-ಚಿತ್ರದುರ್ಗ ಬಾಲಕರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕಂಪ್ಯೂಟರ್ ತರಗತಿಗೆ ಚಾಲನೆ । ಗುತ್ತಿಗೆದಾರ ಸಂಘದ ಆರ್.ಮಂಜುನಾಥ್ ಅಭಿಮತ
ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಬಾಲಕರ ಸರ್ಕಾರಿ ಜೂನಿಯರ್ ಕಾಲೇಜ್ 75 ವರ್ಷ ಪೂರೈಸುತ್ತಿದ್ದು, ಜಿಲ್ಲೆಯಲ್ಲಿಯೇ ಅತ್ಯಂತ ಹಳೇ ಕಾಲೇಜು ಎಂಬ ಹೆಗ್ಗಳಿಕೆ ಪಡೆದಿದೆ. ಕಾಲೇಜಿನ ಜೀರ್ಣೋದ್ದಾರಕ್ಕೆ ಶ್ರಮಿಸುವುದು ಅಗತ್ಯ ಎಂದು ಕಾಲೇಜ್ ಅಭಿವೃದ್ಧಿ ಸಮಿತಿ ಸದಸ್ಯ, ಗುತ್ತಿಗೆದಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಮಂಜುನಾಥ್ ಹೇಳಿದರು.ಕಾಲೇಜಿನಲ್ಲಿ ಕಂಪ್ಯೂಟರ್ ವಿಭಾಗ ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆ ಹಿಂದುಳಿದ, ಬಡವರೇ ಹೆಚ್ಚು ಇರುವ ಪ್ರದೇಶ. ಇಲ್ಲಿನ ಬಡ, ಮಧ್ಯಮ ವರ್ಗದ ಪಾಲಿಗೆ ಆಶಾಕಿರಣ ಆಗಿರುವ ಈ ಕಾಲೇಜು ಸಹಸ್ರಾರು ಮಂದಿಗೆ ವಿದ್ಯಾ ದಾನ ಮಾಡಿದೆ. ಇಲ್ಲಿ ಅಕ್ಷರ ಕಲಿತ ನೂರಾರು ಜನರು ಐಎಎಸ್, ಕೆಎಎಸ್ ಸೇರಿ ಅತ್ಯುನ್ನತ ಹುದ್ದೆಗಳಲ್ಲಿದ್ದಾರೆ. ನಾಡಿಗೆ ಈ ಮೂಲಕ ಕೊಡುಗೆ ನೀಡಿ 75 ವರ್ಷದ ಸಂಭ್ರಮದ ಸಮೀಪದಲ್ಲಿರುವ ಈ ಕಾಲೇಜಿನ ಅಭಿವೃದ್ಧಿ ಚಿತ್ರದುರ್ಗ ಜಿಲ್ಲೆಯ ಪ್ರತಿ ವ್ಯಕ್ತಿಯ ಹೊಣೆಗಾರಿಕೆ ಆಗಿದೆ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಡಿಡಿ ಪುಟ್ಡಸ್ವಾಮಿ ಮಾತನಾಡಿ, ರಾಜ್ಯದ ನೂರು ಕಾಲೇಜುಗಳಲ್ಲಿ ಕಂಪ್ಯೂಟರ್ ಕೋರ್ಸ್ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದು, ಜೂನಿಯರ್ ಕಾಲೇಜಿಗೆ ಅವಕಾಶ ಸಿಗಲು ಇಲ್ಲಿನ ಉಪನ್ಯಾಸಕರ ಬದ್ಧತೆಯೇ ಮೂಲ ಕಾರಣ. ಬಹಳಷ್ಟು ಸರ್ಕಾರಿ ಕಾಲೇಜುಗಳಲ್ಲಿ ಫಲಿತಾಂಶ ಕುಸಿತಕ್ಕೆ ಕಾಲೇಜಿಗೆ ನಿರಂತರ ಗೈರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡುವುದೇ ಮೂಲ ಕಾರಣ. ಕಾಲೇಜು ಮುಖ್ಯಸ್ಥರು ಇಲಾಖೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಿದ್ಯಾರ್ಥಿಗಳ ಗೈರು ಪದ್ಧತಿಗೆ ಕಡಿವಾಣ ಹಾಕಲು ಪ್ರತಿ ತಿಂಗಳ ಹಾಜರಿ ಅವಲೋಕಿಸಬೇಕು. ಪಾಲಕರ ಗಮನಕ್ಕೆ ತರಬೇಕು. ಈ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಬೇಕು ಎಂದು ಸೂಚಿಸಿದರು.
ಪ್ರಾಚಾರ್ಯ ಎಚ್.ಬಿ.ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಉಪನ್ಯಾಸಕ ಪ್ರೊ. ಕೃಷ್ಣಪ್ಪ, ನಿವೃತ್ತ ಪ್ರಾಚಾರ್ಯ ನರಸಿಂಹಮೂರ್ತಿ, ಉಪನ್ಯಾಸಕ ದೊಡ್ಡಯ್ಯ, ರವಿಕುಮಾರ್, ರೇಣುಕಾ, ಸಮಿತಿ ಸದಸ್ಯ ಮಹೇಶಬಾಬು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಸನ್
-----