ಕನ್ನಡಪ್ರಭ ವಾರ್ತೆ ಪಾವಗಡ
ಜೆಜೆಎಂ ಕಾಮಗಾರಿ ನಡೆಸಿರುವ ಗುತ್ತಿಗೆದಾರರ ಪೂರ್ತಿ ಹಣ ಬಿಡುಗಡೆ ಮಾಡಬೇಕು ಹಾಗೂ ಮುಂದಿನ ದಿನಗಳಲ್ಲಿ ಸಿಸಿ ಹಣ ತಡೆ ಹಿಡಿಯಬಾರದು ಎಂದು ಆಗ್ರಹಿಸಿ ಜಿಲ್ಲಾ ಗುತ್ತಿಗೆದಾರರ ಸಂಘದಿಂದ ತುಮಕೂರು ಜಿಪಂ ಬಳಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.ಮಂಗಳವಾರ ಕೆಡಿಪಿ ಸಭೆಗೆ ಆಗಮಿಸಿದ್ದ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಗುತ್ತಿಗೆದಾರರು, ಜೆ.ಜೆ.ಎಂ.ಕಾಮಗಾರಿಯಲ್ಲಿ ಸಿ.ಸಿ.ಹಣ ತುಮಕೂರು ಜಿಲ್ಲೆಯಲ್ಲಿ ಮಾತ್ರ ತಡೆ ಹಿಡಿಯಲಾಗುತ್ತಿದೆ. ಬೇರೆ ಜಿಲ್ಲೆಗಳಲ್ಲಿ ಸಿ.ಸಿ.ಹಣ ತಡೆ ಮಾಡಿಲ್ಲ. ಆದ್ದರಿಂದ ತುಮಕೂರು ಜಿಲ್ಲೆಯ ಜೆ.ಜೆ.ಎಂ. ಕಾಮಗಾರಿಯ ಗುತ್ತಿಗೆದಾರರಿಗೆ ಸಮಸ್ಯೆಯಾಗಿದ್ದು ಅತಿ ಜರೂರಾಗಿ ಸಿ.ಸಿ. ಹಣ ಬಿಡುಗಡೆ ಗೊಳಿಸಬೇಕು. ಜೆ.ಜೆ.ಎಂ.ಕಾಮಗಾರಿಯನ್ನು ಗುತ್ತಿಗೆದಾರರು ಸಕಾದಲ್ಲಿ ಮುಗಿಸಿದ್ದರೂ ಇ.ಓ.ಟಿ. ಹಾಗೂ ವರ್ಕ್ಸ್ ಸ್ಲಿಪ್ ಜಿಲ್ಲಾ ಪಂಚಾಯಿತಿಯಲ್ಲಿ ಅನುಮೋದನೆ ನೀಡದೆ ಪದೇ ಪದೇ ವಾಪಸ್ ನೀಡಿ ಸಮಯ ವಿಳಂಬ ಮಾಡುತ್ತಿದ್ದಾರೆ. ವರ್ಷಗಳೇ ಕಳೆದರೂ ಇ.ಓ.ಟಿ. ಹಾಗೂ ವರ್ಕ್ಸ್ ಸ್ಲಿಪ್ ಅನುಮೋದನೆಗೊಳ್ಳದೆ ಗುತ್ತಿಗೆದಾರರಿಗೆ ಫೈನಲ್ ಬಿಲ್ ಮಾಡಿಕೊಡುವಲ್ಲಿ ಸತಾಯಿಸುತ್ತಿರುವ ಪರಿಣಾಮ ತೀವ್ರ ಸಮಸ್ಯೆ ಎದುರಾಗಿದೆ. ಜೆ.ಜೆ.ಎಂ.ಕಾಮಗಾರಿಯ ಇ.ಓ.ಟಿ.ಗೆ ಯಾವುದೇ ದಂಡ ಹಾಕದೆ ಫೈನಲ್ ಮಾಡಿಕೊಡಬೇಕು. ಪಾವಗಡ ಹಾಗೂ ಜಿಲ್ಲೆಯ ಜೆ.ಜೆ.ಎಂ. ಕಾಮಗಾರಿಯನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರು ಸಾಲ ತಂದು ಬಡ್ಡಿ ಕಟ್ಟಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪುತ್ತಿದ್ದಾರೆ ಎಂದು ಸಚಿವರ ಬಳಿ ಅಳಲು ತೋಡಿಕೊಂಡರು.
ಸ್ಥಳದಲ್ಲಿದ್ದ ಜಿಪಂ ಸಿಇಒ ಪ್ರಭು ಅವರಿಂದ ವಿವರ ಪಡೆದ ಸಚಿವ ಡಾ.ಜಿ.ಪರಮೇಶ್ವರ್ ಅವರು ಬಿಲ್ಲು ವಿಳಂಬ ಧೋರಣೆ ಕುರಿತು ತೀವ್ರ ಅಸಮಾಧಾನ ಹೊರಹಾಕಿ ಸಾಲ ಸೋಲ ಮಾಡಿ ಜೆಜೆಎಂ ಕಾಮಗಾರಿ ನಿರ್ವಹಿಸಿರುತ್ತಾರೆ. ಸಮಯಕ್ಕೆ ಸರಿಯಾಗಿ ಬಿಲ್ ಆಗದೇ ತಡೆಹಿಡಿದರೆ ಗುತ್ತಿಗೆದಾರರ ಪಾಡೇನು. ಕೂಡಲೇ ಜೆಜೆಎಂ ಕಾಮಗಾರಿಯ ಹಣ ಬಿಡುಗಡೆ ಹಾಗೂ ಇತರೆ ಸಮಸ್ಯೆ ಬಗ್ಗೆ ಪರಿಶೀಲಿಸಿ ಗುತ್ತಿಗೆದಾರರಿಗೆ ಅನುಕೂಲ ಕಲ್ಪಿಸುವಂತೆ ಜಿಪಂ ಸಿಇಒಗೆ ಆದೇಶಿಸಿದರು.