-ನ್ಯಾಮತಿ ಗ್ಯಾಸ್ ಏಜೆನ್ಸಿಗೆ ನುಗ್ಗಿ ಗಲಾಟೆ । ಏಜೆನ್ಸಿ ಪಾಲುದಾರಿಕೆಗೆ ಸಹಿ ಹಾಕಲಿಲ್ಲವೆಂಬ ಕಾರಣ ಆರೋಪ?
ಮಾಜಿ ಸೈನಿಕನಿಗೆ ಸೇರಿದ ಗ್ಯಾಸ್ ಏಜೆನ್ಸಿಗೆ ನುಗ್ಗಿ ಮಾಜಿ ಸೈನಿಕನ ಮೇಲೆ ಹಲ್ಲೆ ಮಾಡಿ, ಪತ್ನಿ, ಪುತ್ರಿ ಹಾಗೂ ಗ್ರಾಹಕರ ಸಮಕ್ಷಮದಲ್ಲೇ ಮಾಜಿ ಸೈನಿಕನ ಮೇಲೆ ಹಲ್ಲೆ ಮಾಡಿ, ದೌರ್ಜನ್ಯ ಎಸಗಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮತ್ತಿತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಒತ್ತಾಯಿಸಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಎ. ಪರಮೇಶ್ವರಪ್ಪ, ನ್ಯಾಮತಿ ಪಟ್ಟಣದಲ್ಲಿ ಮಾಜಿ ಯೋಧ ಎಚ್.ವಿ. ಚಂದ್ರಪ್ಪ ಒಡೆತನದ ವೇದ ಇಂಡಿಯನ್ ಗ್ಯಾಸ್ ಏಜೆನ್ಸಿಗೆ ಆ.18ರಂದು ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಬೆಂಬಲಿಗಲು ನುಗ್ಗಿ, ಹಲ್ಲೆ ಮಾಡಿದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ದೂರು ನೀಡುವ ಜೊತೆಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಸಂಘದಿಂದ ಪ್ರಧಾನ ಮಂತ್ರಿಗಳ ಕಚೇರಿಗೂ ಮನವಿ ಮಾಡಲಿದ್ದೇವೆ ಎಂದರು.ಮಾಜಿ ಸಚಿವ ರೇಣುಕಾಚಾರ್ಯ ತಮ್ಮ ವರ್ತನೆ ಬದಲಾವಣೆ ಮಾಡಿಕೊಳ್ಳಲಿ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ರೇಣುಕಾಚಾರ್ಯ ವಿರುದ್ಧ ಮಾಜಿ ಸೈನಿಕರು ಹೋರಾಟ ನಡೆಸಬೇಕಾಗುತ್ತದೆ. ಜೀವದ ಹಂಗು ತೊರೆದು ಹೋರಾಡಿದ ಸೈನಿಕರ ಬಗ್ಗೆ ರೇಣುಕಾಚಾರ್ಯ ಹಗುರ ಮಾತನಾಡುತ್ತಿರುವುದು ಖಂಡನೀಯ. ಮಾಜಿ ಸೈನಿಕ ಚಂದ್ರಪ್ಪ ಮೇಲೆ ಎಂ.ಪಿ. ರೇಣುಕಾಚಾರ್ಯ ಯಾಕೆ ಹಗೆ ಸಾಧಿಸುತ್ತಿದ್ದಾರೋ ಗೊತ್ತಿಲ್ಲ. ಸೈನಿಕರ ಬಗ್ಗೆ ಅಪಾರ ಗೌರವ ಹೊಂದಿರುವ ಪಕ್ಷದವರಾದ ರೇಣುಕಾಚಾರ್ಯ ತಮ್ಮ ವರ್ತನೆ ತಿದ್ದಿಕೊಳ್ಳಲಿ ಎಂದು ಅವರು ಸಲಹೆ ನೀಡಿದರು.
ಗ್ಯಾಸ್ ಏಜೆನ್ಸಿ ಪಾಲುದಾರಿಕೆಗೆ ಸಹಿ ಮಾಡಲಿಲ್ಲವೆಂಬ ಕಾರಣಕ್ಕೆ ತಮ್ಮ ವಿರುದ್ಧ ರೇಣುಕಾಚಾರ್ಯ ದ್ವೇಷ ಸಾಧಿಸುತ್ತಾ ಬಂದಿದ್ದಾರೆ. ಮಧ್ಯ ಪ್ರಾಚ್ಯದ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ದೇಶವಷ್ಟೇ ಅಲ್ಲ, ವಿದೇಶಗಳಲ್ಲೂ ವ್ಯತ್ಯಾಯವಾಗಿತ್ತು. ಇದೆಲ್ಲಾ ಗೊತ್ತಿದ್ದರೂ, ಗ್ಯಾಸ್ ವಿತರಿಸುತ್ತಿಲ್ಲವೆಂಬ ವಿಚಾರ ಮುಂದಿಟ್ಟುಕೊಂಡು ಗ್ಯಾಸ್ ಏಜೆನ್ಸಿ ಕಚೇರಿಗೆ ನುಗ್ಗಿ ಬಾಗಿಲು ಹಾಕಿ, ಅವಾಚ್ಯ ಶಬ್ದಗಳಿಂದ ತಮಗೆ ನಿಂದಿಸಿದ್ದಾರೆ. ತಮ್ಮ ಪತ್ನಿ, ಪುತ್ರಿ ವಿರುದ್ಧವೂ ಏಕವಚನದಲ್ಲಿ ಮಾತನಾಡಿದ್ದಾರೆ. ನೂಕಾಟ, ತಳ್ಳಾಟದಲ್ಲಿ ತಾವು ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದ ನಂತರ ಅಲ್ಲಿಂದ ರೇಣುಕಾಚಾರ್ಯ ಮತ್ತು ಬೆಂಬಲಿಗರು ಹೇಳದೇ, ಕೇಳದೆ ಕಾಲ್ಕಿತ್ತಿದ್ದರು ಎಂದು ಅವರು ದೂರಿದರು.
ತಮ್ಮ ವಿರುದ್ಧ ರೇಣುಕಾಚಾರ್ಯ ಇದೇ ರೀತಿ ಮಾಡುತ್ತಿರುವುದು ಒಳ್ಳೆಯದಲ್ಲ. ತಮ್ಮ ಕಚೇರಿಗೆ ನುಗ್ಗಿ, ಹಲ್ಲೆ ಮಾಡಿದ ಬಗ್ಗೆ ದೂರು ನೀಡಿದ್ದೇವೆ. ಆದರೆ, ಯಾವುದೇ ಕ್ರಮ ಆಗಿಲ್ಲ ಎಂದರು.
ಸಂತ್ರಸ್ತ ಯೋಧ ಎಚ್.ವಿ.ಚಂದ್ರಪ್ಪ ಪತ್ನಿ ವೇದಾವತಿ, ಸಂಘದ ಗೌರವಾಧ್ಯಕ್ಷ ವಾಸಪ್ಪ, ಎ.ಪರಮೇಶ್ವರಪ್ಪ, ಡಿ.ವಿ. ರಮೇಶ ಜಗತಾಪ್, ಎಂ. ಮಂಜಣ್ಣ, ಜೆ.ಎಚ್. ರಾಜೀವ, ಬೆನಕನಹಳ್ಳಿ ಬಿ.ಜೆ.ಸಿದ್ದೇಶ್ವರಪ್ಪ, ಎಚ್.ಕಡದಕಟ್ಟೆ ಪರಸಪ್ಪ, ಎಚ್. ಹನುಮಂತಪ್ಪ, ಕೊಟ್ರೇಶ ರೆಡ್ಡಿ, ಹನುಮಂತಪ್ಪ, ಎಸ್.ಬಿ. ವೆಂಕಟೇಶ, ಎಚ್. ಆಂಜನೇಯ, ಗಂಗಾಧರ, ಪಿ.ಎಂ.ವೀರೇಶ, ಎಂ. ಮಂಜಪ್ಪ ಇತರರು ಇದ್ದರು.
ಕ್ಯಾಪ್ಷನ್