ಬಿಜೆಪಿ ಸದಸ್ಯತ್ವದಿಂದ ರೇಣು ಉಚ್ಚಾಟಿಸಲಿ: ಹೊನ್ನಾಳಿ ಬಿಜೆಪಿ ಮುಖಂಡರು

KannadaprabhaNewsNetwork |  
Published : Sep 17, 2025, 01:05 AM IST
16ಕೆಡಿವಿಜಿ1, 2-ದಾವಣಗೆರೆಯಲ್ಲಿ ಹೊನ್ನಾಳಿ ತಾಲೂಕು ಬಿಜೆಪಿ ಮುಖಂಡರಾದ ಶಾಂತರಾಜ ಪಾಟೀಲ, ಎ.ಬಿ.ಹನುಮಂತಪ್ಪ ಅರಕೆರೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.  | Kannada Prabha

ಸಾರಾಂಶ

ಪಕ್ಷದ್ರೋಹಿ ಕೆಲಸ ಮಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸುವಂತೆ ಪಕ್ಷದ ರಾಜ್ಯಾಧ್ಯಕ್ಷರು, ಶಿಸ್ತು ಪಾಲನಾ ಸಮಿತಿ ರಾಜ್ಯಾಧ್ಯಕ್ಷರಿಗೆ ಹೊನ್ನಾಳಿ ತಾಲೂಕಿನ ಬಿಜೆಪಿ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪಕ್ಷದ್ರೋಹಿ ಕೆಲಸ ಮಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸುವಂತೆ ಪಕ್ಷದ ರಾಜ್ಯಾಧ್ಯಕ್ಷರು, ಶಿಸ್ತು ಪಾಲನಾ ಸಮಿತಿ ರಾಜ್ಯಾಧ್ಯಕ್ಷರಿಗೆ ಹೊನ್ನಾಳಿ ತಾಲೂಕಿನ ಬಿಜೆಪಿ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹೊನ್ನಾಳಿ ಬಿಜೆಪಿ ಮುಖಂಡರಾದ ಶಾಂತರಾಜ ಪಾಟೀಲ, ಎ.ಬಿ.ಹನುಮಂತಪ್ಪ, ಬಿಜೆಪಿಯಿಂದ ಎಲ್ಲಾ ಅವಕಾಶ, ಅಧಿಕಾರವನ್ನು ಪಡೆದಿರುವ ರೇಣುಕಾಚಾರ್ಯ ಪಕ್ಷದ್ರೋಹಿ ಕೆಲಸ ಮಾಡಿದ್ದು, ತಕ್ಷಣವೇ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟಿಸಬೇಕು ಎಂದರು.

ನ್ಯಾಮತಿ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಜಿ.ವಿಶ್ವನಾಥರನ್ನು ಬಹಿರಂಗವಾಗಿ ಬೆಂಬಲಿಸಿದ ರೇಣುಕಾಚಾರ್ಯರನ್ನು ನಮ್ಮ ಪಕ್ಷದಿಂದ ತೆಗೆದು ಹಾಕಬೇಕು. ಸೆ.14ಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ನಿಷ್ಟಾವಂತ ಕಾರ್ಯಕರ್ತ ಗೋವಿನಕೋವಿಯ ಆರ್.ಪ್ರವೀಣರನ್ನು ಬಿಟ್ಟು, ಇದೇ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ಸಿನ ಜಿಪಂ ಮಾಜಿ ಸದಸ್ಯರೂ ಆದ ಡಿ.ಜಿ.ವಿಶ್ವನಾಥರನ್ನು ರೇಣುಕಾಚಾರ್ಯ ಬೆಂಬಲಿಸಿದ್ದು ಪಕ್ಷ ವಿರೋಧಿ ಚಟುವಟಿಕೆಯಾಗಿದೆ ಎಂದು ದೂರಿದರು.

ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿಯನ್ನು ದುರ್ಬಲಗೊಳಿಸುವ ಹುನ್ನಾರವನ್ನು ರೇಣುಕಾಚಾರ್ಯ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿಗೆ ಹೋಗುವ ತಯಾರಿ ನಡೆಸಿದ್ದಾರೆ. ಈಗಾಗಲೇ ರಾಜ್ಯ ಘಟಕದ ಗಮನಕ್ಕೆ ಈ ವಿಚಾರ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರವೇ ರಾಷ್ಟ್ರೀಯ ನಾಯಕರನ್ನು ದೆಹಲಿಯಲ್ಲಿ ಭೇಟಿ ಮಾಡಿ, ವರಿಷ್ಟರ ಗಮನಕ್ಕೂ ಈ ವಿಚಾರ ತರಲಿದ್ದೇವೆ ಎಂದು ಹೇಳಿದರು.

ಬಿಜೆಪಿ ನನ್ನ ಆತ್ಮ, ನನ್ನ ಆಸ್ತಿ, ನಾನೊಬ್ಬ ಪಕ್ಷದ ಶಿಸ್ತಿನ ಸಿಪಾಯಿ ಅಂತೆಲ್ಲಾ ಯಾವುದೇ ಜವಾಬ್ಧಾರಿ ಇಲ್ಲದಿದ್ದರೂ ರಾಜ್ಯವನ್ನು ಸುತ್ತಾಡುವ ಹವ್ಯಾಸದ ರೇಣುಕಾಚಾರ್ಯ ಪಕ್ಷದಿಂದ ಅನೇಕ ಅಧಿಕಾರಗಳನ್ನೂ ಅನುಭವಿಸಿದವರು. ಈಗ ಪಕ್ಷ ವಿರೋದಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಬಿಜೆಪಿಗೆ ದ್ರೋಹ ಬಗೆಯುತ್ತಿದ್ದಾರೆ. ಬಿಜೆಪಿ ನಿಷ್ಠೆ ಬಗ್ಗೆ ಮಾತನಾಡುವ ರೇಣುಕಾಚಾರ್ಯ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತಿರುತ್ತವೆ. ಕಾಂಗ್ರೆಸ್ಸನ್ನು ರೇಣುಕಾಚಾರ್ಯ ಬೆಂಬಲಿಸುತ್ತಿರುವುದೇನೂ ಹೊಸತಲ್ಲ ಎಂದು ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆಗಿದ್ದುಕೊಂಡೇ ರೇಣುಕಾಚಾರ್ಯ ತಮ್ಮ ಲಗಾನ್ ಟೀಂ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದಕ್ಕೆ ಪೂರಕವಾಗಿ ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ತಮ್ಮ ಪಕ್ಷಕ್ಕೆ ಚುನಾವಣೆಯಲ್ಲಿ ಸಹಕಾರ ನೀಡಿದ್ದರಿಂದಲೇ ಕಾಂಗ್ರೆಸ್ ಗೆದ್ದಿದ್ದಾಗಿ ಈಗಾಗಲೇ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

ಹೊನ್ನಾಳಿ ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರಿಂದ ಸಂಪೂರ್ಣ ಬಹುಮತ ಬಿಜೆಪಿಗೆ ಇದ್ದುದರಿಂದ ಆಯ್ಕೆ ಅನಿವಾರ್ಯವಾಗಿತ್ತು. ಆದರೆ, ಅದೇ ದಿನ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಬಿಜೆಪಿ ಸದಸ್ಯರು ಉಮೇದುವಾರಿಕೆ ಸಲ್ಲಿಸಿದರೂ ಓಟಿಂಗ್ ನಡೆಯುವ ವೇಳೆ ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತಿಗೆ ಬೆಲೆ ಕೊಟ್ಟು, ಸಚಿವರ ಋಣ ತೀರಿಸಲು ಸದಸ್ಯರಿಗೆ ಮತದಾನದಲ್ಲಿ ಭಾಗವಹಿಸದಂತೆ ಹೇಳಿದ್ದರು. ಬೇರೆ ಜಿಲ್ಲೆಗಳಿಗೆ ಹೋಗಿ ಪಕ್ಷ ನಿಷ್ಠೆ ಬಗ್ಗೆ ಮಾತನಾಡುತ್ತಿರುವ ರೇಣುಕಾಚಾರ್ಯ ನಡೆ ಬಗ್ಗೆ ವರಿಷ್ಠರು ಗಮನಿಸಲಿ ಎಂದು ಶಾಂತರಾಜ ಪಾಟೀಲ, ಎ.ಬಿ.ಹನುಮಂತಪ್ಪ ಅರಕೆರೆ ಒತ್ತಾಯಿಸಿದರು.

ಪಕ್ಷದ ಮುಖಂಡರಾದ ಕೆ.ವಿ.ಚನ್ನಪ್ಪ, ಸಿ.ಕೆ.ರವಿ, ಮಂಜಣ್ಣ, ಆರ್.ಪ್ರವೀಣ, ನೆಲಹೊನ್ನೆ ದೇವರಾಜ, ಸೋಗಿಲು ಪ್ರಭು, ಅಜಯ ರೆಡ್ಡಿ, ರಾಜಣ್ಣ, ಸಿದ್ದೇಶ ಇತರರು ಇದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ