ಪೌರಕಾರ್ಮಿಕರಿಗೆ ನೀಡಿರುವ ಸೌಲಭ್ಯದ ಬಗ್ಗೆ ವರದಿ ನೀಡಿ

KannadaprabhaNewsNetwork |  
Published : Jun 28, 2025, 12:18 AM IST
ಪೊಟೊ: 27ಎಸ್‌ಎಂಜಿಕೆಪಿ01ಶಿವಮೊಗ್ಗ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಚತಾ ಕಾರ್ಮಿಕರು ಹಾಗೂ ಪೌರ ಕಾರ್ಮಿಕರ ಕುರಿತಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಚಂದ್ರಕಲಾ ಮಾತನಾಡಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಎಷ್ಟು ಸಫಾಯಿ ಕರ್ಮಚಾರಿಗಳು ಇದ್ದಾರೆ. ಅವರಿಗೆ ಯಾವೆಲ್ಲ ಸೌಲಭ್ಯ ನೀಡಲಾಗಿದೆ ಎಂಬ ಬಗ್ಗೆ ಇನ್ನೆರಡು ದಿನಗಳಲ್ಲಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಚಂದ್ರಕಲಾ ಸೂಚಿಸಿದರು.

ಶಿವಮೊಗ್ಗ: ಜಿಲ್ಲೆಯಲ್ಲಿ ಎಷ್ಟು ಸಫಾಯಿ ಕರ್ಮಚಾರಿಗಳು ಇದ್ದಾರೆ. ಅವರಿಗೆ ಯಾವೆಲ್ಲ ಸೌಲಭ್ಯ ನೀಡಲಾಗಿದೆ ಎಂಬ ಬಗ್ಗೆ ಇನ್ನೆರಡು ದಿನಗಳಲ್ಲಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಚಂದ್ರಕಲಾ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರು ಹಾಗೂ ಪೌರ ಕಾರ್ಮಿಕರ ಕುರಿತಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ 22 ಜನ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳನ್ನು ಗುರುತಿಸಲಾಗಿದೆ. ಆದರೆ ಕ್ಷೇತ್ರ ಭೇಟಿ ಮಾಡಿದಾಗ ಇವರಲ್ಲಿ ಅನೇಕರಿಗೆ ಮನೆ, ಸಾಲ ಇತರೆ ಸೌಲಭ್ಯಗಳು ಸರಿಯಾಗಿ ಸಿಗದೇ ಇರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಇನ್ನು ಎರಡು ದಿನಗಳ ಒಳಗೆ ಗುರುತಿಸಲಾದ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳಿಗೆ ಯಾವೆಲ್ಲ ಸೌಲಭ್ಯಗಳನ್ನು ನೀಡಲಾಗಿದೆ ಎಂದು ವರದಿ ನೀಡಬೇಕು ಎಂದು ತಾಕೀತು ಮಾಡಿದರು.

ಸಫಾಯಿ ಕರ್ಮಚಾರಿಗಳು ಎಂದು ಗುರುತಿಸಿದ 9 ತಿಂಗಳ ಒಳಗೆ ಅವರಿಗೆ ಪುನರ್ವಸತಿ ಸೌಲಭ್ಯಗಳಾದ ವಸತಿ, ಸಾಲ, ಮಕ್ಕಳಿಗೆ ಶಿಕ್ಷಣ ಸೌಲಭ್ಯ, ಕೌಶಲ್ಯಾಭಿವೃದ್ಧಿ ತರಬೇತಿ, ಕಾನೂನಿನ ಸಲಹೆ ಅವಶ್ಯಕತೆ ಇದ್ದಲ್ಲಿ ಅದನ್ನು ನೀಡಬೇಕು. ಆದರೆ, ಜಿಲ್ಲೆಯಲ್ಲಿ ಈ ಎಲ್ಲ ಸೌಲಭ್ಯ ನೀಡಿರುವ ಕುರಿತು ಸಮರ್ಪಕವಾದ ವರದಿ, ಮಾಹಿತಿ, ಅಂಕಿ ಅಂಶಗಳನ್ನು ನೀಡಿಲ್ಲ. ನಿಖರವಾಗಿ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಗುರುತಿಸಲಾದ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು 2 ರಿಂದ 5 ಲಕ್ಷ ರು. ಸಾಲ, ವಿವಿಧ ವಸತಿ ಯೋಜನೆಗಳಿಗೆ ಮನೆ ಕಟ್ಟಿಕೊಳ್ಳಲು ಅವಕಾಶವಿದೆ. ಮ್ಯಾನುಯಲ್ ಸ್ಕ್ಯಾವೆಂಜರ್‌ಗಳಿಗೆ ನೀಡಲಾದ ಸಾಲದ ಮೊತ್ತ ದುರುಪಯೋಗವಾಗಬಾರದು. ಕ್ಷೇತ್ರ ಭೇಟಿ ವೇಳೆ ಸಾಲ ಸದ್ಬಳಕೆ ಕುರಿತು ಸರಿಯಾದ ಮಾಹಿತಿ ಒದಗಲಿಲ್ಲ. ಸಾಲ ಸದುಪಯೋಗ ಆಗಬೇಕು. ಇದರ ಸದ್ಬಳಕೆ ಕುರಿತು ಸಂಬಂಧಿಸಿದ ಅಧಿಕಾರಿಗಳು ವರದಿ ನೀಡಬೇಕು ಎಂದರು.

ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು, ಲೋಡರ್ಸ್, ಕ್ಲೀನರ್ಸ್, ಡ್ರೈವರ್ಸ್‌ಗಳಿಗೆ ನಿಗದಿತ ವೇಳೆಯೊಳಗೆ ವೇತನ ಪಾವತಿಸಿ, ವೇತನ ಸ್ಲಿಪ್ ನೀಡಬೇಕು. ಪಿಎಫ್ ಮತ್ತು ಇಎಸ್‌ಐ ಮೊತ್ತ ಸರಿಯಾಗಿ ಕಟಾವಣೆಯಾಗುತ್ತಿದೆಯೇ ಎಂದು ಖಾತ್ರಿಪಡಿಸಿಕೊಳ್ಳಬೇಕು. ಮಾಸ್ಟರ್ ಆರೋಗ್ಯ ತಪಾಸಣೆ ಕಾಲ ಕಾಲಕ್ಕೆ ಮಾಡಿಸಬೇಕು. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್, ವೇತನ ಪ್ಯಾಕೇಜ್ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ತಿಳಿಸಿದರು.

ಏಜೆನ್ಸಿಗಳು ಪೌರಕಾರ್ಮಿಕರಿಗೆ ಅಗತ್ಯವಾದ ಸಮವಸ್ತ್ರ, ಗಮ್ ಬೂಟ್, ಕೈಗವಸು, ಮಾಸ್ಕ್ ಮತ್ತು ಇತರೆ ಸುರಕ್ಷಣಾ ಪರಿಕರಗಳನ್ನು ಸಮರ್ಪಕವಾಗಿ ನೀಡಬೇಕು. ವಾರ್ಡ್ ನಂ 21 ಸೇರಿದಂತೆ ಕೆಲವೆಡೆ ಇಂದು ಕ್ಷೇತ್ರಭೇಟಿ ಮಾಡಿದಾಗ ಪೌರಕಾರ್ಮಿಕರು ಸಮವಸ್ತ್ರ, ಗ್ಲೋವ್ಸ್ ಇತರೆ ಸುರಕ್ಷತಾ ಪರಿಕರ ಧರಿಸದೇ ಇರುವುದು ಕಂಡುಬಂತು. ಆದ್ದರಿಂದ ಆರೋಗ್ಯ ನಿರೀಕ್ಷಕರು ಮತ್ತು ಮೇಸ್ತ್ರಿಗಳು ಸುರಕ್ಷತಾ ಪರಿಕರಗಳನ್ನು ಧರಿಸುವಂತೆ ಪ್ರೇರೇಪಿಸಬೇಕು. ಏಜೆನ್ಸಿಗಳು ಮತ್ತು ಪೌರಸಂಸ್ಥೆಗಳು ಧರಿಸುವುದನ್ನು ಕಡ್ಡಾಯಗೊಳಿಸಬೇಕು. ಇಲ್ಲವಾದಲ್ಲಿ ಅನೇಕ ಆರೋಗ್ಯದ ಸಮಸ್ಯೆಗಳು ಉಂಟಾಗಿ ಗಂಭೀರವಾಗಿ ಪರಿಣಿಮಿಸುತ್ತವೆ ಎಂದು ಎಚ್ಚರಿಕೆ ನೀಡಿದರು.

ಡಿಯುಡಿಸಿ ಪಿ.ಡಿ.ರಂಗಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 11 ನಗರ ಸ್ಥಳೀಯ ಸಂಸ್ಥೆಗಳಿವೆ. 1074 ಪೌರಕಾರ್ಮಿಕರ ಹುದ್ದೆ ಮಂಜೂರಾಗಿದ್ದು, 194 ಪುರುಷ ಮತ್ತು 237 ಮಹಿಳೆ ಖಾಯಂ ಪೌರ ಕಾರ್ಮಿಕರು, 196 ನೇರಪಾವತಿ ಕಾರ್ಮಿಕರಿದ್ದಾರೆ. ಲೋಡರ್ಸ್/ಡ್ರೈವರ್‌ ಮತ್ತು ಕ್ಲೀನರ್ 50 ಜನ ಖಾಯಂ ಮತ್ತು 551 ಹೊರಗುತ್ತಿಗೆಯಲ್ಲಿದ್ದಾರೆ. 139 ಹುದ್ದೆ ನೇಮಕಾತಿಯಾಗದೇ ಬಾಕಿ ಇದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ, ಜಿ.ಪಂ ಉಪಕಾರ್ಯದರ್ಶಿ ಜಯಲಕ್ಷ್ಮಿ, ಆಯೋಗದ ಅಧಿಕಾರಿ ರಾಘವೇಂದ್ರ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಜಿಲ್ಲೆಯಲ್ಲಿ ಪೌರಕಾರ್ಮಿಕರಿಗೆ ವಸತಿ ಒದಗಿಸುವ ಗೃಹಭಾಗ್ಯ ಯೋಜನೆ 2016ರಲ್ಲಿ ಆರಂಭವಾಗಿದ್ದು ತುಂಬಾ ವಿಳಂಬವಾಗುತ್ತಿದೆ. ಆದ್ದರಿಂದ ವಸತಿ ಕಾಮಗಾರಿಯನ್ನು ಚುರುಕುಗೊಳಿಸಿ ಶೀಘ್ರದಲ್ಲೇ ಮನೆಗಳನ್ನು ಹಂಚಿಕೆ ಮಾಡಬೇಕು. ನೇರಪಾವತಿ ಮತ್ತು ಹೊರಗುತ್ತಿಗೆ ಕಾರ್ಮಿಕರಿಗೂ ಗೃಹಭಾಗ್ಯ ಯೋಜನೆ ಸೌಲಭ್ಯ ನೀಡಬೇಕು. ಹೊರಗುತ್ತಿಗೆ ಕಾರ್ಮಿಕರನ್ನು ನೇರ ಪಾವತಿ ವ್ಯಾಪ್ತಿಗೆ ತರಬೇಕು ಹಾಗೂ ಕಾರ್ಮಿಕರ ಸಿಂಗಾಪುರ ಪ್ರವಾಸ ಕೂಡ ವಿಳಂಬವಾಗುತ್ತಿದ್ದು ಶೀಘ್ರದಲ್ಲೇ ವ್ಯವಸ್ಥೆ ಮಾಡಬೇಕು.

- ಗೋವಿಂದಪ್ಪ, ಜಿಲ್ಲಾ ಪೌರಕಾರ್ಮಿಕ ಸಂಘದ ಅಧ್ಯಕ್ಷ.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ