ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಕ್ಯಾಂಪಸ್ಗೆ ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಯಪ್ಪ ಕ್ಯಾಂಪಸ್ ಎಂದು ನಾಮಕರಣ ಮಾಡುವಂತೆ ಅಲ್ಲಾರಂಡ ರಂಗಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಮನವಿ ಮಾಡಿದರು.
ಮಡಿಕೇರಿ : ಮಡಿಕೇರಿಯ ಫೀ.ಮಾ ಕೆ.ಎಂ ಕಾರ್ಯಪ್ಪ ಕಾಲೇಜಿನ ಕ್ಯಾಂಪಸ್ಗೆ ಅದೇ ಕಾಲೇಜು ಸ್ಥಾಪನೆಯ ರೂವಾರಿಗಳಾದ ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಯಪ್ಪ ಕ್ಯಾಂಪಸ್ ಎಂದು ನಾಮಕರಣ ಮಾಡುವಂತೆ ಅಲ್ಲಾರಂಡ ರಂಗಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಮನವಿ ಮಾಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೀ.ಮಾ ಕಾರ್ಯಪ್ಪ ಕಾಲೇಜಿನ ಸ್ಥಾಪನೆಗೆ ಪಂದ್ಯಂಡ ಬೆಳ್ಯಪ್ಪ ಅವರು ಸಾಕಷ್ಟು ಶ್ರಮಿಸಿದ್ದಾರೆ. ಸ್ವಾತಂತ್ರ್ಯ ನಂತರ 1948ರಿಂದಲೇ ಕೊಡಗಿನಲ್ಲಿ ಪ್ರಥಮ ದರ್ಜೆ ಕಾಲೇಜಿನ ಸ್ಥಾಪನೆಯ ಅಗತ್ಯತೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಕಾಲೇಜು ಆರಂಭಕ್ಕೆ ಕಾರಣಕರ್ತರಾಗಿದ್ದಾರೆ. ಕಾಲೇಜಿಗೆ ಫೀ.ಮಾ ಕೆ.ಎಂ ಕಾರ್ಯಪ್ಪ ಅವರ ಹೆಸರಿರುವ ಬಗ್ಗೆ ಯಾವುದೇ ತಕರಾರಿಲ್ಲ. ಕಾಲೇಜಿನ ಕ್ಯಾಂಪಸ್ಗೆ ಪಂದ್ಯಂಡ ಬೆಳ್ಯಪ್ಪ ಅವರ ಹೆಸರಿಡುವುದು ಸೂಕ್ತ ಎಂದು ಹೇಳಿದರು.
ರಾಜ್ಯಪಾಲರು, ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು, ಕೊಡಗಿನ ಶಾಸಕದ್ವಯರು, ಕೊಡಗು ವಿಶ್ವವಿದ್ಯಾನಿಲಯದ ಕುಲಪತಿಗಳು ಹಾಗೂ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಿಗೆ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಕೊಡಗು ವಿವಿ ಕುಲಪತಿಗಳಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಅಲ್ಲಾರಂಡ ವಿಠಲ ನಂಜಪ್ಪ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.