ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭೂಮಾಪನ ಇಲಾಖೆಯಲ್ಲಿನ ಸಿಬ್ಬಂದಿ ಇಲಾಖೆ ಸಹಾಯಕ ನಿರ್ದೇಶಕಿ ಬಿ.ಮೇಘನ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಮಿನಿ ವಿಧಾನ ಸೌಧದ ಕಚೇರಿ ಆವರಣದಲ್ಲಿ ಮೇಘನ ಅವರನ್ನು ಭೇಟಿ ಮಾಡಿದ ನೌಕರರು, ಸರ್ಕಾರದಿಂದ ಸಿಗುವ ವಿವಿಧ ಭದ್ರತಾ ಸೇವೆಗಳ ಜೊತೆ ಸಮಾನ ವೇತನ ನೀಡಬೇಕು ಎಂದು ಮನವಿ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.
ಪೋಡಿ ಮುಕ್ತ ಗ್ರಾಮ, ಈ ಸ್ವತ್ತು, ನ್ಯಾಯಾಲಯದ ಆದೇಶ, ಕೆರೆ ಕಟ್ಟೆ ಅಳತೆ ಇತರೆ ಅಳತೆ ಸೇರಿದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಭೂ ಮಾಪಕರು ರಾಜ್ಯ ಸಂಘದ ನಿರ್ದೇಶನದ ಮೇರೆಗೆ ಸಹಾಯಕ ನಿರ್ದೇಶಕರಿಗೆ ಮನವಿ ಮಾಡಿದರು.ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು. ತಾಲೂಕಿನಲ್ಲಿ ಸುಮಾರು 25 ಮಂದಿ ಪರವಾನಾಗಿ ಭೂ ಮಾಪಕರಿದ್ದು, ಸರ್ಕಾರಿ ಭೂ ಮಾಪಕರು ಮಾಡುವ ಎಲ್ಲಾ ಕೆಲಸಗಳನ್ನು ನಾವು ಮಾಡುತ್ತೇವೆ. ಆದರೆ, ವೇತನದಲ್ಲಿ ಸಾಕಷ್ಟು ತಾರತಮ್ಯ ತೋರುತ್ತಿರುವ ಸರ್ಕಾರ ಕೆಲಸಕ್ಕೆ ತಕ್ಕಂತೆ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಹಾಗೂ ಖಾಸಗಿ ಜಾಗವನ್ನು (ಜಮೀನನ್ನು) ಪರವಾನಗಿ ಭೂ ಮಾಪಕರು ಅಳತೆ ನಿರ್ವಹಿಸುತ್ತಿರುತ್ತೇವೆ. ಆದರೆ, ಸರ್ಕಾರ ಪ್ರತಿ ಕಡತಕ್ಕೆ 1,200 ರು. ಮಾತ್ರ ನೀಡುತ್ತಿದೆ. ಅಳತೆಯಾದ ಕಡತಕ್ಕೆ ಮಾತ್ರ ಹಣ ಬರುತ್ತಿದ್ದು, ಅಳತೆಯಾಗದಿದ್ದಲ್ಲಿ ಯಾವುದೇ ರೀತಿಯ ಹಣ ಬರುವುದಿಲ್ಲ. ಆದ್ದರಿಂದ ಪರವಾನಗಿ ಭೂ ಮಾಪಕರ ಜೀವನ ಅತಂತ್ರವಾಗಿದೆ ಎಂದರು.ಮುಂದಿನ ದಿನಗಳಲ್ಲಿ ಸರ್ಕಾರ ನಮಗೆ ಭದ್ರತೆ ಕಲ್ಪಿಸಿ ಕೊಡದಿದ್ದಲಿ ರಾಜ್ಯ ಸಂಘದ ಅಪ್ಪಣೆ ಮೇರೆಗೆ ಕೆಲಸ ಸ್ಥಗಿತಗೊಳಿಸಿ ನಮಗೆ ನ್ಯಾಯಸಿಗುವ ವರಗೆ ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಈ ವೇಳೆ ಪರವಾನಗಿ ಭೂ ಮಾಪಕರಾದ, ರಾಧೇಗೌಡ, ನಂಜುಂಡೇಗೌಡ, ಪರಮೇಶ, ಸಂತೋಷ, ದರ್ಶನ್ ನಾಯಕ್, ಮಾರಪ್ಪ, ನಿಸರ್ಗ, ಉಮಾಮಹೇಶ್ವರಿ, ರಮೇಶ್ ಸುರೇಶ್ ಸೇರಿದಂತೆ ಇತರೆ ಭೂ ಮಾಪಕರು ಇದ್ದರು.