಸ್ವಾಮಿ 80ನೇ ಜಯಂತಿ ಆಚರಿಸಲಾಗುತ್ತಿದೆ ಎಂದು ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ಹಾಗು ಪ್ರಾಚಾರ್ಯ ಎಚ್.ಎಸ್. ಸುಮಿತ್ರಾ ಹೇಳಿದರು.ಶನಿವಾರ ಕಡೂರು ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಡಾ.ಬಾಲಗಂಗಾಧರನಾಥ ಸ್ವಾಮಿ ಜಯಂತಿಯಲ್ಲಿ ಮಾತನಾಡಿ, ಶ್ರೀಗಳು ಸಕಲ ಮಾನವ ಕುಲಕ್ಕೆ ಲೇಸನ್ನೆ ಬಯಸಿದ ಮಹಾನ್ ಮಾನವತಾವಾದಿ ಅನ್ನ, ಆರೋಗ್ಯ, ಶಿಕ್ಷಣಕ್ಕೆ ಮೊದಲ ಆಧ್ಯತೆ ನೀಡಿ ಕ್ರಾಂತಿ ಮಾಡಿದವರು. 1945ನೇ ಜ.18ರಂದು ರಾಮನಗರ ಜಿಲ್ಲೆ ಬಿಡಾಡಿ ಗ್ರಾಮದಲ್ಲಿ ಜನ್ಮ ತಾಳಿದ ಇವರು ಬೆಂಗಳೂರಿನ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವಿ ಪಡೆದು ಆಧ್ಯಾತ್ಮಿಕ ಜೀವನ ಆರಿಸಿಕೊಂಡು 19ನೇ ವಯಸ್ಸಲ್ಲಿ ಶ್ರೀ ರಮಾನಂದ ಸ್ವಾಮಿಗಳಿಂದ ದೀಕ್ಷೆ ಪಡೆದು ಮಂಡ್ಯದ ಆದಿಚುಂಚನಗಿರಿ ಕ್ಷೇತ್ರಕ್ಕೆ 71ನೇ ಪೀಠಾಧಿಪತಿ ಯಾಗಿ ನಾಥಪಂಥ ಪರಂಪರೆ ಬೆಳೆಸಿದರು ಎಂದರು.
ಮಠವನ್ನು ಬೆಳೆಸುವ ಮೂಲಕ ರಾಜ್ಯ,ರಾಷ್ಟ್ರ,ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಮಾರು 580 ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜು, ಆಸ್ಪತ್ರೆಗಳನ್ನು ತೆರೆದು ಸಮಾಜಮುಖಿ ಕೆಲಸ ಮಾಡಿದ 2013ರ ಜನವರಿಯಲ್ಲಿ ನಿಧನರಾದರು. ಶ್ರೀಗಳ ಅವಿರತ ಸೇವೆಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್, ಭಾರತ ಸರ್ಕಾರ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಇಂತಹ ಸಂತರ ಜಯಂತಿ ಆಚರಣೆಯಿಂದ ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸುವುದೇ ನಾವು ಅವರಿಗೆ ನೀಡುವ ಗೌರವ ಎಂದರು.ಕಾಲೇಜಿನ ಪ್ರಾಚಾರ್ಯ ಬೊಮ್ಮಿನಾಯುನಿ ಸುರೇಶ್, ಸವಿತಾ, ಹನುಮಂತಪ್ಪ, ಬಸವರಾಜ್, ಉಪನ್ಯಾಸಕರು, ಸಿಬ್ಬಂದಿ ಮತ್ತಿತರರು ಇದ್ದರು.18ಕೆಕೆಡಿಯು1.ಕಡೂರು ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಡಾ.ಬಾಲಗಂಗಾಧರ ನಾಥ ಸ್ವಾಮೀಜಿ 80ನೇ ಜನ್ಮದಿನ ಆಚರಿಸಲಾಯಿತು. ಸಂಸ್ಥೆಯ ಮುಖ್ಯಸ್ಥರಾದ ಸುಮಿತ್ರಾ ಮತ್ತು ಉಪನ್ಯಾಸಕರು ಇದ್ದರು.